
ರಾಣೆಬೆನ್ನೂರು: ನಗರದಲ್ಲಿ ಸೋಮವಾರ ಸಂಜೆ ಗುಡುಗು ಸಿಡಿಲು ಮಿಶ್ರಿತ ಮಳೆ ಒಂದು ತಾಸಿಗೂ ಹೆಚ್ಚುಕಾಲ ಸುರಿಯಿತು. ಎಂ.ಜಿ.ರಸ್ತೆ, ಹಳೆ ತರಕಾರಿ ಮಾರುಕಟ್ಟೆಯಲ್ಲಿ ಮಳೆ ನೀರು ರಸ್ತೆ ಮೇಲೆಲ್ಲ ಹರಿಯಿತು. ಎರಡು ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಕೈಕೊಟ್ಟಿತ್ತು. ನಗರದ ವಿವಿಧ ಕಡೆ ಮರಗಿಡಗಳು ಮುರಿದು ಬಿದ್ದವು.
ಎಂಜಿನಿಯರಿಂಗ್ ಕಾಲೇಜು ಬಳಿ 4.45ಕ್ಕೆ ಮಳೆ ಪ್ರಾರಂಭವಾಗಿದ್ದು 6 ಗಂಟೆವರೆಗೂ ಬಾರಿ ಮಳೆ ಬಿಟ್ಟು ಬಿಡದೇ ಸುರಿಯಿತು. ಕೆಲವೆಡೆ ಸಿಡಿಲು ಬಡಿಯಿತು.
ಸ್ಟೇಶನ್ ರಸ್ತೆಯಲ್ಲಿ ರೈಲ್ವೆ ಪ್ರಯಾಣಿಕರು ವಿವಿಧ ಗ್ರಾಮಗಳಿಗೆ ಹೋಗುವವರು ಮಳೆಯಲ್ಲಿಯೇ ಬಸ್ ನಿಲ್ದಾಣಕ್ಕೆ ತೆರಳಿದರು. ದೇವರಗುಡ್ಡ ರಸ್ತೆಯಲ್ಲಿ ದೊಡ್ಡ ಮಳೆ ಗಾಳಿಗೆ ಮರ ಬಿದ್ದು ಕೆಲವು ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ನಗರಸಭೆ ಸಿಬ್ಬಂದಿ ಕೂಡಲೇ ಧಾವಿಸಿ ಮರ ಕಡಿದು ಜೆಸಿಬಿಯಿಂದ ಎತ್ತಿ ಹಾಕಿದ ಮೇಲೆ ಸುಗಮ ಸಂಚಾರಕ್ಕೆ ಅನುಕೂಲವಾಯಿತು.
ಸಿದ್ಧೇಶ್ವರನಗರದಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳಾದ ಎಸ್.ವೈ. ಸಂದೀಮನಿ, ಚಿಕ್ಕೇಶ ಎಂ.ಎಸ್.ಕಡೂರ, ಮಂಜುನಾಥ ಕೆಂಚರಡ್ಡಿ ಭೇಟಿ ನೀಡಿದ್ದರು.
ತಾಲ್ಲೂಕಿನ ಕರೂರು ಗ್ರಾಮದಲ್ಲಿ ಮೂರು ಆಡುಗಳು ಸತ್ತಿದ್ದು ಘಟನಾ ಸ್ಥಳಕ್ಕೆ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಪರಮೇಶ ಹುಬ್ಬಳ್ಳಿ ಭೇಟಿ ನೀಡಿದರು.
ಮನೆ ಮೇಲೆ ಬಿದ್ದ ಮರ
ರಾಣೆಬೆನ್ನೂರು: ತಾಲ್ಲೂಕಿನ ಮಾಕನೂರ ಗ್ರಾಮದಲ್ಲಿ ಸೋಮವಾರ ಸಂಜೆ ಸುರಿದ ಬಾರಿ ಮಳೆಗಾಳಿಗೆ ಹನುಮಂತಪ್ಪ ಬ. ಸಾರ್ಥಿ ಹಾಗೂ ಹೂವಕ್ಕ ಸಾರ್ಥಿ ಎಂಬುವವರ ಮನೆಯ ಮೇಲೆ ದೊಡ್ಡ ಮರವೊಂದು ಉರುಳಿ ಬಿದ್ದ ಪರಿಣಾಮ ಎರಡು ಮನೆಗಳು ಹಾನಿಗೊಂಡಿದ್ದು, ದಾನಮ್ಮ ಎಂಬ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಬ್ಯಾಡಗಿ: ತಂಪೆರೆದ ಮಳೆ
ಬ್ಯಾಡಗಿ: ಬಿಸಿಲಿನ ತಾಪದಿಂದ ಬಸವಳಿದ ಪಟ್ಟಣದ ಜನತೆಗೆ ಸೋಮವಾರ ಸಂಜೆ ಸುರಿದ ಮಳೆ ತಂಪೆರೆಯಿತು. ಮುಂಜಾನೆ ಮೋಡ ಕವಿದ ವಾತಾವರಣವಿದ್ದರೂ ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪ ಹೆಚ್ಚಾಯಿತು.
ಸಂಜೆ ರಭಸದ ಗಾಳಿ ಹಾಗೂ ಗುಡುಗು ಸಹಿತ ತುಂತುರು ಮಳೆ ಆರಂಭಗೊಂಡು ಸುಮಾರು ಅರ್ಧ ಗಂಟೆಯವರೆಗೆ ಸುರಿಯಿತು. ಹತ್ತಾರು ದಿನಗಳಿಂದ ಬಿಡುವು ನೀಡಿದ ಮಳೆ ಸೋಮವಾರ ರಭಸದಿಂದ ಸುರಿಯಿತು.
ಹಿರೇಕೆರೂರ: ಭಾರಿ ಗಾಳಿ–ಮಳೆ
ಹಿರೇಕೆರೂರ: ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ. ಕಳಗೊಂಡ ಗ್ರಾಮದ ಸುತ್ತಮುತ್ತ ಮಧ್ಯಾಹ್ನ ದಿಢೀರ್ ಭಾರಿ ಗಾಳಿಯ ಜೊತೆಯಲ್ಲಿ ರಭಸದ ಮಳೆ ಸುರಿದು ರೈತರಲ್ಲಿ ಹುಮ್ಮಸ್ಸು ಮೂಡಿಸಿತು.
ಸಂಜೆಯ ವೇಳೆಗೆ ಹಂಸಭಾವಿ ಹೋಬಳಿಯಲ್ಲಿ ಉತ್ತಮ ಮಳೆಯಾಯಿತು. ಮಳೆಯ ಜೊತೆಯಲ್ಲಿಯೇ ಗಾಳಿ, ಗುಡುಗು–ಸಿಡುಲುಗಳ ಆರ್ಭಟ ಕೂಡ ಜೋರಾಗಿತ್ತು.
ಸಿಡಿಲು ಬಡಿದು ಮಹಿಳೆ ಸಾವು
ರಾಣೆಬೆನ್ನೂರು: ಸಿದ್ಧೇಶ್ವರನಗರದಲ್ಲಿ ಸೋಮವಾರ ಸಂಜೆ ಸುರಿದ ಗುಡುಗು–ಸಿಡಿಲಿನ ಮಳೆಗೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದು ಯುವಕನೊಬ್ಬ ತೀವ್ರವಾಗಿ ಗಾಯಗೊಂಡ ಘಟನೆ ಜರುಗಿದೆ.
ಸಾವನ್ನಪ್ಪಿದ ಮಹಿಳೆಯನ್ನು ಚಂದ್ರಕಲಾ ಪುಟ್ಟಪ್ಪ ಹುಲ್ಲತ್ತಿ (24) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಮನೋಜ ನಾರಾಯಣಪ್ಪ ಐರಣಿ (15) ಎಂದು ಗುರುತಿಸಲಾಗಿದ್ದು ಅವರನ್ನು ದಾವಣಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಡುಗಳ ಸಾವು: ತಾಲ್ಲೂಕಿನ ಕರೂರು ಗ್ರಾಮದಲ್ಲಿ ಬಸವಂತಪ್ಪ ಅಜ್ಜನವರ ಹೊಲದಲ್ಲಿ ತರುಬಿದ ಶಿವಪ್ಪ ಮಹದೇವಪ್ಪ ಮಡಿವಾಳರ ಎಂಬುವರಿಗೆ ಸೇರಿದ 3ಆಡುಗಳಿಗೆ ಸಿಡಿಲು ಬಡಿದು ಸಾವನ್ನಪ್ಪಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.