ADVERTISEMENT

ವೀರಮಹೇಶ್ವರನ ಜಾತ್ರೆಗೆ ಮಹಿಳೆಯರ ಪ್ರವೇಶ ನಿಷಿದ್ಧ!

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 9:19 IST
Last Updated 23 ಡಿಸೆಂಬರ್ 2013, 9:19 IST

ರಟ್ಟೀಹಳ್ಳಿ : ಸಮೀಪದ ಕುಡಪಲಿ ಗ್ರಾಮ ಶರಣರ ಸುಕ್ಷೇತ್ರವೆ ನಿಸಿದೆ. ಕುಮದ್ವತಿ ನದಿ ತೀರದಲ್ಲಿರುವ ಶ್ರೀ ವೀರಮಹೇಶ್ವರ ಗದ್ದುಗೆ ಗ್ರಾಮದ ಆರಾಧ್ಯ ದೇವರು. ಗ್ರಾಮದಲ್ಲಿ ಮೊದಲ ಪೂಜೆ ವೀರಮಹೇಶ್ವರನಿಗೆ. ಪ್ರಸ್ತುತ 8 ದಿನಗಳವರೆಗೆ ನಡೆಯುವ ಜಾತ್ರೆ 130 ವರ್ಷಗಳಿಂದ ನಡೆದುಕೊಂಡು ಬಂದಿದ್ದು ಇಂದಿಗೂ ತನ್ನದೇ ಆದ ವೈಭವವನ್ನು ಉಳಿಸಿ ಕೊಂಡು ಬಂದಿದೆ.

ಮಹೇಶ್ವರ ಮುನಿಯು ಕೊಟ್ಟ ಶಿಲೆಯನ್ನು ಸ್ಥಾಪಿಸಿ ಗದ್ದುಗೆ ನಿರ್ಮಿಸಿ ಪೂಜೆ ಮಾಡಿಕೊಂಡು ಬಂದಿರುವುದು ವಾಡಿಕೆ. ಅನೇಕ ದಶಕಗಳ ಹಿಂದೆ ಗ್ರಾಮದ ಒಳಗೆ ಕೂಡಾ ದೇವಸ್ಥಾನ ನಿರ್ಮಿಸಲಾಗಿದೆ. ಆದರೆ  ವೀರಮಹೇಶ್ವರ ಗದ್ದುಗೆ ಇರುವ ಸ್ಥಳದಲ್ಲಿ ಮಹಿಳೆಯರಿಗೆ ಪ್ರವೇಶ ನಿಷಿದ್ಧ. ಅವರು ಹೊರಗೆ ನಿಂತುಕೊಂಡೇ ದೇವರಿಗೆ ಕೈಮುಗಿಯು ತ್ತಾರೆ. ಈ ಪದ್ಧತಿಯ ಹಿಂದೆ ಯಾವುದೇ ಐತಿಹಾಸಿಕ ದಾಖಲೆಗಳು ಇಲ್ಲ.  ಆದರೆ ಹಿರಿಯರು ಪಾಲಿಸಿಕೊಂಡು ಪದ್ಧತಿಯನ್ನು ಉಳಿಸಿ ಬೆಳೆಸಿಕೊಂಡು ಬರಲಾಗುತ್ತಿದೆ. ದೇವಸ್ಥಾನದ ಅನತಿ ದೂರ ದಲ್ಲಿ ಕುಮದ್ವತಿ ಪಂಚಮುಖಿ ಯಾಗಿ ಹರಿಯುತ್ತಿರುವುದು ವಿಶೇಷವಾಗಿದೆ.

ವೀರಮಹೇಶ್ವರ ಜಾತ್ರೆಯ ವಿಶೇಷವೆಂದರೆ ಗದ್ದುಗೆ ಎದುರಿಗೆ ನೆಲದಲ್ಲಿ ಮಡಿಕೆಯಲ್ಲಿ ಮುಚ್ಚಿಟ್ಟ ಪ್ರಸಾದ ರೂಪದಲ್ಲಿರುವ ಅನ್ನ. ಪ್ರತಿ ವರ್ಷ ಜಾತ್ರೆಯ ಸಂದರ್ಭದಲ್ಲಿ ಈ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಆ ಅನ್ನವನ್ನು ಮುಂದಿನ ವರ್ಷದ ಜಾತ್ರೆಯಲ್ಲಿ ಹೊರ ತೆಗೆಯಲಾಗುತ್ತದೆ. ವಿಚಿತ್ರವೆಂದರೆ ಅನ್ನ ಕೆಡದೇ ಹಾಗೆಯೇ ತಾಜಾತನದಿಂದ ಕೂಡಿರುತ್ತದೆ. ಅದನ್ನೇ ಪ್ರಸಾದ ರೂಪದಲ್ಲಿ ಜನತೆಗೆ ಹಂಚಲಾಗುತ್ತದೆ. ಈ ಹಿಂದಿನ ವರ್ಷ ನೆಲದಲ್ಲಿ ಹೂತಿಟ್ಟ ಅನ್ನವನ್ನು ಈ ವರ್ಷದ ಜಾತ್ರೆಯಲ್ಲಿ ದಿನಾಂಕ 24 ರಂದು ಹೊರ ತೆಗೆಯಲಾಗುತ್ತದೆ. ಅಂದು ಪುರುಷರಿಗೆ ಮಾತ್ರ ವಿತರಿಸಿದರೆ 26 ರಂದು ಗುರುವಾರ ಮಹಿಳೆಯರಿಗೆ ಸೇರಿ ಮತ್ತೆ ಎಲ್ಲರಿಗೂ ಮಹಾಪ್ರಸಾದ ರೂಪದಲ್ಲಿ ವಿತರಿಸಲಾ ಗುತ್ತದೆ. ಸರ್ವ ಮತದವರು ಈ ಜಾತ್ರೆಯಲ್ಲಿ ಭಾಗವಹಿಸುವುದು ವಾಡಿಕೆ. ಮೊದಲ ದಿನ ಮಾತ್ರ ಕೇವಲ ಪುರುಷರು ಮಾತ್ರ ಭಾಗವಹಿಸುತ್ತಾರೆ. ವೀರಮಹೇಶ್ವರ ಗ್ರಾಮವನ್ನು ಪ್ರವೇಶಿಸುವುದರೊಂದಿಗೆ ಮಹಿಳೆಯರು ಮಕ್ಕಳು ಜಾತ್ರೆಯಲ್ಲಿ ಭಾಗವಹಿಸುತ್ತಾರೆ.

ಜಾತ್ರಾ ಕಾರ್ಯಕ್ರಮ
ಇದೇ 23 ರಂದು ವೀರಮಹೇಶ್ವರ ಗದ್ದುಗೆಗೆ ರುದ್ರಾಭಿಷೇಕ, 24 ರಂದು ವೀರಮಹೇಶ್ವರ ದೇವರ ಗುಗ್ಗುಳ, ಉತ್ಸವ, ಮಹಾಪ್ರಸಾದ ವಿನಿಯೋಗ. 25 ರಂದು ಬಂಡಿ ಉತ್ಸವ, 26 ರಂದು ವೀರಮಹೇಶ್ವರ ದೇವರ ಪಲ್ಲಕ್ಕಿ ಉತ್ಸವ ಮೆರವಣಿಗೆಯೊಂದಿಗೆ ಪುರ ಪ್ರವೇಶ,  ಎಲ್ಲ ಮಹಿಳೆಯರಿಗೂ ಸೇರಿ ವಿಶೇಷ ಪ್ರಸಾದ ವಿನಿಯೋಗ,  27 ರಂದು ಹಿಂದೂ–ಭಾವೈಕ್ಯತೆಯ ಮೆಹಬೂಬ್‌ ಸುಭ್ಹಾನಿ ಉರುಸ್‌,   ಇದೇ 20 ರಿಂದ 24 ರವರೆಗೆ ತೂಫಾನ್ ಕ್ರಿಕೆಟ್ ಕ್ಲಬ್ ವತಿಯಿಂದ ಟೂರ್ನಿ 26 ರಂದು ಗುರುವಾರ ರಾತ್ರಿ ಮಾರುತಿ ಕಲಾ ವೈಭವ ನಾಟ್ಯ ಸಂಘದಿಂದ ‘ತಂಗಿಯ ಕಣ್ಣೀರು‘ ನಾಟಕ ಪ್ರದರ್ಶನ, 28 ರಂದು ಹೋರಿ ಬೆದರಿಸುವ ಕಾರ್ಯಕ್ರಮಗಳು ಗ್ರಾಮದ ಮಠಾಧೀಶರ ನೇತೃತ್ವದಲ್ಲಿ ಜರುಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.