ರಾಣೆಬೆನ್ನೂರು: ಸರ್ಕಾರದ ಮಹತ್ವಾಂಕ್ಷಿ ಯೋಜನೆಗಳಲ್ಲಿ ಒಂದಾದ ರಾಜೀವಗಾಂಧಿ ಚೈತನ್ಯ ಯೋಜನೆ ಗ್ರಾಮೀಣ ಪ್ರದೇಶದಲ್ಲಿನ ನಿರುದ್ಯೋಗಿ ಯುವ ಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ನೆರವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಬಸನಗೌಡ ಪಾಟೀಲ ಹೇಳಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯಸೌಧದಲ್ಲಿ ಬುಧವಾರ ಏರ್ಪಡಿಸಿದ್ದ ರಾಜೀವಗಾಂಧಿ ಚೈತನ್ಯ ಯೋಜನೆಯಡಿ ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅರ್ಹ ಫಲಾನುಭವಿಗಳ ಪಟ್ಟಿಯನ್ನು ಗ್ರಾಮಸಭೆಗಳಲ್ಲಿ ಅಂತಿಮಗೊಳಿಸಲಾಗುವುದು. ಫಲಾನುಭವಿಗಳು ತಮ್ಮ ಆಸಕ್ತಿಗನುಗುಣವಾಗಿ ಸ್ವ ಉದ್ಯೋಗವನ್ನು ಕೈಗೊಳ್ಳಬಹುದು.
ಜಂಟಿ ಹೊಣೆಗಾರಿಕೆಯ ಗುಂಪಿಗೆ ₨ ೫0 ಸಾವಿರ ಅಥವಾ ಪ್ರತಿ ಸದಸ್ಯರಿಗೆ ₨ ೧೦ ಸಾವಿರ ಸಹಾಯಧನವನ್ನು ಪಡೆಯಬಹುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ. ಕೃಷ್ಣಮೂರ್ತಿ ತಿಳಿಸಿದರು. ಪ್ರತಿ ವ್ಯಕ್ತಿಗೆ ಬ್ಯಾಂಕಿನಿಂದ ಒಂದು ಲಕ್ಷದ ವರೆಗೂ ಸಾಲದ ಅವಕಾಶವಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರಿ ಅಥವಾ ಸರ್ಕಾರೇತರ ಸಂಸ್ಥೆಯ ಮೂಲಕ ತರಬೇತಿ ಕೊಡಿಸಿ ಬ್ಯಾಂಕುಗಳೊಂದಿಗೆ ಸಂಪರ್ಕ ಏರ್ಪಡಿಸಿ ಸ್ವ-ಉದ್ಯೋಗ ಪ್ರಾರಂಭಿಸಲು ಸಾಲ ದೊರಕಿಸಿ ಕೊಡಲಾಗುವುದು ಎಂದರು. ತರಬೇತಿ ಫೆಬ್ರುವರಿ ೨೦ರವರೆಗೆ ನಡೆಯಲಿದ್ದು ಪ್ರತಿದಿನ ಒಂದೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿರುದ್ಯೋಗಿಗಳುತರಬೇತಿ ಪಡೆಯುವರು. ವ್ಯವಸ್ಥಾಪಕ ಬಸವರಾಜ ಶೀಡೇನೂರ, ಸಿ.ಎಸ್.ಬಣಕಾರ, ಶಿವಾನಂದ ಕಮ್ಮಾರ ತರಬೇತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.