
ರಾಣೆಬೆನ್ನೂರು: ‘ರಾಜ್ಯ ಸರ್ಕಾರದ ಹಾಗೂ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವವರು, ವಿದ್ಯಾರ್ಥಿಗಳಿಗೆ ಎರಡನೇ ತಾಯಿ ಇದ್ದಂತೆ. ಅವರು ತಮ್ಮ ಜವಾಬ್ದಾರಿ ಅರಿತು ಕಾಯಕದ ಮೂಲಕ ಗೌರವ ಹೆಚ್ಚಿಸಿಕೊಳ್ಳಬೇಕು’ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರದ ಶಿಕ್ಷಕರ ಸಭಾಭವನದಲ್ಲಿ ‘ಅಕ್ಷರ ದಾಸೋಹ ಕಾರ್ಯಕ್ರಮದ ಯಶಸ್ವಿ ಅನುಷ್ಠಾನ’ ಕುರಿತು ಅಡುಗೆ ಸಿಬ್ಬಂದಿಗಾಗಿ ಶನಿವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಡುಗೆ ಸಿಬ್ಬಂದಿಗೆ ₹ 1000 ಹೆಚ್ಚುವರಿ ಗೌರವಧನ ಮಾಡಿದ್ದಾರೆ. ಅಡುಗೆ ಸಹಾಯಕರು ನಿವೃತ್ತಿ ಹೊಂದಿದವರಿಗೆ ಇಡಿಗಂಟು ಮೂಲಕ ಒಂದೇ ಬಾರಿಗೆ 15 ವರ್ಷ ಸೇವೆ ಸಲ್ಲಿಸಿದವರಿಗೆ ₹ 30 ಸಾವಿರ ಹಾಗೂ 15 ವರ್ಷ ಮೇಲ್ಪಟ್ಟು ಸೇವೆ ಮಾಡಿದವರಿಗೆ ₹ 40 ಸಾವಿರ ನೀಡುವ ವ್ಯವಸ್ಥೆ ಕಲ್ಪಿಸಿದ್ದಾರೆ’ ಎಂದರು.
‘ಬಡವರಿಗೆ ಹಣ ನೀಡಿದರೆ ಬಿಜೆಪಿಯವರಿಗೆ ತೊಂದರೆಯಾಗುತ್ತದೆ. ಗ್ಯಾರಂಟಿಗಳಿಂದ ಕುಟುಂಬಗಳು ಬಡತನ ರೇಖೆಯಿಂದ ಮೇಲೆ ಬಂದಿವೆ. ಮಹಿಳೆಯರು ಗ್ಯಾರಂಟಿ ಯೋಜನೆಗಳಿಂದ ಸಬಲರಾಗಿದ್ದಾರೆ‘ ಎಂದರು.
ಐಎಫ್ಟಿಯು ರಾಜ್ಯ ಘಟಕದ ಅಧ್ಯಕ್ಷ ಹೊನ್ನಪ್ಪ ಮರಿಯಮ್ಮನವರ, ಬಿ.ಆರ್.ಸಿ ಮಂಜುನಾಥ ನಾಯಕ್ ಮಾತನಾಡಿದರು.
ಅಗ್ನಿಶಾಮಕ ದಳದವರು, ಎಲ್ಲಿಯಾದರೂ ಬೆಂಕಿ ಅವಘಡ ಸಂಭವಿಸಿದರೆ ಅದನ್ನು ನಿಯಂತ್ರಿಸುವುದು ಹೇಗೆ ಎಂಬ ಬಗ್ಗೆ ಪಾತ್ಯಕ್ಷಿಕೆ ನೀಡಿದರು.
ಪ್ರಭಾಕರ ಚಿಂದಿ, ಲತಾ ಹಿರೇಮಠ, ರಾಜೇಶ್ವರಿ ಪಾಟೀಲ, ಗಂಗಪ್ಪ ನಾಯಕ, ಪ್ರವೀಣ ಕೋರ್ಪಡೆ, ಸಂತೋಷ ಹುಳ್ಳೇರ, ಶಿವಕುಮಾರ ಚವಟಗಿ, ಶಿವಪ್ಪ ಬನ್ನಿಕೋಡ, ಎನ್.ಎನ್.ಅಣ್ಣೇರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.