
ಶಿಗ್ಗಾವಿ: 'ಗ್ರಾಮೀಣ ಕಲೆ, ಕಲಾವಿದರು ನಾಡಿನ ಸಂಪತ್ತು. ಅದನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಹೊಣೆ. ಕಲೆ ಜೀವಂತಿಕೆಗೆ ಶ್ರಮಿಸುವ ಕಲಾವಿದರ ಬೆಳವಣಿಗೆಗೆ ಬೆಂಬಲವಾಗಿ ನಿಲ್ಲಬೇಕು. ನೆಲದ ಸಂಸ್ಕೃತಿ, ಸಂಸ್ಕಾರಗಳಿಂದ ಮೌಲ್ಯಾಧಾರಿತ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ’ ಎಂದು ಕೆಎಂಎಫ್ ನಿರ್ದೇಶಕ ತಿಪ್ಪಣ್ಣ ಸಾತಣ್ಣವರ ಹೇಳಿದರು.
ತಾಲ್ಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ಸೋಮವಾರ ಬಸವಣ್ಣ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ’ಧರ್ಮದ ದೀಪ ಹಚ್ಚಿದ ರೈತ’ ಎಂಬ ಸಾಮಾಜಿಕ ನಾಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಗ್ರಾಮೀಣ ಕಲೆಯಲ್ಲಿ ನೈಜತೆ ಹೆಚ್ಚಾಗಿರುತ್ತದೆ. ಹೀಗಾಗಿ ಜನಮೆಚ್ಚುಗೆಗೆ ಪಾತ್ರರಾಗಲು ಸಾಧ್ಯವಾಗಿದೆ. ಸ್ಥಳೀಯ ಕಲಾವಿದರಲ್ಲಿನ ಪ್ರತಿಭೆ ಅನಾವರಣಗೊಳ್ಳಲು ಕಾರಣವಾಗಿದೆ. ಹೀಗಾಗಿ ಜಾತ್ರೆ, ಹಬ್ಬಹರಿದಿನಗಳಲ್ಲಿ ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸುವುದು ಮುಖ್ಯ’ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ ಮಾತನಾಡಿ, 'ನಮ್ಮ ಸಂಸ್ಕೃತಿಯನ್ನು ಬೆಳಗುವ ಕಲೆ, ಕಲಾವಿದರ ಬದುಕು ಅಳಿದು ಹೋಗಬಾರದು. ಪ್ರೋತ್ಸಾಹಿಸಬೇಕಿದೆ. ಆ ನಿಟ್ಟಿನಲ್ಲಿ ಕಲಾವಿದರಿಗೆ ಬೆಳಕಾಗುವ ಕಾರ್ಯ ಅವಶ್ಯವಾಗಿದೆ’ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಖ್ವಾಜಾ ಮೈನುದ್ದೀನ ಹುಲಗೂರ ಮಾತನಾಡಿ, ‘ಜಾತ್ರೆಗಳು ದೇವರನ್ನು ಸ್ಮರಿಸುವ ಹಬ್ಬಗಳಾಗಬೇಕು. ಎಲ್ಲ ಸಮುದಾಯದವರೂ ಒಗ್ಗೂಡಿ ಆಚರಿಸುವ ಹಬ್ಬದ ಜಾತ್ರೆಗಳಾಗಬೇಕು. ನಾಟಕಗಳು ಸ್ಥಳೀಯ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕು’ ಎಂದರು.
ಮಾಜಿ ಸಂಸದ ಮಂಜುನಾಥ ಕುನ್ನೂರ ಉದ್ಘಾಟಿಸಿದರು. ರೇವಣಸಿದ್ದಯ್ಯ ಹಿರೇಮಠ, ಮೃತ್ಯುಂಜಯ ಒಡೆಯರಮಠ ಸಾನ್ನಿಧ್ಯ ವಹಿಸಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಈರಮ್ಮ ಹಡಪದ, ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಕಂಬಾಳಿಮಠ, ಮುಖಂಡರಾದ ಎಂ.ಎಚ್. ಪಠಾಣ್, ಪರಮೇಶ ಶೆಟ್ಟರ್, ರಮೇಶ ಸಾತಣ್ಣವರ, ಫಕ್ಕೀರೇಶ ಮಾಸ್ತರ್ ಕೊಂಡಾಯಿ, ಮಂಜುನಾಥ ಕಾರಡಗಿ, ಈಶ್ವರ ಹರಕುಣಿ, ಅನೀಲ ಸಾತಣ್ಣವರ, ಫಕ್ಕೀರಯ್ಯ ಹಿರೇಮಠ, ಚಿನ್ನಪ್ಪಶೆಟ್ಟರ್ ಕುಂದಗೋಳ, ಬಸಣ್ಣ ಹೊನ್ನಾಪೂರ, ಗಣಪತಿ ಗುಣೋಜಿ, ಶಿವಾನಂದ ವಡವಟ್ಟಿ, ಯಲ್ಲಪ್ಪ ಹಂಚಿನಮನಿ, ಮೌಲಾಸಾಬ್ ತಹಶೀಲ್ದಾರ್, ಫಯಾಜ್ ಸವಣೂರ, ಗಂಗಾಧರ ಗೊರವರ, ಬಸಪ್ಪ ಮಲ್ಲೂರ, ಸತೀಶ ಚೋಟಪ್ಪನವರ, ಖಾಸೀಮ್ ಪಠಾಣ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.