
ಬ್ಯಾಡಗಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಶತಮಾನೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಭಾನುವಾರ ಗಣವೇಷಧಾರಿಗಳ ಪಥ ಸಂಚಲನ ನಡೆಯಿತು.
ಎಸ್ಜೆಜೆಎಂ ತಾಲ್ಲೂಕು ಕ್ರೀಡಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ಸಮಾವೇಷಗೊಂಡ ಗಣವೇಷಧಾರಿಗಳು ಬಳಿಕ ಪಥ ಸಂಚಲನ ಆರಂಭಿಸಿದರು. ಆರ್ಎಸ್ಎಸ್ ಗೀತೆ ಹಾಗೂ ಬ್ಯಾಂಡ್ಸೆಟ್ನೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದರು. ದಾರಿಯದ್ದಕ್ಕೂ ನೀರು ಹಾಕಿ ರಂಗೋಲಿಯ ಚಿತ್ತಾರಗಳಿಂದ ಅಲಂಕರಿಸಲಾಗಿತ್ತು. ಗಣವೇಷಧಾರಿಗಳಿಗೆ ಪುಷ್ಪ ಮಳೆಗರೆದು ಸ್ವಾಗತ ನೀಡಲಾಯಿತು.
ಹಳೆಯ ಪುರಸಭೆ, ನೆಹರೂ ವೃತ್ತ, ಮುಖ್ಯರಸ್ತೆ, ಕಿತ್ತೂರು ಚನ್ನಮ್ಮ, ಸುಭಾಷ ವೃತ್ತದ ಮೂಲಕ ಚಾವಡಿ ರಸ್ತೆ, ದಂಡಿನ ಪೇಟೆ, ಬನಶಂಕರಿ ರಸ್ತೆಯ ಮೂಲಕ ಮತ್ತೆ ತಾಲ್ಲೂಕು ಕ್ರೀಡಾಂಗಣದಲ್ಲಿ ಸಮಾಪನಗೊಂಡಿತು. ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಧಾರವಾಡ ವಿಭಾಗ ಬೌದ್ಧಿಕ ಪ್ರಮುಖ ಗುರುರಾಜ ಕುಲಕರ್ಣಿ ಮಾತನಾಡಿ, ‘ರಾಷ್ಟ್ರೀಯ ಧ್ಯೇಯದೊಂದಿಗೆ ದೇಶದ ಏಕತೆ, ಸ್ವಾಮರಸ್ಯ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವಲ್ಲಿ ಸಂಘ ಪ್ರಮುಖ ಪಾತ್ರವಹಿಸಲಿದೆ’ ಎಂದರು.
‘ಸ್ವಯಂ ಸೇವಕರು ಗೃಹ ಸಂಪರ್ಕ ಅಭಿಯಾನ ಮೂಲಕ ಪಂಚಪರಿವರ್ತನೆ ಸಂದೇಶ ತಲುಪಿಸಬೇಕಿದೆ. ಪ್ರಕೃತಿ, ಕುಟುಂಬ ಜೀವನ, ಸ್ವಾಮರಸ್ಯ ಬದುಕು, ಸ್ವದೇಶ ಜೀವನ, ನಾಗರಿಕ ಕರ್ತವ್ಯಗಳ ಕುರಿತು ಸೇವಕರು ಮನೆಮನೆಗೂ ತೆರಳಿ ತಿಳಿಸಬೇಕಿದೆ’ ಎಂದರು.
ಹಾವೇರಿ ಸಂಘ ಚಾಲಕ ಶ್ರೀಕಾಂತ ಹುಲ್ಮನಿ, ತಾಲ್ಲೂಕು ಸಂಪರ್ಕ ಪ್ರಮುಖ ಮಾಲತೇಶ ಅಂಕಲಕೋಟಿ, ಜಿಲ್ಲಾ ಸೇವಾ ಪ್ರಮುಖ ಸುನಿಲ ತೊಗಟಗೇರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.