ರಾಣೆಬೆನ್ನೂರು: ಮೌಢ್ಯಗಳಿಂದ ಮನುಷ್ಯನನ್ನು ಮುಕ್ತ ಮಾಡುವ ಶಕ್ತಿ ಬಸವ ಧರ್ಮಕ್ಕಿದೆ. ಪ್ರಪಂಚದ ಬದುಕನ್ನೇ ಅರಳಿಸುವ ವಿಶಾಲ ಚಿಂತನೆಯ ಶಕ್ತಿ ಹಾಗೂ ಕುಬ್ಜ ಮನಸ್ಸನ್ನು ದೂರವಾಗಿಸುವ ಶಕ್ತಿಯೂ ಸಹ ಅದಕ್ಕಿದೆ ಎಂದು ದೊಡ್ಡಪೇಟೆ ವಿರಕ್ತಮಠದ ಗುರುಬಸವ ಸ್ವಾಮೀಜಿ ಹೇಳಿದರು.
ಇಲ್ಲಿನ ಎಪಿಎಂಸಿ ರಸ್ತೆಯ ನಾಗಶಾಂತಿ ಉನ್ನತಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ತಾಲ್ಲೂಕು ಘಟಕ ಆಯೋಜಿಸಿದ್ದ ಶರಣ ಸಾಹಿತ್ಯ ಪರಷತ್ ಸಂಸ್ಥಾಪನಾ ದಿನಾಚರಣೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಚನ ಸಾಹಿತ್ಯಕ್ಕೆ ಸುಲಲಿತವಾಗಿ ಜೀವನ ಸಂದೇಶಗಳನ್ನು ಬಿತ್ತರಿಸುವ ಶಕ್ತಿ ಇದೆ. ಇದು ಎಲ್ಲರ ಹೃದಯ ತಟ್ಟಿ ಬದುಕಿನ ಸತ್ಯ ಸಿದ್ದಾಂತಗಳನ್ನು ಅರಿವಿಗೆ ತರುತ್ತದೆ ಎಂದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುತ್ತೂರಿನ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ವಚನ ಸಂದೇಶಗಳನ್ನು ಜಗತ್ತಿನಧ್ಯಂತ ಪಸರಿಸಬೇಕು ಎಂಬ ಹಂಬಲಕ್ಕಾಗಿ ಶರಣ ಸಾಹಿತ್ಯ ಪರಿಷತ್ತನ್ನು ಆರಂಭಿಸಿದರು. ಪ್ರೊ. ಕಾಂತೇಶರೆಡ್ಡಿ ಗೋಡಿಹಾಳ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಹಿರಿಯರಾದ ಶಕುಂತಲಮ್ಮ ಜಂಬಗಿ, ವಾಸಪ್ಪ ಕುಸಗೂರ ಇವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಶಸಾಕ ತಾಲ್ಲೂಕು ಘಟಕದ ಅಧ್ಯಕ್ಷೆ ರಾಜೇಶ್ವರಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ವರ್ತಕ ಬಸವರಾಜ ಪಾಟೀಲ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಗಾಯತ್ರಿ ಕುರವತ್ತಿ, ದಾನೇಶ್ವರಿ ಜಾಗೃತಿ ಅಕ್ಕನ ಬಳಗದ ಅಧ್ಯಕ್ಷೆ ಸುನಂದಮ್ಮ ತಿಳವಳ್ಳಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶಿಗ್ಲಿ, ಜಗದೀಶ ಮಳಿಮಠ, ಎಸ್.ಕೆ.ನೇಶ್ವಿ, ಎಸ್.ಎಚ್.ಪಾಟೀಲ, ನಾಗರತ್ನ ಗುಡಿಹಳ್ಳಿ, ಮಂಜುಳಾ ಮಾಜಿಗೌಡರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.