ಹಾವೇರಿ: ‘ನೆಹರೂ ಕುಟುಂಬವನ್ನು ಹೊಗಳಿದರೆ ಮಾತ್ರ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ಇಲ್ಲವಾದರೆ ಅವರನ್ನು ಆ ಸ್ಥಾನದಿಂದ ಕಿತ್ತು ಬಿಸಾಕುತ್ತಾರೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು.
ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕಹಿರೇಕೆರೂರು ತಾಲ್ಲೂಕು ಬಸರೀಹಳ್ಳಿ ಹೆಲಿಪ್ಯಾಡ್ಗೆ ಶುಕ್ರವಾರ ಬಂದ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
‘ನೆಹರೂ ಮಾಡಿದ ತ್ಯಾಗದಂತೆ ಬಿಜೆಪಿಯ ನಾಯಕರು ಮಾಡಿಲ್ಲ’ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ,ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನ ತ್ಯಾಗದಿಂದ ಸ್ವಾತಂತ್ರ್ಯ ಸಿಕ್ಕಿದೆ. ಅಂದು ಯಾವ ಪಂಗಡ, ರಾಜಕೀಯ ಪಕ್ಷವೂ ಇರಲಿಲ್ಲ. ಬ್ರಿಟಿಷ್ ಆಳ್ವಿಕೆ ವಿರುದ್ಧ ಪ್ರತಿಯೊಬ್ಬರೂ ಹೋರಾಟ ಮಾಡಿದ್ದಾರೆ ಎಂದರು.
ಬಸನಗೌಡ ಯತ್ನಾಳ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿ ಕೇವಲ ಹದಿನೈದು ದಿನಗಳಾಗಿವೆ. ಅವರು ಉತ್ತಮ ಆಡಳಿತ ಕೊಡುತ್ತಾ ಇದ್ದಾರೆ. ಯಾರೋ ಹೇಳಿದರು ಅಂತ ಅವರನ್ನು ಬದಲಾವಣೆ ಮಾಡೋಕೆ ಆಗುವುದಿಲ್ಲ’ ಎಂದರು.
ವಿಜಯೇಂದ್ರ ಮತ್ತು ಬಿಎಸ್ವೈ ಬಗ್ಗೆ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಅವರು ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ.ಆನಂದ್ಸಿಂಗ್ ಅವರಿಗೆ ಅಸಮಾಧಾನವಾಗಿದ್ದು ನಿಜ. ಆದರೆ, ಅವರು ರಾಜೀನಾಮೆ ನೀಡುವುದಿಲ್ಲ ಎಂದರು.
ಬೈರತಿ ಬಸವರಾಜು ಮಾತನಾಡಿ,‘ಮೇಕೆದಾಟು ವಿಚಾರವಾಗಿ ಖಂಡಿತವಾಗಿ ಮುಖ್ಯಮಂತ್ರಿಗಳ ನಿರ್ಣಯಕ್ಕೆ ನಾವು ಬದ್ದರಾಗಿದ್ದೇವೆ. ನಾವು ವಿಶೇಷವಾಗಿ ಯೋಜನೆ ರೂಪಿಸಿ ಬೆಂಗಳೂರಿಗೆ ಕುಡಿಯುವ ನೀರು ತರುತ್ತಿದ್ದೇವೆ.ತಮಿಳುನಾಡು ಎಷ್ಟೇ ವಿರೋಧ ಮಾಡಿದರೂ ನಾವು ಹಿಂದೆ ಸರಿಯುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.