ಹಾನಗಲ್ ಕುಮಾರೇಶ್ವರ ಮಠ
ಹಾವೇರಿ: ಜಿಲ್ಲೆಯ ಹಾನಗಲ್ನಲ್ಲಿರುವ ಕುಮಾರೇಶ್ವರ ಮಠದಲ್ಲಿ ಬಾಂಬ್ ಇರಿಸಿರುವುದಾಗಿ ಶುಕ್ರವಾರ ಬೆದರಿಕೆ ಕರೆ ಬಂದಿದ್ದು, ಇದರಿಂದ ಎಚ್ಚೆತ್ತ ಪೊಲೀಸರು ಬಾಂಬ್ ನಿಷ್ಕ್ರೀಯ ದಳದ ಸಮೇತ ತಪಾಸಣೆ ನಡೆಸಿದರು.
ಪೊಲೀಸ್ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿದ್ದ ಅಪರಿಚಿತನೊಬ್ಬ, ‘ಹಾನಗಲ್ ಕುಮಾರೇಶ್ವರ ಮಠದಲ್ಲಿ ಬಾಂಬ್ ಇರಿಸಲಾಗಿದೆ. ಸದ್ಯದಲ್ಲೇ ಸ್ಫೋಟವಾಗಲಿದೆ’ ಎಂದು ಹೇಳಿದ್ದರು.
ಕರೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಸಹಾಯವಾಣಿ ಸಿಬ್ಬಂದಿ, ಜಿಲ್ಲಾ ಪೊಲೀಸ್ ಎಸ್ಪಿ ಹಾಗೂ ಹಾನಗಲ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ, ಪೊಲೀಸರು ಮಠಕ್ಕೆ ತೆರಳಿ ತಪಾಸಣೆ ಆರಂಭಿಸಿದರು.
ಮಠದ ಪ್ರತಿಯೊಂದು ಸ್ಥಳದಲ್ಲಿಯೇ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತಪಾಸಣೆ ನಡೆಸಿದರು. ಆದರೆ, ಯಾವುದೇ ಅನುಮಾನಾಸ್ಪದ ವಸ್ತುಗಳು ಸಿಗಲಿಲ್ಲ. ಬಳಿಕವೇ, ಇದೊಂದು ಹುಸಿ ಕರೆಯೆಂದು ಘೋಷಿಸಿದರು.
ಬೆದರಿಕೆ ಕರೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಯಾರು ? ಎಂಬುದನ್ನು ಪತ್ತೆ ಮಾಡುತ್ತಿದ್ದಾರೆ.
‘ಮಠದ ಆಸ್ತಿ ವಿಚಾರವಾಗಿ ಎರಡು ಗುಂಪಿನ ನಡುವೆ ಜಟಾಪಟಿ ನಡೆಯುತ್ತಿದ್ದು, ಇದೇ ಕಾರಣದಿಂದ ಕಿಡಿಗೇಡಿಗಳು ಕರೆ ಮಾಡಿರುವ ಸಾಧ್ಯತೆ ಇದೆ’ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.