ಮಂಜುನಾಥ ಕಾಟೇನಹಳ್ಳಿ
ಹಾವೇರಿ: ಜಿಲ್ಲೆಯ ಸವಣೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ವಿದ್ಯಾರ್ಥಿಯೊಬ್ಬರಿಗೆ ಪ್ರವೇಶ ನೀಡಲು ₹ 10 ಸಾವಿರ ಲಂಚ ಪಡೆದ ಆರೋಪದಡಿ ಮುಖ್ಯ ಶಿಕ್ಷಕ ಮಂಜುನಾಥ ಕಲ್ಲಪ್ಪ ಕಾಟೇನಹಳ್ಳಿ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
‘ಸವಣೂರಿನ ಖಾದರಭಾಗ ಓಣಿಯ ನಿವಾಸಿ ಅಕ್ಬರ್ ಅವರು ಲಂಚದ ಬಗ್ಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿ ಆರೋಪಿ ಮಂಜುನಾಥ್ ಕಾಟೇನಹಳ್ಳಿಯನ್ನು ಆತನ ಮನೆಯಲ್ಲಿಯೇ ಬಂಧಿಸಲಾಗಿದೆ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದರು.
‘ದೂರುದಾರ ಅಕ್ಬರ್ ಅವರು ತಮ್ಮ ಮಗನನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ಗೆ ಸೇರಿಸಲು ಮೇ 16ರಂದು ಆರೋಪಿ ಮಂಜುನಾಥ್ನನ್ನು ಭೇಟಿಯಾಗಿದ್ದರು. ಪ್ರವೇಶಾತಿ ನೀಡಬೇಕಾದರೆ ₹ 50 ಸಾವಿರ ಲಂಚ ನೀಡುವಂತೆ ಆರೋಪಿ ಬೇಡಿಕೆ ಇರಿಸಿದ್ದ. ಅಷ್ಟು ಹಣವಿಲ್ಲವೆಂದು ದೂರುದಾರ ಹೇಳಿದ್ದರು. ಚೌಕಾಶಿ ಮಾಡಿದ್ದ ಆರೋಪಿ, ₹ 10 ಸಾವಿರ ಲಂಚ ನೀಡುವಂತೆ ಪಟ್ಟು ಹಿಡಿದಿದ್ದ. ಮುಂಗಡವಾಗಿ ₹ 5,000 ಪಡೆದಿದ್ದ.’
‘ಆರೋಪಿಯ ಲಂಚಕ್ಕೆ ಬೇಸತ್ತು ಅಕ್ಬರ್ ಅವರು ನಮಗೆ ದೂರು ನೀಡಿದ್ದರು. ದೂರುದಾರರನ್ನು ಮೇ 17ರಂದು ಸವಣೂರಿನ ಹಾವಣಗಿ ಪ್ಲಾಟ್ನಲ್ಲಿರುವ ತಮ್ಮ ಮನೆಗೆ ಕರೆಸಿಕೊಂಡಿದ್ದ ಆರೋಪಿ, ಉಳಿದ ₹ 5,000 ಪಡೆದಿದ್ದ. ಇದೇ ಸಂದರ್ಭದಲ್ಲಿ ದಾಳಿ ಮಾಡಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ₹ 5,000 ನಗದನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.