
ಬ್ಯಾಡಗಿ: ‘ದೇವಸ್ಥಾನಗಳು ಮಾನಸಿಕ ನೆಮ್ಮದಿ ನೀಡುವ ಕೇಂದ್ರಗಳಾಗಿವೆ. ಹೀಗಾಗಿ ಭಗವಂತನನ್ನು ಅರಿತಾಗ ಅರಿವಿನ ಜ್ಞಾನ ಉಂಟಾಗುತ್ತದೆ. ಹೀಗಾಗಿ ನಿತ್ಯ ದೇವರ ಸ್ಮರಣೆ ಮಾಡಬೇಕು’ ಎಂದು ಇಲ್ಲಿಯ ಮುಪ್ಪಿನೇಶ್ವರ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಪಟ್ಟಣದ ವಿದ್ಯಾನಗರದ ಪಂಚದೇವರ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ ಮತ್ತು ನವಗ್ರಹ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಧರ್ಮಸಭೆ ಹಾಗೂ ದಾನಿಗಳ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಕಳಸಾರೋಹಣ ಮತ್ತು ನವಗ್ರಹ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆಯನ್ನು ಸಕಲ ವಿಧಿ ವಿಧಾನಗಳಿಂದ ನೆರವೇರಿಸಲಾಯಿತು.
ವರ್ತಕರಾದ ಕುಮಾರಗೌಡ್ರ ಪಾಟೀಲ, ಬಸವರಾಜ ಸುಂಕಾಪುರ, ಬಸವಣ್ಣೆಪ್ಪ ಛತ್ರದ, ಮಲ್ಲಿಕಾರ್ಜುನ ಮೇಲ್ಮುರಿ, ಜಾಗೆಯ ದಾನಿ ಬಸವರಅಜ ಕೊಪ್ಪದ, ಈರಣ್ಣ ಬಣಕಾರ, ಎಂ.ಬಿ.ಅಂಗಡಿ, ಮಲ್ಲಿಕಾರ್ಜುನ ಪ್ಯಾಟಿ, ಕೆ.ಜಿ.ಖಂಡಿಬಾಗೂರ, ಶಿವಣ್ಣ ಕುಡಕೇರ ಇದ್ದರು.
ಕಳಸದ ಮೆರವಣಿಗೆ: ಸಿದ್ದೇಶ್ವರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶನಿವಾರ ಮೆರವಣಿಗೆ ನಡೆಸಲಾಯಿತು. ಗೋಪುರದ ಕಳಸ ಮತ್ತು ನವಗ್ರಹ ಮೂರ್ತಿಗಳನ್ನು ದೇವಸ್ಥಾನಕ್ಕೆ ತಂದ ಬಳಿಕ ಅರ್ಚಕ ವೇದಮೂರ್ತಿ ಮಲ್ಲಿಕಾರ್ಜುನ ಶಾಸ್ತ್ರಿ ಸಮ್ಮುಖದಲ್ಲಿ ಜಲಾಧಿವಾಸ, ದಾನ್ಯಾಧಿವಾಸ ಮತ್ತು ಪುಷ್ಪಾಧಿವಾಸ ನೆರವೇರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.