
ಬ್ಯಾಡಗಿ: ‘ಎಣ್ಣೆ ಕಾಳುಗಳ ಉತ್ಪಾದನೆ ಕಡಿಮೆಯಾದ ಪರಿಣಾಮ ಖಾದ್ಯ ತೈಲವನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ ರೈತರು ಏಕ ಬೆಳೆ ಪದ್ಧತಿ ಬದಲಾಯಿಸಿ, ಪರ್ಯಾಯ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು’ ಎಂದು ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ತಿಳಿಸಿದರು.
ತಾಲ್ಲೂಕಿನ ಅರಬಗೊಂಡ ಗ್ರಾಮದಲ್ಲಿ 2025-26ನೇ ಸಾಲಿನ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಯೋಜನೆಯಡಿ ಶುಕ್ರವಾರ ಹಮ್ಮಿಕೊಂಡಿದ್ದ ಸೂರ್ಯಕಾಂತಿ ಹಾಗೂ ಶೇಂಗಾ ತಳಿಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ‘ನಮ್ಮ ಬೇಡಿಕೆಗೆ ತಕ್ಕಂತೆ ಎಣ್ಣೆ ಕಾಳು ಉತ್ಪಾದನೆ ಆಗುತ್ತಿಲ್ಲ. ಇದರಿಂದ ಬೇರೆ ದೇಶವನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.
ದೇಶಿಯ ಎಣ್ಣೆಕಾಳು ಬೆಳೆಗಳ ಕ್ಷೇತ್ರ ವಿಸ್ತರಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ-ಎಣ್ಣೆಕಾಳು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದರು.
ಕೃಷಿ ಅಧಿಕಾರಿ ನಾಗರಾಜ ಬನ್ನಿಹಟ್ಟಿ ಮಾತನಾಡಿ, ‘ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ದ್ರವ ರೂಪದಲ್ಲಿ ಸಿಗುವ ನ್ಯಾನೋ ಯೂರಿಯಾ ಹಾಗೂ ಡಿಎಪಿ ಗೊಬ್ಬರ ಬಳಸಬೇಕು. ಕೀಟ ಬಾಧೆ ತಡೆಗಟ್ಟಲು ಬೇವಿನ ಬೀಜದ ಕಷಾಯ, ಪ್ರೋಫೆನೋಫಾಸ್ 2 ಮಿ.ಲೀ ಅಥವಾ ಪ್ಲೂಬೆಂಡಿಯಾಮೆಡ್ 39.35 ಎಸ್ಸಿ 0.75 ಮಿ.ಲೀ ಅಥವಾ ಸ್ಟೈನೋಸಾಡ್ 45 ಎಸ್ಸಿ 0.12 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು’ ಎಂದು ತಿಳಿಸಿದರು.
ಈ ವೇಳೆ ನಾಗರಾಜ ದೊಡ್ಡಕುರುಬರ, ಪಕ್ಕೀರಪ್ಪ ಕಿಳ್ಳಿ, ಉಡಚಪ್ಪ ಹರಿಜನ, ಪ್ರಕಾಶ ಬಣಕಾರ, ದ್ಯಾವಪ್ಪ ಬರಡಿ, ಮಲ್ಲಪ್ಪ ಕಾಟೇನಹಳ್ಳಿ, ಮಾಲತೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.