ADVERTISEMENT

ಮನೆಗಣತಿ ಕಾರ್ಯ ಏ.15ರಿಂದ

ಜನಗಣತಿಗೆ ಗಣತಿದಾರರು, ಮೇಲ್ವಿಚಾರಕರನ್ನು ನೇಮಿಸಿ: ಡಿ.ಸಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 16:01 IST
Last Updated 14 ಜನವರಿ 2020, 16:01 IST

ಹಾವೇರಿ: ಜನಗಣತಿ ಕಾರ್ಯ 2021ರ ಫೆಬ್ರುವರಿಯಿಂದ ಆರಂಭಗೊಳ್ಳಿದ್ದು, ಇದಕ್ಕೆ ಪೂರ್ವಭಾವಿಯಾಗಿ ಏ.15ರಿಂದ ಮೇ 29ರವರೆಗೆ ಮನೆಗಣತಿ ಹಾಗೂ ಮಾರ್ಕಿಂಗ್ ಕಾರ್ಯ ಆರಂಭವಾಗಲಿದೆ. ಗಣತಿ ಕಾರ್ಯಕ್ಕೆ ಗಣತಿದಾರರು ಹಾಗೂ ಮೇಲ್ವಿಚಾರಕರ ನೇಮಕಾತಿಯನ್ನು ಮುಂದಿನ ಒಂದು ವಾರದೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನಗಣತಿಯ ಪೂರ್ವ ಸಿದ್ಧತೆ ಕುರಿತುಮಂಗಳವಾರ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಡಿಜಿಟಲ್‌ ಮೋಡ್ ಮೂಲಕ ಗಣತಿ ಕಾರ್ಯ ನಡೆಸಲಾಗುತ್ತದೆ. ತಾಂತ್ರಿಕ ಅರಿವುಳ್ಳವರನ್ನು ಗಣತಿ ಕಾರ್ಯಕ್ಕೆ ನಿಯೋಜಿಸಬೇಕು. ಗಣತಿದಾರರನ್ನಾಗಿ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಮೇಲ್ವಿಚಾರಕರಾಗಿ ಪ್ರೌಢಶಾಲಾ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ತಹಶೀಲ್ದಾರ್‌ಗಳಿಗೆ ಸೂಚಿಸಿದರು.

2021ರ ಜನಗಣತಿ ಕಾರ್ಯವು ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಮನೆಗಳ ಗಣತಿ, ಎರಡನೇ ಹಂತದಲ್ಲಿ ಜನಗಳ ಗಣತಿ ಕಾರ್ಯ ನಡೆಯಲಿದೆ. 2021ರ ಫೆ.9ರಿಂದ 28ರವರೆಗೆ ಜನಗಣತಿ ಕಾರ್ಯ ನಡೆಯಲಿದೆ. ಗಣತಿದಾರರು ಈ ಸಂದರ್ಭದಲ್ಲಿ ಮನೆಗಳ ಸಂಖ್ಯೆಯನ್ನು ಕೆಂಪು ಶಾಹಿಯಲ್ಲಿ ಹಾಕಬೇಕು. ಮನೆಗಣತಿ ಆರಂಭವಾಗುವ ಪೂರ್ವದಲ್ಲಿ ಬ್ಲಾಕ್‍ಗಳನ್ನಾಗಿ ರಚಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಗುಣಾತ್ಮಕವಾದ ಮಾಹಿತಿಯ ಸಂಗ್ರಹ ಹಾಗೂ ಪರಿಶೀಲನಾ ಕಾರ್ಯ ನಡೆಸಬೇಕು. ಜಿಲ್ಲೆಯ ಪ್ರಧಾನ ಜನಗಣತಿ ಅಧಿಕಾರಿಗಳಾಗಿ ಜಿಲ್ಲಾಧಿಕಾರಿ ಕಾರ್ಯನಿರ್ವಹಿಸುತ್ತಾರೆ. ಸಹಾಯಕ ಜನಗಣತಿ ಅಧಿಕಾರಿಯಾಗಿ ಹೆಚ್ಚುವರಿ ಪ್ರಧಾನ ಗಣತಿ ಅಧಿಕಾರಿಯಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ. ಸಾರ್ವಜನಿಕ ಶಿಕ್ಷಣಾಧಿಕಾರಿ, ರಾಷ್ಟ್ರೀಯ ಮಾಹಿತಿ ಅಧಿಕಾರಿ, ಎರಡು ಜನ ಮಾಸ್ಟರ್ ಟ್ರೈನರ್, 53 ಜನ ಫೀಲ್ಡ್‌ ಆಫೀಸರ್ ಕಾರ್ಯನಿರ್ವಹಿಸುತ್ತಾರೆ ಎಂದರು.

ಗಣತಿ ಕಾರ್ಯದ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಂಡು ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಸಂಖ್ಯಿಕ ಅಧಿಕಾರಿಗಳು ಮಾಹಿತಿ ನೀಡಿ ಜಿಲ್ಲೆಯಲ್ಲಿ 22 ಚಾರ್ಜ್ ಅಧಿಕಾರಿಗಳನ್ನು ನಗರ ಹಾಗೂ ಪಟ್ಟಣಗಳಲ್ಲಿ ಗುರುತಿಸಲಾಗಿದೆ. 2,949 ಗಣತಿದಾರರನ್ನು ನೇಮಕ ಮಾಡಿಕೊಳ್ಳಬೇಕಾಗಿದೆ. 492 ಮೇಲ್ವಿಚಾರಕರನ್ನು ನೇಮಕ ಮಾಡಿಕೊಳ್ಳಬೇಕಾಗಿದೆ. 53 ತರಬೇತಿದಾರರನ್ನು ಗುರುತಿಸಲಾಗಿದೆ. ಮಾಸ್ಟರ್ ತರಬೇತುದಾರರಿಂದ ತರಬೇತಿ ನೀಡಿ ಜಿಲ್ಲೆಯಾದ್ಯಂತ ಗಣತಿದಾರರಿಗೆ ತರಬೇತಿ ಕಾರ್ಯ ಆರಂಭಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಜಿಲ್ಲಾ ಅಂಕಿ ಸಂಖ್ಯಾ ಅಧಿಕಾರಿ ಮೀಶೆ, ಉಪನ್ಯಾಸಕ ಅರವಿಂದ ಐರಣಿ ಮಾಹಿತಿ ನೀಡಿದರು. ಜನಗಣತಿ ಆ್ಯಪ್‌ ಬಗ್ಗೆ ಸಭೆಯಲ್ಲಿ ಪ್ರಾಯೋಗಿಕವಾಗಿ ಮಾಹಿತಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.