ಹಾವೇರಿ: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ಎಸ್ಎಫ್ಐ ಮುಂತಾದ ಸಂಘಟನೆಗಳು ಸೋಮವಾರ ರಾಷ್ಟ್ರವ್ಯಾಪಿ ಕರೆ ನೀಡಿದ್ದ ಮನೆಯಿಂದಲೇ ಚಳವಳಿಗೆ ಜಿಲ್ಲೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ಲಾಕ್ಡೌನ್ ಅನ್ನು ಮೇ 3ರವರೆಗೆ ವಿಸ್ತರಣೆ ಮಾಡಿದೆ. ತಮ್ಮ ಏಕಮಾತ್ರ ಆದಾಯವನ್ನು ನಂಬಿರುವ ಲಕ್ಷಾಂತರ ಕುಟುಂಬಗಳು ಇಂದು ಅಕ್ಷರಶಃ ಬೀದಿ ಪಾಲಾಗಿವೆ. ಇವರಿಗೆ ಯಾವುದೇ ರೀತಿಯ ಪರಿಹಾರ ಒದಗಿಸುವ ವಿಶೇಷ ಪ್ಯಾಕೇಜ್ಗಳನ್ನು ಘೋಷಣೆ ಮಾಡಿಲ್ಲ ಎಂದು ಸಿಐಟಿಯು ಮುಖಂಡ ವಿನಾಯಕ ಕುರುಬರ ಮತ್ತುಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ಆರೋಪಿಸಿದ್ದಾರೆ.
ಈ ಲಾಕ್ಡೌನ್ನಿಂದ ಅಸಂಘಟಿತ ಕಾರ್ಮಿಕರು, ಸಂಘಟಿತ ವಲಯದ ಗುತ್ತಿಗೆ, ಹೊರಗುತ್ತಿಗೆ, ಹಂಗಾಮಿ ಕಾರ್ಮಿಕರು, ನೀಮ್ ತರಬೇತಿದಾರರು, ಅಪ್ರೆಂಟಿಸ್ಗಳು, ಟ್ರೈನಿಗಳು ಮುಂತಾದವರು ಕಟ್ಟಡ ಮತ್ತು ವಲಸೆ ಕಾರ್ಮಿಕರು, ಖಾಸಗಿ ಸಾರಿಗೆ ಕಾರ್ಮಿಕರು ತೀವ್ರತರವಾದ ಕಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಭಾಷಣ ಸಾಕು– ವೇತನ ಬೇಕು, ಉದ್ಯೋಗ ಉಳಿಸಿ– ಆರ್ಥಿಕತೆ ರಕ್ಷಿಸಿ, ಆಹಾರ ಒದಗಿಸಿ– ಬದುಕು ಉಳಿಸಿ ಹಾಗೂ ಕೆಲಸದ ಅವಧಿಯನ್ನು 8ರಿಂದ 12 ಗಂಟೆಗೆ ಹೆಚ್ಚಳ ಮಾಡಬೇಡಿ. ವಲಸೆ ಕಾರ್ಮಿಕರಿಗೆ ಆಹಾರ ಮತ್ತು ವಸತಿ ವ್ಯವಸ್ಥೆ ಮಾಡಿ ಎಂದು ಒತ್ತಾಯಿಸಿದರು.
ಗುತ್ತಿಗೆ, ಹೊರಗುತ್ತಿಗೆ, ಕ್ಯಾಶ್ಯುವಲ್ ಆಗಿ ದುಡಿಯುತ್ತಿರುವ ಕಾರ್ಮಿಕರನ್ನು ಮತ್ತು ಯಾವುದೇ ಉದ್ಯಮದ ಕಾರ್ಮಿಕರು ಮತ್ತು ನೌಕರರನ್ನು ಕೆಲಸದಿಂದ ತೆಗೆಯಬಾರದು.ಪತ್ರಿಕೆಗಳ ವರದಿಗಾರರು ಮತ್ತು ಐಟಿ/ಬಿಟಿ ಗಳಲ್ಲಿ ದುಡಿಯುತ್ತಿರುವ ನೌಕರರನ್ನು ಕೆಲಸದಿಂದ ತೆಗೆಯಬಾರದು.ಆದಾಯರಹಿತ ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ತಿಂಗಳಿಗೆ ₹7,500 ಅನ್ನು ಅವರ ಬ್ಯಾಂಕ್ ಖಾತೆಗಳಿಗೆ 3 ತಿಂಗಳ ಅವಧಿಗೆ ಕೂಡಲೇ ವರ್ಗಾಯಿಸಿ ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.