ADVERTISEMENT

‘ಸಾತ್ವಿಕ ಸಮಾಜ ನಿರ್ಮಾಣವಾಗಲಿ’

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 1:58 IST
Last Updated 31 ಜನವರಿ 2021, 1:58 IST
ಹಾವೇರಿಯಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ದತ್ತಿ ಕಾರ್ಯಕ್ರಮವನ್ನು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಉದ್ಘಾಟಿಸಿದರು 
ಹಾವೇರಿಯಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ದತ್ತಿ ಕಾರ್ಯಕ್ರಮವನ್ನು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಉದ್ಘಾಟಿಸಿದರು    

ಹಾವೇರಿ: ‘ಶರಣರ ಆಶಯದ ಸಾತ್ವಿಕ ಸಮಾಜ ನಿರ್ಮಾಣದ ಪುನರುತ್ಥಾನ ಈಗಿನ ಅಗತ್ಯವಾಗಿದ್ದು, ವಚನಗಳು ಸದಾಚಾರದ ಸಂದೇಶಗಳನ್ನು ಸಾರುತ್ತಿವೆ’ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ಹಾವೇರಿಯ ನಿವೃತ್ತ ಅಧ್ಯಾಪಕಿ ಮಧುಮತಿ ಚಿಕ್ಕಗೌಡರ ಮನೆಯಂಗಳದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಕದಳಿ ಮಹಿಳಾ ವೇದಿಕೆ ಆಯೋಜಿಸಿದ್ದ ಹುಕ್ಕೇರಿಮಠದ ಶಿವಲಿಂಗ ಸ್ವಾಮೀಜಿ ಹಾಗೂ ದಿ.ಸಿದ್ದಪ್ಪ ಚನ್ನಪ್ಪ ಚೌಶೆಟ್ಟಿ ಅವರ ದತ್ತಿ ಉಪನ್ಯಾಸದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹುಕ್ಕೇರಿಮಠದ ಶಿವಲಿಂಗ ಸ್ವಾಮೀಜಿ ವಾಕ್‍ ಸಿದ್ಧಿಯುಳ್ಳ, ಪವಾಡ ಸದೃಶ ಸಾರ್ಥಕ ಜೀವನವನ್ನು ಉಳ್ಳವರಾಗಿದ್ದರು. ಸರಳ ಸಜ್ಜನಿಕೆಯ ಜೊತೆಗೆ ಸಮಯಕ್ಕೆ ಮಹತ್ವ ನೀಡಿ, ಶಿಷ್ಚಾಚಾರಕ್ಕೆ ವ್ಯತ್ಯಾಸವಾಗದಂತೆ ಬದುಕಿದ್ದರು ಎಂದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪೂರ, ‘ಸಾರ್ಥಕ ಜೀವನ ಸಿದ್ಧಾಂತವನ್ನು ಪ್ರತಿಪಾದಿಸಿದ ವಚನಗಳು ಸಾರ್ವಕಾಲಿಕ ಸತ್ಯಗಳು. ಮಕ್ಕಳಿಗೆ ವಚನ ಸಂಸ್ಕಾರ ನೀಡುವ ಅಗತ್ಯವಿದೆ’ ಎಂದರು.

ಶಿಕ್ಷಕಿ ರೂಪಾ ಸಜ್ಜನರ,ನಿವೃತ್ತ ಮುಖ್ಯಶಿಕ್ಷಕ ಸಿ.ಎಸ್. ಮರಳಿಹಳ್ಳಿ ಮಾತನಾಡಿದರು.ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷೆ ದಾಕ್ಷಾಯಣಿ ಗಾಣಿಗೇರ ಅಧ್ಯಕ್ಷತೆ ವಹಿಸಿದ್ದರು. ಹುಕ್ಕೇರಿಮಠದ ಅಕ್ಕನ ಬಳಗದ ಅಧ್ಯಕ್ಷೆ ಲಲಿತಾ ಹೊರಡಿ ಆಶಯ ನುಡಿಗಳನ್ನಾಡಿದರು. ಉಪಾಧ್ಯಕ್ಷೆ ಅಮೃತಮ್ಮ ಶೀಲವಂತರ ವಚನ ಚಿಂತನೆ ನಡೆಸಿಕೊಟ್ಟರು. ಇನ್ನರ್‌ವೀಲ್‌ ಕ್ಲಬ್ ಅಧ್ಯಕ್ಷೆ ಶಿಲ್ಪಾ ಚುರ್ಚಿಹಾಳ, ನಿವೃತ್ತ ಡಿವೈಎಸ್ಪಿ ಮಾಳಗೇರ, ತಮ್ಮನಗೌಡ ತಿಮ್ಮನಗೌಡರ, ಮಹೇಶ್ವರಿ ತಿಮ್ಮನಗೌಡ್ರ ಅತಿಥಿಗಳಾಗಿದ್ದರು.

ನಿವೃತ್ತ ಅಧ್ಯಾಪಕಿ ಮಧುಮತಿ ಚಿಕ್ಕಗೌಡರ ಸ್ವಾಗತಿಸಿದರು. ಉಷಾ ಕರಬಸನಗೌಡ್ರ ನಿರೂಪಿಸಿದರು. ಸೌಭಾಗ್ಯ ಹಿರೇಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.