ADVERTISEMENT

ರೈತರಿಗೆ ಬೆಳೆವಿಮೆ ಪರಿಹಾರ ನೀಡಿ: ಎಸ್‌ಬಿಐ ಶಾಖೆಗೆ ಜಿಲ್ಲಾ ಗ್ರಾಹಕರ ಆಯೋಗ ಆದೇಶ

ಎಸ್‌ಬಿಐ ಶಾಖೆಗೆ ಜಿಲ್ಲಾ ಗ್ರಾಹಕರ ಆಯೋಗ ಆದೇಶ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 15:45 IST
Last Updated 27 ಸೆಪ್ಟೆಂಬರ್ 2021, 15:45 IST
ಹಾವೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಟ್ಟಡ 
ಹಾವೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಟ್ಟಡ    

ಹಾವೇರಿ: ರೈತರ ಬೆಳೆವಿಮೆ ಕಂತು ಹಣವನ್ನು ವಿಮಾ ಕಂಪನಿಗೆ ಪಾವತಿಸಲು ವಿಳಂಬ ಮಾಡಿದ ಸೂಡಂಬಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ 30 ದಿನದೊಳಗಾಗಿ ಫಲಾನುಭವಿ ರೈತರಿಗೆ ವಿಮೆ ಹಣ ಪಾವತಿಸಲು ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ಬ್ಯಾಡಗಿ ತಾಲ್ಲೂಕಿನ ತುಮರಿಕೊಪ್ಪ ಗ್ರಾಮದ ರೈತರಾದ ಜಗದೀಶ ವೀರಪ್ಪ ಬಣಕಾರ ಅವರು ₹2,975, ವೀರಪ್ಪ ರುದ್ರಪ್ಪ ಬಣಕಾರ ಅವರು ₹3,600 ಹಾಗೂ ಶಾರದಾ ವೀರಪ್ಪ ಬಣಕಾರ ಅವರು ಮೂರು ಎಕರೆಗೆ ₹1,900 ಮೊತ್ತವನ್ನು ಬೆಳೆ ವಿಮಾ ಕಂತಾಗಿ ಸೂಡಂಬಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ತಮ್ಮ ಉಳಿತಾಯ ಖಾತೆಗೆ ತುಂಬಿದ್ದರು.

ಬ್ಯಾಂಕಿನವರು ನೇರವಾಗಿ ರೈತರ ಖಾತೆಯಿಂದ 2018-19ನೇ ಸಾಲಿನ ಬೆಳೆ ವಿಮಾ ಹಣವನ್ನು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಗೆ ಪಾವತಿಸದೆ 14 ದಿನಗಳ ನಂತರ ಕಳುಹಿಸಿದ್ದರಿಂದ ವಿಮಾ ಕಂಪನಿಯು ಬೆಳೆ ವಿಮೆ ನೀಡಲು ನಿರಾಕರಿಸಿದ್ದರಿಂದ ಪ್ರೀಮಿಯಂ ಹಣ ತಡವಾಗಿ ಕಳುಹಿಸಿ ಸೇವಾ ನ್ಯೂನತೆ ಎಸಗಿದ್ದರಿಂದ ಬೆಳೆವಿಮಾ ಪರಿಹಾರ ಮೊತ್ತ ಪಡೆಯಲು ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ADVERTISEMENT

ಪ್ರಕರಣದ ವಿಚಾರಣೆಯನ್ನು ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷೆ ಸುನಂದಾ ಹಾಗೂ ಸದಸ್ಯರಾದ ಮಹೇಶ್ವರಿ ಬಿ.ಎಸ್. ಅವರು ಜಗದೀಶ ವೀರಪ್ಪ ಬಣಕಾರ ಅವರಿಗೆ ₹91,868, ವೀರಪ್ಪ ರುದ್ರಪ್ಪ ಬಣಕಾರ ಅವರಿಗೆ ₹1,46,332 ಹಾಗೂ ಶಾರದಾ ವೀರಪ್ಪ ಬಣಕಾರ ಅವರಿಗೆ ₹53,480ಗಳನ್ನು ವಾರ್ಷಿಕ ಶೇ 6ರ ಬಡ್ಡಿಯಂತೆ ಪ್ರಕರಣ ದಾಖಲಾದ ದಿನದಿಂದ ಆದೇಶವರೆಗೆ ನೀಡಬೇಕು. ಪ್ರತಿಯೊಬ್ಬರಿಗೂ ಮಾನಸಿಕ ವ್ಯಥ್ಯೆಗಾಗಿ ₹2 ಸಾವಿರ ಹಾಗೂ ಪ್ರಕರಣದ ಖರ್ಚಿಗಾಗಿ ₹1 ಸಾವಿರ ಪರಿಹಾರವಾಗಿ ನೀಡಬೇಕು ಎಂದು ಆದೇಶ ಹೊರಡಿಸಿದ್ದಾರೆ.

ಆದೇಶವಾದ 30 ದಿನಗಳಲ್ಲಿ ಮೊತ್ತ ಪಾವತಿಸಲು ವಿಫಲವಾದರೆ ವಾರ್ಷಿಕ ಶೇ 12ರ ಬಡ್ಡಿ ಸಮೇತ ಪಾವತಿಸಲು ಆದೇಶಿಸಲಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ನೋಂದಣಾಧಿಕಾರಿ ಕರಿಯಪ್ಪ ಬಡಪ್ಪಳವರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.