
ಶಿಗ್ಗಾವಿ: ಮುಂಗಾರು ಬೆಳೆ ಮಳೆಯಿಂದ ನಾಶವಾಗಿ ಹೋಗಿದೆ. ಇನ್ನೇನು ಹಿಂಗಾರು ಬೆಳೆಯಾದರೂ ಸಹ ಉತ್ತಮವಾಗಿ ಬರಬಹುದು ಎಂಬ ನಿರೀಕ್ಷೆಯಲ್ಲಿ ಹಿಂಗಾರು ಬಿಳಿಜೋಳ ಬೀಜ ಬಿತ್ತನೆ ಮಾಡಿದ ತಾಲ್ಲೂಕಿನ ಬಂಕಾಪುರ ಗ್ರಾಮದ ರೈತೊಬ್ಬರ ಎರಡು ಎಕರೆ ಬೆಳೆಯನ್ನು ದುಷ್ಕರ್ಮಿಗಳು ಹರಗಿ ಹಾಳು ಮಾಡಿದ್ದು, ಜನತೆ ಆತಂಕಗೊಂಡಿದ್ದಾರೆ.
ರೈತ ಪ್ರಕಾಶ ಶಿವಪ್ಪ ಚಂದಾಪುರ ಅವರಿಗೆ ಸೇರಿದಂತೆ ಸುಮಾರು 2 ಎಕರೆ ಜಮೀನಿನಲ್ಲಿ ಕಳೆದ ಒಂದು ತಿಂಗಳ ಹಿಂದೆ ಬಿತ್ತನೆ ಮಾಡಿರುವ ಬಿಳಿಜೋಳದ ಬೆಳೆ ಹಚ್ಚು ಹಸಿರಾಗಿ ಹುಲಸಾಗಿ ಬೆಳೆದು ನಿಂತಿತ್ತು. ಟ್ರ್ಯಾಕ್ಟರ್ನಿಂದ ಹರಗಿದ್ದಾರೆ
ಬಂಕಾಪುರದ ಹಿಂಗಾರು ಬೆಳೆ ಬದುಕಿಗೆ ಆಸರೆಯಾಗಲಿದೆ. ಮುಂಗಾರು ಮತ್ತು ಹಿಂಗಾರು ಬಿತ್ತನೆಗೆ ಮಾಡಿರುವ ಸಾಲವನ್ನು ತೀರಿಸಬಹುದು ಎಂಬ ಕನಸು ಹೊತ್ತ ರೈತ ಪ್ರಕಾಶ ಅವರಿಗೆ ದಿಢೀರಣೆ ಬೆಳೆ ನಾಶ ಮಾಡಿರುವ ಸುದ್ದಿ ಬೆಳಿಗಿನ ಜಾವ ಕೇಳಿ ದುಃಖಿತರಾದರು.
‘ಇದ್ದ 2 ಎಕರೆ ಜಮೀನಿನಲ್ಲಿ ದುಡಿದು ಇಡೀ ಕುಟುಂಬದ ಬದುಕು ನಿರ್ವಹಣೆ ಮಾಡುತ್ತಿದ್ದೇವು. ಯಾರು ದುಷ್ಟರು ಬೆಳೆ ಮೊಳಕೆಯನ್ನು ಹರಗಿ ಬೆಳೆ ನಾಶ ಮಾಡಿರುವುದನ್ನು ಕಂಡು ಮಾಡಿರುವ ಸಾಲ ತೀರಿಸುವುದು ಹೇಗೆ, ಇಡೀ ಕುಟುಂಬದ ಬಂಡಿ ಸಾಗಿಸುವುದು ಹೇಗೆ? ಲಾವಣಿ ಮಾಡಿರುವ ₹ 30 ಸಾವಿರ ಹಣವನ್ನು ಜಮೀನಿನ ಮೂಲ ಮಾಲೀಕರಿಗೆ ಹೇಗೆ ನೀಡುವುದು? ಎಂಬ ಪ್ರಶ್ನೆಗಳು ಕಾಡುತ್ತಿವೆ ಎಂಬ ಆತಂಕ ವ್ಯಕ್ತಪಡಿಸಿದರು.
ಪರಿಹಾರಕ್ಕಾಗಿ ಆಗ್ರಹ: ರೈತ ಪ್ರಕಾಶ ಚಂದಾಪುರ ಸಣ್ಣ ಹಿಡುವಳಿ ರೈತರನಾಗಿದ್ದು, ಲಾವಣಿ ಮಾಡಿಕೊಂಡಿರುವ 2 ಎಕರೆ ಜಮೀನಿನಲ್ಲಿ ಕುಟುಂಬದ ಬಂಡಿ ನಡೆಸುತ್ತಿದ್ದಾರೆ. ಹೀಗಾಗಿ ಮುಂಗಾರು ಮತ್ತು ಹಿಂಗಾರು ಬೆಳೆಗಳು ನಾಶವಾಗಿವೆ. ಅದರಿಂದ ಬಡ ರೈತ ಕಂಗಾಲಾಗಿದ್ದಾನೆ. ತಕ್ಷಣ ಸರ್ಕಾರ ಇಂತಹ ಸಂದರ್ಭದಲ್ಲಿ ಹೆಚ್ಚಿನ ಸಹಾಯಧನ ನೀಡಬೇಕು ಎಂದು ರೈತ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಹಳವಳ್ಳಿ, ಮಾಲತೇಶ ಸಕ್ರಿ, ಶಂಭಣ್ಣ ಕುರಗೋಡಿ, ಮಂಜು ಸವೂರ, ಗಿರಿರಾಜ ದೇಸಾಯಿ ಆಗ್ರಹಿಸಿದ್ದಾರೆ.
ರೈತನ ಹೊಲದ ಮೇಲೆ ದಾಳಿ ಮಾಡಿದ ದುಷ್ಟರನ್ನು ಪತ್ತೆ ಹಚ್ಚಿ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.