
ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಮಾರಂಬೀಡ ಗ್ರಾಮದಲ್ಲಿ ಡಕಾಯಿತರ ಭೀತಿ ಕಾಡುತ್ತಿದ್ದು, ಇದರಿಂದಾಗಿ ಗ್ರಾಮಸ್ಥರೇ ಗುಂಪು ಕಟ್ಟಿಕೊಂಡು ರಾತ್ರಿ ಗಸ್ತು ತಿರುಗುತ್ತಿದ್ದಾರೆ.
ಆಡೂರು ಠಾಣೆ ವ್ಯಾಪ್ತಿಯಲ್ಲಿರುವ ಮಾರಂಬೀಡ ಸಮೀಪದ ಗ್ರಾಮವೊಂದರಲ್ಲಿ ಇತ್ತೀಚೆಗೆ ಡಕಾಯಿತರು ಓಡಾಡಿರುವ ಮಾಹಿತಿ ಹರಿದಾಡುತ್ತಿದೆ. ಒಂಟಿ ವ್ಯಕ್ತಿಗಳು ಇರುವ ಮನೆಗಳಿಗೆ ನುಗ್ಗುತ್ತಿರುವ ಡಕಾಯಿತರು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಮನೆಯಲ್ಲಿರುವ ವಸ್ತುಗಳನ್ನು ದೋಚಿಕೊಂಡು ಹೋಗುತ್ತಿರುವುದಾಗಿ ಕೆಲವರು ಸುದ್ದಿಗಳನ್ನು ಹರಿಬಿಟ್ಟಿ್ದ್ದಾರೆ.
ಇಂಥ ಸುದ್ದಿಗಳನ್ನು ಕೇಳಿ ಭಯಭೀತರಾಗಿರುವ ಗ್ರಾಮಸ್ಥರು, ಮನೆಗೊಬ್ಬರಂತೆ ರಾತ್ರಿ ನಿದ್ದೆಯಿಲ್ಲದೇ ಗ್ರಾಮದ ರಸ್ತೆಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಕೈಯಲ್ಲಿ ದೊಣ್ಣೆ, ಮಚ್ಚು, ಕುಡಗೋಲು ಹಾಗೂ ಇತರೆ ಆಯುಧಗಳನ್ನು ಹಿಡಿದು ಗ್ರಾಮಸ್ಥರೇ ಊರಿನ ಕಾವಲು ಕಾಯುತ್ತಿದ್ದಾರೆ. ರಸ್ತೆಯಲ್ಲಿ ರಾತ್ರಿ ವೇಳೆ ಬರುವ ವಾಹನಗಳನ್ನು ತಡೆದು ಪರಿಶೀಲಿಸುತ್ತಿದ್ದಾರೆ.
‘ಗ್ರಾಮದಲ್ಲಿ ಡಕಾಯಿತರ ಆತಂಕ ಸೃಷ್ಟಿಯಾಗಿದೆ. ಮನೆಗೆ ನುಗ್ಗಿ ಯಾರಾದರೂ ಏನಾದರೂ ಮಾಡುತ್ತಾರೆಂಬ ಭಯ ಶುರುವಾಗಿದೆ. 8 ದಿನದಿಂದ ಮನೆಗೊಬ್ಬರಂತೆ ಕಾವಲು ಕಾಯುತ್ತಿದ್ದೇವೆ. ಪುರುಷರು ಮಾತ್ರವಲ್ಲದೇ ಮಹಿಳೆಯರು ಹಾಗೂ ಮಕ್ಕಳು ಸಹ ಚಳಿಯಲ್ಲಿ ಕಾವಲು ಕಾಯಲು ಬರುತ್ತಿದ್ದಾರೆ’ ಎಂದು ಗ್ರಾಮಸ್ಥರೊಬ್ಬರು ತಿಳಿಸಿದರು.
‘ಉದ್ಯೋಗ ಹಾಗೂ ವಿದ್ಯಾಭ್ಯಾಸಕ್ಕೆಂದು ದೂರದ ಊರುಗಳಲ್ಲಿರುವ ಮಕ್ಕಳನ್ನು ಸಹ ಪೋಷಕರು ವಾಪಸು ಊರಿಗೆ ಕರೆಸಿಕೊಂಡಿದ್ದಾರೆ. ಅವರನ್ನು ಸಹ ಸರದಿ ಪ್ರಕಾರ ಗಸ್ತು ತಿರುಗಲು ಕಳುಹಿಸುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.