ADVERTISEMENT

ಡಿ.ಕೆ.ಶಿವಕುಮಾರ್‌ ಅಸಹಾಯಕ ಅಧ್ಯಕ್ಷ: ಜಗದೀಶ ಶೆಟ್ಟರ್‌ ಟೀಕೆ

ಉಗ್ರಪ್ಪ ವಿರುದ್ಧ ಕ್ರಮ ಕೈಗೊಳ್ಳಲು ಧಮ್‌ ಇಲ್ಲ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 12:42 IST
Last Updated 25 ಅಕ್ಟೋಬರ್ 2021, 12:42 IST
ಜಗದೀಶ ಶೆಟ್ಟರ್
ಜಗದೀಶ ಶೆಟ್ಟರ್   

ಹಾವೇರಿ: ‘ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿಯ ಅಸಹಾಯಕ ಅಧ್ಯಕ್ಷರಾಗಿದ್ದಾರೆ. ತಮ್ಮ ಬಗ್ಗೆ ಕೀಳಾಗಿ ಮಾತನಾಡಿರುವ ವಿ.ಎಸ್‌.ಉಗ್ರಪ್ಪ ವಿರುದ್ಧ ಕ್ರಮ ಕೈಗೊಳ್ಳಲು ಅವರಿಗೆ ಧಮ್‌ ಇಲ್ಲ’ ಎಂದು ಶಾಸಕ ಜಗದೀಶ ಶೆಟ್ಟರ್‌ ಲೇವಡಿ ಮಾಡಿದರು.

ಹಾನಗಲ್‌ ಪಟ್ಟಣದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, ‘ಪಿಸುಮಾತು ಪ್ರಕರಣದಲ್ಲಿ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಸಲೀಂ ಅಹಮದ್‌ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸುತ್ತಾರೆ. ಸಿದ್ದರಾಮಯ್ಯ ಅವರ ಪಟ್ಟದ ಶಿಷ್ಯ ಉಗ್ರಪ್ಪ ಅವರಿಗೆ ನೋಟಿಸ್‌ ಕೊಟ್ಟು ಸುಮ್ಮನಾಗುತ್ತಾರೆ. ಕಾನೂನು ಪಂಡಿತ ಉಗ್ರಪ್ಪ ವಿರುದ್ಧ ಕ್ರಮ ಕೈಗೊಂಡರೆ ಸಂವಿಧಾನದ ಆರ್ಟಿಕಲ್‌ ಶುರುವಾಗುತ್ತವೆ ಎಂದು ವ್ಯಂಗ್ಯ ಮಾಡಿದರು.

ಸಿದ್ದರಾಮಯ್ಯ ಭಾಷೆ ಕೆಳಮಟ್ಟಕ್ಕೆ ಹೋಗುತ್ತಿದೆ

ADVERTISEMENT

ಮುಖ್ಯಮಂತ್ರಿಯಾಗಿ ಅನುಭವಿ ರಾಜಕಾರಣಿಯಾಗಿರುವ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಅವರ ಭಾಷೆ ಕೆಳಮಟ್ಟಕ್ಕೆ ಹೋಗುತ್ತಿದೆ. 100 ಕೋಟಿ ಜನರಿಗೆ ಲಸಿಕೆ ಹಾಕಿರುವ ಬಗ್ಗೆ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅವರು, ಮೋದಿ ಅವರ ಉತ್ತಮ ಆಡಳಿತದಿಂದ ಲಸಿಕಾಕರಣ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನು ನೋಡಿಯಾದರೂ ಸಿದ್ದರಾಮಯ್ಯ ಒಳ್ಳೆಯ ಕೆಲಸಗಳನ್ನು ಬೆಂಬಲಿಸಲಿ ಎಂದು ಸಲಹೆ ನೀಡಿದರು.

ಎಚ್‌ಡಿಕೆಯವರನ್ನು ಯಾಕೆ ಸಿಎಂ ಮಾಡಿತು?

ಜೆಡಿಎಸ್‌ ಅನ್ನು ‘ಬಿಜೆಪಿಯ ಬಿ ಟೀಮ್‌’ ಎಂದು ಕರೆಯುವ ಕಾಂಗ್ರೆಸ್‌, ಕುಮಾರಸ್ವಾಮಿ ಅವರ ಮನೆ ಬಾಗಿಲಿಗೆ ಹೋಗಿ ಯಾಕೆ ಅವರನ್ನು ಸಿಎಂ ಮಾಡಿತು ಎಂದು ಪ್ರಶ್ನಿಸಿದರು. ಆರ್‌ಎಸ್‌ಎಸ್‌ ವಿರುದ್ಧ ಕುಮಾರಸ್ವಾಮಿಯವರ ಟೀಕೆಗೆ ಪ್ರತಿಕ್ರಿಯಿಸಿ, ದೆಹಲಿ ಮೂಲದ ಎಡಪಂಥೀಯ ಪತ್ರಕರ್ತನ ಪುಸ್ತಕ ಓದಿ ಈ ರೀತಿ ಟೀಕೆ ಮಾಡುತ್ತಿದ್ದಾರೆ. ‘ಬಂಚ್‌ ಆಫ್‌ ಥಾಟ್ಸ್‌’ ಸೇರಿದಂತೆ ಹಲವಾರು ಪುಸ್ತಕ ಓದಿದರೆ, ಆರ್‌ಎಸ್‌ಎಸ್‌ ಬಗ್ಗೆ ಸರಿಯಾದ ಮಾಹಿತಿ ತಿಳಿಯುತ್ತದೆ. ದೇವೇಗೌಡರ ರೀತಿ ಎಲ್ಲ ಪುಸ್ತಕಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.

‘ಗೂಂಡಾಗಿರಿ ಕಾಂಗ್ರೆಸ್ ಸಂಸ್ಕೃತಿ’

ಹಾವೇರಿ: ಚುನಾವಣೆಯಲ್ಲಿ ಹಣ, ಹೆಂಡ ಹಂಚುವುದು ಮತ್ತು ಗೂಂಡಾಗಿರಿ ಕಾಂಗ್ರೆಸ್ ಸಂಸ್ಕೃತಿ. ನಮ್ಮಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಪಕ್ಷ ಸಂಘಟನೆಗೆ ಶ್ರಮಿಸಿ, ಚುನಾವಣೆಯಲ್ಲಿ ಗೆಲುವು ತರುತ್ತಾರೆ. ಸಿದ್ದರಾಮಯ್ಯ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಲೂಟಿ ಮಾಡುವುದನ್ನು ಬಿಟ್ಟರೆ ಬೇರೆ ಏನು ಮಾಡಿದೆ?. 2023ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಭ್ರಮೆ ಎಂದು ಶಾಸಕ ಜಗದೀಶ ಶೆಟ್ಟರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.