ರಾಣೆಬೆನ್ನೂರು: ‘ವಚನಕಾರರನ್ನು ಯಾವುದೇ ಜಾತಿಗೆ ಸೀಮಿತಗೊಳಿಸಿದರೆ ವಚನ ಸಾಹಿತ್ಯಕ್ಕೆ ಕಳಂಕ ಬರುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ನಗರದ ಸ್ಟೇಶನ್ ರಸ್ತೆಯ ವರ್ತಕರ ಸಮುದಾಯ ಭವನದಲ್ಲಿ ಪರಿವರ್ತನ ರಾಣೆಬೆನ್ನೂರು ಮತ್ತು ಕರ್ನಾಟಕ ವೈಭವ ಸಂಸ್ಥೆಯಿಂದ ಈಚೆಗೆ ನಡೆದ ‘ವಚನ ದರ್ಶನ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
‘ವಚನ ದರ್ಶನ ಸತ್ಯದ ದರ್ಶನವಾಗಿದೆ. ರಾಷ್ಟ್ರ ಕಟ್ಟಲು ವಚನಗಳನ್ನು ಬಳಸಿಕೊಳ್ಳಬೇಕು. ಶರಣರು ಪ್ರತಿ ಕಾಯಕದಲ್ಲೂ ಕೈಲಾಸ ಕಂಡಿದ್ದರು. ವಚನಗಳು ಸಮಾಜವನ್ನು ಒಗ್ಗೂಡಿಸಿದ್ದವು. ವೀರಶೈವ, ಲಿಂಗಾಯತ ಬೇರೆ ಬೇರೆ ಎಂದು ಒಡೆಯಲು ಹೊರಟಿದ್ದೇವೆ. ಸಮಾಜ ಒಗ್ಗೂಡಿಸುವ ಕೆಲಸವಾಗಬೇಕು. ವಚನಗಳು ಬದುಕುವ ರೀತಿ ಹೇಳಿಕೊಡುತ್ತವೆ’ ಎಂದರು.
ಸಾನ್ನಿಧ್ಯ ವಹಿಸಿದ್ದ ಹರಿಹರ ವೀರಶೈವ ಪಂಚಮಸಾಲಿ ಪೀಠದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ವಚನ ಸಾಹಿತ್ಯದ ಪಿತಾಮಹ ಫ.ಗು. ಹಳಕಟ್ಟಿ ಅವರು ವಚನಗಳನ್ನು ಬರೆದ ಸಾಧನೆಗಳ ಬಗ್ಗೆ ತಿಳಿಸಿದರು.
ವರ್ತಕರ ಸಂಘದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ ಅಧ್ಯಕ್ಷತೆ ವಹಿಸಿದ್ದರು. ವರ್ತಕರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಜಿ. ವೈದ್ಯ ಮಾತನಾಡಿದರು. ಕರ್ನಾಟಕ ವೈಭವ ಸಂಯೋಜಕ ಪ್ರವೀಣ ಎಸ್.ಕೋರ್ಪಡೆ, ಪರಿವರ್ತನ ಸಂಯೋಜಕ ಡಾ.ನಾರಾಯಣ ಪವಾರ, ಕೆ.ಎನ್. ಪಾಟೀಲ, ಸುಮಾ ಉಪ್ಪಿನ, ಬಿ.ಎನ್. ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.