
ಸವಣೂರು: ‘ಮನುಷ್ಯನಾದವನು ಜೀವನದಲ್ಲಿ ಯಶಸ್ಸು ಮತ್ತು ಶ್ರೇಯಸ್ಸನ್ನು ಪಡೆಯಲು ಈ ಬದುಕು ಶಾಶ್ವತವಲ್ಲ ಎಂದರಿತು ಬಾಳಬೇಕು. ನಾನು ಎಂಬ ಅಹಂಭಾವ ತೊರೆದಲ್ಲಿ ಜೀವನ ಸನ್ಮಾರ್ಗದತ್ತ ಸಾಗುವ ಮೂಲಕ ಸಾರ್ಥಕಗೊಳ್ಳುತ್ತದೆ’ ಎಂದು ಮುಂಡರಗಿ ಸಂಸ್ಥಾನ ಮಠದ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಶ್ರೀಗಳು ನುಡಿದರು.
ತಾಲ್ಲೂಕಿನ ಹೂವಿನಶಿಗ್ಲಿ ವಿರಕ್ತಮಠದ 47ನೇ ಜಾತ್ರಾ ಮಹೋತ್ಸವ ಹಾಗೂ ಲಿಂ.ನಿರಂಜನ ಶ್ರೀಗಳವರ 16ನೇ ಪುಣ್ಯ ಸ್ಮರಣೋತ್ಸವ ಕಾರ್ಯ ಪಾವನದ ಸಾನಿಧ್ಯ ವಹಿಸಿ ಉಪದೇಶಾಮೃತ ನೀಡಿದರು.
ಲಿಂ.ನಿರಂಜನ ಶ್ರೀಗಳ ಕೃಪೆಯಿಂದ ಚನ್ನವೀರ ಶ್ರೀಗಳ ನೇತೃತ್ವದಲ್ಲಿ ಶ್ರೀಮಠ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಶ್ರೀ ಮಠದ ಚನ್ನವೀರ ಶ್ರೀಗಳ ಪ್ರಯತ್ನ ನಿಷ್ಠೆಯ ಫಲದಿಂದ 400 ಮಕ್ಕಳಿಗೆ ಉದ್ಯಮಿ ವಿಜಯಕುಮಾರ್ ಬಿರಾದಾರ ಮಹಾ ದಾಸೋಹಕ್ಕೆ ಆಹಾರ ಪದಾರ್ಥಗಳನ್ನು ವ್ಯವಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದು ನುಡಿದರು.
ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸುಭಾಸ ಮಜ್ಜಗಿ ಗುರು ರಕ್ಷೆ ಸ್ವೀಕರಿಸಿ ಮಾತನಾಡಿದರು. ಜಾನಪದ ವಿದ್ವಾಂಸರಾದ ಡಾ. ಶಂಭು ಬಳಿಗಾರ ನುಡಿನಮನ ಸಲ್ಲಿಸಿದರು.
ಸಮಾರಂಭದಲ್ಲಿ ಗದಗ ಜಿಲ್ಲೆ ಹುಲಕೋಟಿಯ ಯೋಗ ಚಿಕಿತ್ಸೆ, ಪ್ರಕೃತಿ ಚಿಕಿತ್ಸೆ, ಮತ್ತು ಕೌನ್ಸಿಲಿಂಗ್ ತಜ್ಞ ರಾದ ಡಾ. ಸತೀಶ ಮ. ಹೊಂಬಾಳಿ ಅವರಿಗೆ ವೈದ್ಯ ನಿರಂಜನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಹಾರಥೋತ್ಸವಕ್ಕೆ ಚಾಲನೆ ನೀಡಿದ ಬೆಳಗಾವಿಯ ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ ಶಿ. ಬಾಳೇಹೊಸೂರ ಅವರನ್ನು ಸನ್ಮಾನಿಸಿ ಗುರು ರಕ್ಷೆ ನೀಡಲಾಯಿತು.
ಶ್ರೀಮಠದ ಚನ್ನವೀರ ಶ್ರೀಗಳು ನೇತೃತ್ವ ವಹಿಸಿದ್ದರು. ಗಂಜಿಗಟ್ಟಿ ಚರಮೂರ್ತೇಶ್ವರ ಮಠದ ಶ್ರೀ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಕುಂದಗೋಳದ ಕಲ್ಯಾಣಪುರಮಠದ ಅಭಿನವ ಬಸವಣ್ಣಜ್ಜನವರು, ಗುಡ್ಡದಾನ್ವೇರಿ ಶಿವಯೋಗಿಶ್ವರ ಸ್ವಾಮೀಜಿ, ಹಿರೇಮಲ್ಲನಕೇರಿ ಅಭಿನವ ಚನ್ನಬಸವ ಸ್ವಾಮೀಜಿ ಸಮ್ಮುಖ ವಹಿಸಿದ್ದರು.
ಆಹಾರ ನಿರೀಕ್ಷಕ ಡಿ.ಎಂ ಪಾಟೀಲ, ಕೆ.ಡಿ.ಪಿ ಸದಸ್ಯ ರವಿ ಕರಿಗಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.