ADVERTISEMENT

ಹಾವೇರಿ: ನಾಟಕೋತ್ಸವ ಫೆ.1ರಿಂದ

ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ನಾಟಕ, ದೊಟ್ಟಾಟ, ರೂಪಕ, ನೃತ್ಯಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 13:36 IST
Last Updated 29 ಜನವರಿ 2019, 13:36 IST

ಹಾವೇರಿ:ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಫೆ.1ರಿಂದ 3ರ ತನಕ ‘ನಾಟಕೋತ್ಸವ’ ನಡೆಯಲಿದೆ.

ಹಾವೇರಿ ಜಿಲ್ಲಾ ನಾಟಕೋತ್ಸವ ಸಮಿತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದ ನಾಟಕವನ್ನುಫೆ.1ರಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಚಾಲನೆ ನೀಡುವರು. ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಅಂದು ಸಂಜೆ 7ಕ್ಕೆ ಕೋಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಂಡದಿಂದ ‘ಒಂದು ಏಟಿಗೆ 7’ ನಾಟಕ ಪ್ರದರ್ಶನ ಕಾಣಲಿದೆ. ಬೋಳುವಾರ್ ಮೊಹಮ್ಮದ್ ಕುಂಞಿ ಕತೆಯಾಧಾರಿತ ನಾಟಕವನ್ನು ಜಿ. ಎಂ. ಓಂಕಾರಣ್ಣನವರ ನಿರ್ದೇಶಿಸಿದ್ದಾರೆ.

ADVERTISEMENT

ರಾತ್ರಿ 8 ಗಂಟೆಗೆ ‘ಹಂಗಾದ್ರ ನಾ ಮದುವೆ ಆಗೋದ ಯಾರ‍್ನ’ ನಾಟಕವನ್ನು ಧಾರವಾಡದ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನವು ಪ್ರದರ್ಶಿಸಲಿದೆ. ಎಸ್. ಎಸ್. ಚಿಕ್ಕಮಠ ರಚಿಸಿದ ನಾಟಕವನ್ನು ವಿಜಯಕುಮಾರ ದೊಡ್ಡಮನಿ ನಿರ್ದೇಶಿಸಿದ್ದಾರೆ.
ಅಂದು ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಾಜು ನದಾಫ ಮತ್ತು ಬಾಲ ಕಲಾ ಪ್ರಶಸ್ತಿ ಪುರಸ್ಕೃತ ಕುಮಾರ ತುಷಾರ ಮಳಿಗಿ ಅವರನ್ನು ಸನ್ಮಾನಿಸಲಾಗುವುದು.

ಫೆ.2ರಂದು ಸಂಜೆ 7ಕ್ಕೆ ಶಿಗ್ಗಾವಿಯ ಮೂಡಣ ರಂಗ ಸಾಂಸ್ಕೃತಿಕ ಸಂಘದಿಂದ ‘ನನ್ನ ಕನಸಿನ ಲೋಕ’ ನಾಟಕ ಪ್ರದರ್ಶನವಾಗಲಿದೆ. ಎನ್. ಕೃಷ್ಣಮೂರ್ತಿ ರಚಿಸಿ, ನಿರ್ದೇಶಿಸಿದ್ದಾರೆ. ಅಕ್ಕಿಆಲೂರಿನ ಶ್ರೀ ದುಂಡಿಬಸವೇಶ್ವರ ಜನಪದ ಕಲಾ ತಂಡದರು ‘ಜಗದ ಕಣ್ಣು ಪುಟ್ಟರಾಜ ಗವಾಯಿಗಳು’ ಕಿರು ರೂಪಕವನ್ನು ಪ್ರದರ್ಶಿಸುವರು. ಬಸವರಾಜ ಕೋರಿ ರಚನೆ ಹಾಗೂ ಷಣ್ಮುಖಪ್ಪ ಮುಚ್ಚಂಡಿ ನಿರ್ದೇಶನ ನೀಡಿದ್ದಾರೆ.

ಬಳಿಕ ‘ಮಹಿಷಾಸುರ ಮರ್ದಿನಿ’ ಕಿರು ದೊಡ್ಡಾಟ ಪ್ರದರ್ಶನವಾಗಲಿದೆ. ಶಿಗ್ಗಾವಿ ತಾಲ್ಲೂಕಿನ ಜಕ್ಕಿನಕಟ್ಟಿನ ಗ್ರಾಮದ ಕಿತ್ತೂರು ಚೆನ್ನಮ್ಮ ವಸತಿ ಶಾಲೆಯ ಮಕ್ಕಳು ಪ್ರದರ್ಶಿಸುವರು. ಸಂಗೀತ ಶಿಕ್ಷಕಿ ಶ್ರೀದೇವಿ ಎಂ. ಪೂಜಾರ ನಿದೇಶಿಸಿದ್ದಾರೆ.

ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಂಕರ ಅರ್ಕಸಾಲಿ, ಅಕ್ಕಿಆಲೂರಿನ ನುಡಿ ಹಬ್ಬದ ಕಾರ್ಯಕಾರಿ ಸಮಿತಿಯ ಸದಸ್ಯ ವೀರಣ್ಣ ಸಾಲವಟಗಿ ಅವರನ್ನು ಸನ್ಮಾನಿಸಲಾಗುವುದು.

ಸಮಾರೋಪ:
ಫೆ.3ರಂದು ಸಂಜೆ ಗೌರಿಮಠದ ಶಿವಯೋಗಿ ಶಿವಾಚಾರ್ಯರು ಸಮಾರೋಪ ಭಾಷಣ ಮಾಡುವರು. ಬಣ್ಣದ ಮಠದ ಅಭಿನವರುದ್ರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು.

ಡಂಬರಮತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಾ ತಂಡದವರು ‘ಭಗತ್ ಸಿಂಗ್ ನ ಬಲಿದಾನ’ ನಾಟಕ ಪ್ರದರ್ಶಿಸುವರು. ಎನ್. ಎನ್. ಮಾಸಣಗಿ ನಿರ್ದೇಶಿಸಿದ್ದಾರೆ.

ರಾತ್ರಿ 8ಕ್ಕೆ ಹಾವೇರಿ ಜಿಲ್ಲಾ ಕಲಾ ಬಳಗದವರು ‘ಪಾಂಡವರ ಪಗಡೆಯಾಟ ಅರ್ಥಾತ್ ನಾಟಕಾ ಗೀಟಕಾ’ ಹಾಸ್ಯ ನಾಟಕವನ್ನು ಪ್ರದರ್ಶಿಸುವರು. ಕೆ. ಆರ್. ಹಿರೇಮಠ ರಚಿಸಿ, ನಿರ್ದೇಶಿಸಿದ್ದಾರೆ.

ರಾಷ್ಟ್ರೀಯ ಶೈಕ್ಷಣಿಕ ನಾವಿನ್ಯತಾ ಪುರಸ್ಕೃತರಾದ ಎಂ.ಬಿ.ಅಂಬಿಗೇರ ಮತ್ತು ಎಚ್. ಎಂ. ಪಡ್ನೇಶಿ ಅವರನ್ನು ಸನ್ಮಾನಿಸಲಾಗುವುದು.

ವಿದ್ಯಾ ನಾಟ್ಯಶಾಲೆ, ರೋಟರಿ ಶಾಲೆ, ಸರ್. ಎಂ. ವಿಶ್ವೇಶ್ವರಯ್ಯ ಶಾಲೆ, ನವ ಚೈತನ್ಯ ವಿದ್ಯಾಲಯ, ಗೆಳೆಯರ ಬಳಗದ ಜ್ಞಾನಗಂಗಾ ಶಿಕ್ಷಣ ಸಮಿತಿ ಪ್ರಾಥಮಿಕ ಶಾಲೆ, ಲಿಟಲ್ ಹಾರ್ಟ್ ಡ್ಯಾನ್ಸ್ ಅಕಾಡೆಮಿ, ವಿಶ್ವಕಲಾ ಡ್ಯಾನ್ಸ್ ಅಕಾಡೆಮಿ, ಪೃಥ್ವಿ ನೃತ್ಯ ಅವರಿಂದ ನೃತ್ಯಗಳ ಪ್ರದರ್ಶನವಿದೆ. ಕರೋಕಿ ಹಾಡುಗಾರಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.