ADVERTISEMENT

ರಾಣೆಬೆನ್ನೂರು | ಯೂರಿಯಾ ಗೊಬ್ಬರ ಹೆಚ್ಚಿನ ಬೆಲೆಗೆ ಮಾರಾಟ; ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 14:16 IST
Last Updated 27 ಜುಲೈ 2024, 14:16 IST

ರಾಣೆಬೆನ್ನೂರು: ‘ಸತತವಾಗಿ ಸುರಿಯುತ್ತಿರುವ ಮಳೆಯಿಂದ ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಿದ ಬೆಳೆಗಳಿಗೆ ಮೇಲು ಗೊಬ್ಬರವಾಗಿ ನೀಡಲು ಯೂರಿಯಾ ಗೊಬ್ಬರ ಅತ್ಯವಶ್ಯ. ಸರ್ಕಾರ ಯೂರಿಯಾ ಗೊಬ್ಬರ ಪೂರೈಸಲು ಮುಂಜಾಗ್ರತಾ ಕ್ರಮ ಕೈಗೊಂಡರೂ ನಗರದ ಆಗ್ರೋ ಕೇಂದ್ರಗಳಲ್ಲಿ ಸರ್ಕಾರ ನಿಗದಿಪಡಿಸಿದ ದರ ₹266 ಇದ್ದರೂ, ವ್ಯಾಪಾರಸ್ಥರು ₹ 300 ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಕೃಷಿ ಅಧಿಕಾರಿಗಳು ಕ್ರಮಕೈಗೊಂಡಿಲ್ಲ’ ಎಂದು ತಾಲ್ಲೂಕಿನ ಹುಲ್ಲತ್ತಿ ಗ್ರಾಮದ ಜಗದೀಶ ಕೆರೂಡಿ ಆರೋಪಿಸಿದ್ದಾರೆ.

‘ಬೆಳೆಗಳಿಗೆ ಯೂರಿಯಾ ಗೊಬ್ಬರವನ್ನು ಪೂರೈಕೆ ಮಾಡದಿದ್ದಲ್ಲಿ ಬೆಳೆಗಳು ವಿಪರೀತ ಶೀತದಿಂದ ಕಂದು ಬಣ್ಣಕ್ಕೆ ತಿರುಗಿ ಬೆಳೆ ಪ್ರಮಾಣ ಕುಂಠಿತವಾಗುತ್ತದೆ ಎಂದು ರೈತರು ಯೂರಿಯಾ ಗೊಬ್ಬರ ಖರೀದಿಸಲು ಮುಂದಾಗಿದ್ದಾರೆ. ಆದರೆ ಕೆಲವು ವ್ಯಾಪಾರಸ್ಥರು ಯೂರಿಯಾ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಅಲ್ಲದೇ ಯಾವುದಾದರೂ ಎರಡು ಗಟ್ಟಿ ಗೊಬ್ಬರವನ್ನು ಖರೀದಿಸಿದರೆ ಮಾತ್ರ ಯೂರಿಯಾ ಗೊಬ್ಬರ ಕೊಡುತ್ತೇವೆ ಎಂದು ಒತ್ತಾಯಿಸುತ್ತಿದ್ದಾರೆ’ ಎಂದರು.

‘ರಸ ಗೊಬ್ಬರ ಮಾರಾಟ ಅಂಗಡಿಗಳಲ್ಲಿ ದರ ಪಟ್ಟಿಯಲ್ಲಿ ಯೂರಿಯಾ ಗೊಬ್ಬರಕ್ಕೆ ಪ್ರತಿ ಚೀಲಕ್ಕೆ ₹ 266 ದರ ಹಾಕಿದ್ದು, ರೈತರಿಂದ ಚೀಲಕ್ಕೆ ₹ 300 ದರ ಪಡೆದು ಚೀಟಿಯಲ್ಲಿ ₹ 266 ದರ ಬರೆದು ಚೀಟಿ ಕೊಡುತ್ತಿದ್ದಾರೆ. ಈ ಬಗ್ಗೆ ರೈತರು ಪ್ರಶ್ನೆ ಮಾಡಿದರೆ ಸಾರಿಗೆ ವೆಚ್ಚ, ಲೋಡಿಂಗ್ ಮತ್ತು ಅನ್‌ ಲೋಡಿಂಗ್ ಮತ್ತು ಹಮಾಲಿ ವೆಚ್ಚ ಯಾರು ಕೊಡಬೇಕು ಎಂದು ರೈತರನ್ನೇ ಮರು ಪ್ರಶ್ನೆ ಮಾಡುತ್ತಾರೆ’ ಎಂದು ದೂರಿದರು.

ADVERTISEMENT

‘ಕೃಷಿ ಅಧಿಕಾರಿಗಳು ಕೂಡಲೇ ಇಂತಹ ಆಗ್ರೋ ಕೇಂದ್ರಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.