ಹಾವೇರಿ: 2019-20ನೇ ಸಾಲಿನಲ್ಲಿ ಕೋವಿಡ್-19 ಲಾಕ್ಡೌನ್ನಿಂದಾಗಿ ಜಿಲ್ಲೆಯಲ್ಲಿ ಪ್ರಮುಖವಾಗಿ ಮುಸುಕಿನಜೋಳ ಬೇಡಿಕೆ ಇಲ್ಲದ ಕಾರಣ ಸಂಕಷ್ಟಕ್ಕೊಳಗಾದ ಮೆಕ್ಕೆಜೋಳ ಬೆಳೆದ ಪ್ರತಿಯೊಬ್ಬ ರೈತರಿಗೂ ₹5 ಸಾವಿರ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮುಖಾಂತರ ಜಮಾ ಮಾಡುವ ಕಾರ್ಯ ಪ್ರಗತಿಯಲ್ಲಿ ಇರುತ್ತದೆ. ಈವರೆಗೆ ದಾಖಲೆ ಸಲ್ಲಿಸದ ಅರ್ಹ ರೈತರು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಿಗೆ ತ್ವರಿತವಾಗಿ ನಿಗದಿತ ದಾಖಲೆಗಳನ್ನು ಸಲ್ಲಿಸಲು ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಕೋರಿದ್ದಾರೆ.
ಜಿಲ್ಲೆಯಲ್ಲಿ ಒಬ್ಬರೇ ಮಾಲೀಕರನ್ನು ಹೊಂದಿರುವ 1,08,949 ರೈತರಿಗೆ ನೇರ ನಗದು ವರ್ಗಾವಣೆ ಮಾಡಲು ಸಂಬಂಧಿಸಿದ ಅಧಿಕಾರಿಗಳಿಂದ ಧೃಢೀಕರಣ ಮಾಡಲಾಗಿದೆ. ಜಂಟಿ ಖಾತೆ ಹೊಂದಿರುವ 12,535 ಗೋವಿನಜೋಳ ಬೆಳೆದ ರೈತರಿದ್ದು, ಇವರಲ್ಲಿ 1215 ರೈತರು ಮಾತ್ರ ನೇರ ನಗದು ವರ್ಗಾವಣೆಗೆ ದಾಖಲಾತಿಗಳನ್ನು ಸಲ್ಲಿಸಿರುತ್ತಾರೆ. ಮತ್ತು ‘ಪ್ರೂಟ್ಸ್ ತಂತ್ರಾಂಶ’ದಲ್ಲಿ ನೋಂದಣಿಯಾಗದೇ ಇರುವ ಜಿಲ್ಲೆಯ 97,397 ರೈತರ ಪೈಕಿ 36 ಜನ ರೈತರು ಮಾತ್ರ ದಾಖಲಾತಿಗಳನ್ನು ಸಲ್ಲಿಸಿರುತ್ತಾರೆ.
ಕೋವಿಡ್-19 ಮೆಕ್ಕೆಜೋಳ ನೇರ ನಗದು ವರ್ಗಾವಣೆ ಸದುಪಯೋಗ ಪಡೆಯಲು ಈಗಾಗಲೇ ಗ್ರಾಮ ಮತ್ತು ಗ್ರಾಮ ಪಂಚಾಯಿತಿವಾರು ಪ್ರಕಟಿಸಿರುವ ಪಟ್ಟಿಯಲ್ಲಿ ಹೆಸರು ಇರುವಂತಹ ರೈತರು ಆದಷ್ಟು ಬೇಗನೇ ದಾಖಲಾತಿಗಳಾದ ತಮ್ಮ ಆಧಾರ್ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ, ಸರ್ವೆ ನಂಬರ್ ವಿವರದೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ/ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಲ್ಲಿಸಿ ನೋಂದಣಿ ಮಾಡಿಸಿ ಆರ್ಥಿಕ ನೆರವನ್ನು ಪಡೆಯಲು ಕೋರಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.