ADVERTISEMENT

ಭಯೋತ್ಪಾದನೆ–ಯುದ್ಧದಿಂದ ಏನನ್ನೂ ಸಾಧಿಸಲಾಗದು: ವಿಜಯ ಮಹಾಂತೇಶ

ಗಾಂಧೀಜಿ–ಲಾಲ್‍ಬಹದ್ದೂರ ಶಾಸ್ತ್ರಿ ಜಯಂತಿ | ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 3:12 IST
Last Updated 3 ಅಕ್ಟೋಬರ್ 2025, 3:12 IST
ಹಾವೇರಿಯ ಗಾಂಧಿಭವನದಲ್ಲಿ ಗುರುವಾರ ನಡೆದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಅವರು ಚರಕ ಸುತ್ತಿ ದಾರ ನೆಯ್ದರು
ಹಾವೇರಿಯ ಗಾಂಧಿಭವನದಲ್ಲಿ ಗುರುವಾರ ನಡೆದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಅವರು ಚರಕ ಸುತ್ತಿ ದಾರ ನೆಯ್ದರು   

ಹಾವೇರಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿಯವರ ಜಯಂತಿಯನ್ನು ಜಿಲ್ಲೆಯಾದ್ಯಂತ ಗುರುವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಗಾಂಧೀಜಿ ಹಾಗೂ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಜನರು, ಅವರ ಬದುಕು ಹಾಗೂ ಕೊಡುಗಡೆಗಳನ್ನು ನೆನೆದರು. ಹಬ್ಬದ ಸಂದರ್ಭದಲ್ಲಿಯೂ ವಿದ್ಯಾರ್ಥಿಗಳು ಜಯಂತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಮನ ಸಲ್ಲಿಸಿದರು.

ಹಾವೇರಿಯ ಗಾಂಧಿಭವನದಲ್ಲಿ ಜಿಲ್ಲಾಡಳಿತದಿಂದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮ ನಡೆಸಲಾಯಿತು. ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿ, ‘ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿಯವರು, ದೇಶ ಕಂಡ ಧೀಮಂತ ನಾಯಕರು. ಅವರ ಆಚಾರ -ವಿಚಾರ, ಜೀವನ ಚರಿತ್ರೆ ಇಂದಿಗೂ ಪ್ರಸ್ತುತ’ ಎಂದರು.

‘ಗಾಂಧೀಜಿ ಅವರು ಅಹಿಂಸಾ ಹಾಗೂ ಸತ್ಯಾಗ್ರಹ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟವರು. ಮನುಷ್ಯ ನಿರ್ಮಾಣ ಮಾಡಿದ ಆಯುಧಕ್ಕಿಂತ ಹರಿತವಾದ ಆಯುಧ ಅಹಿಂಸಾ ಮಾರ್ಗವೆಂದು ಸಾರಿದರು. ಆದರೆ, ಇಂದು ಭಯೋತ್ಪಾದನೆ ಹಾಗೂ ಯುದ್ಧದ ಭೀತಿಯಿದೆ. ಇಂಥ ಹಿಂಸಾತ್ಮಕ ಕೃತ್ಯಗಳಿಂದ ಏನನ್ನೂ ಸಾಧಿಸಲಾಗದು’ ಎಂದು ಹೇಳಿದರು.

‘ಲಾಲ್‍ ಬಹದ್ದೂರ ಶಾಸ್ತ್ರಿ ಅವರು ದೇಶ ಕಂಡ ಸರಳ ಪ್ರಧಾನ ಮಂತ್ರಿಗಳಾಗಿದ್ದರು. ‘ಜೈ ಜವಾನ್ ಜೈ ಕಿಸಾನ್’ ಎಂಬ ಘೋಷವಾಕ್ಯದೊಂದಿಗೆ ರೈತರು ಹಾಗೂ ಯೋಧರನ್ನು ಹುರಿದುಂಬಿಸಿದವರು. ಗಾಂಧೀಜಿ ಹಾಗೂ ಶಾಸ್ತ್ರಿಯವರ ಆದರ್ಶ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯಬೇಕು. ಅವರ ತತ್ವ–ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾಷ್ಟ್ರಭಕ್ತಿ ಹೊಂದಬೇಕು’ ಎಂದು ಹೇಳಿದರು.

ಕುಣಿಮೆಳ್ಳಿಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅರವಿಂದ ಐರಣಿ ಅವರು ಉಪನ್ಯಾಸ ನೀಡಿದರು. ಹಲವು ಗಣ್ಯರು, ಖಾದಿ ಬಟ್ಟೆ ಹಾಗೂ ಗಾಂಧಿ ಟೋಪಿ ಧರಿಸಿದ್ದು ವಿಶೇಷವಾಗಿತ್ತು.

ಗಾಂಧೀಜಿ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಿದ್ದ ‘ಜಿಲ್ಲಾ ಮಟ್ಟದ ಬಾಪೂಜಿ’ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿನಯ ಗಾಜಿಪುರ, ದರ್ಶನ ಭಜಂತ್ರಿ, ದೀಕ್ಷಾ ಹಾದಿಮನಿ (ಪ್ರೌಢಶಾಲಾ ವಿಭಾಗದಿಂದ), ರೂಪಾ ಎಚ್. ಹೊನ್ನತ್ತಿ, ಕವನಾ ಕೋಣನತಂಬಿಗಿ, ಮಧುಮತಿ ಎಂ.ಸಿ. (ಪದವಿ ಪೂರ್ವ ವಿಭಾಗ), ಪೂರ್ಣಿಮಾ ಕರ್ಜಗಿ, ನಿವೇದಿತಾ ಬಡಿಗೇರ, ಸೌಜನ್ಯ ಹಲಗೇರಿ (ಪದವಿ ವಿಭಾಗ) ಅವರಿಗೆ ನಗದು ಹಾಗೂ ಪ್ರಮಾಣಪತ್ರ ಸಮೇತ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಸದಸ್ಯ ಸಂಜೀವಕುಮಾರ ನೀರಲಗಿ, ಜಿಲ್ಲಾ ಎಸ್‌ಪಿ ಯಶೋಧಾ ವಂಟಗೋಡಿ, ಜಿ.ಪಂ. ಸಿಇಒ ರುಚಿ ಬಿಂದಲ್, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್ ಎಲ್., ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ಸಹಾಯಕ ನಿರ್ದೇಶಕಿ ಭಾರತಿ ಎಚ್. ಇದ್ದರು.

ನಗರದ ಗಾಂಧಿವೃತ್ತದಲ್ಲಿರುವ ಗಾಂಧಿ ಪುತ್ಥಳಿಗೆ ಗಣ್ಯರು ಗುರುವಾರ ಬೆಳಿಗ್ಗೆ ಮಾಲಾರ್ಪಣೆ ಮಾಡಿದರು. ನಂತರ, ನಗರದ ಪ್ರಮುಖ ರಸ್ತೆಗಳಲ್ಲಿ ಸದ್ಭಾವನಾ ನಡಿಗೆ ನಡೆಯಿತು.

ವಿವಿಧ ಸಂಘಟನೆಗಳಿಂದ ಆಚರಣೆ: ಎಸ್ಎಫ್ಐ, ಡಿವೈಎಫ್ಐ, ಬಾಲ ಸಂಘಂ, ಸಾಹಿತ್ಯ ಕಲಾವಿದರ ಬಳಗ, ಪ್ರಗತಿಪರ ಸಂಘಟನೆ ವತಿಯಿಂದ ಹಾವೇರಿಯ ಗಾಂಧಿ ವೃತ್ತದಲ್ಲಿ ಮಹಾತ್ಮಾ ಗಾಂಧೀಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಯಂತಿ ಆಚರಿಸಲಾಯಿತು. ಸಾಹಿತಿ ಸತೀಶ ಕುಲಕರ್ಣಿ, ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಪರಿಮಳಾ ಜೈನ್, ಬಸವರಾಜ ಪೂಜಾರ, ನಾರಾಯಣ ಕಾಳೆ, ರೇಣುಕಾ ಕಹಾರ, ಉಡಚಪ್ಪ ಮಾಳಗಿ ಇದ್ದರು.

ಬಿಜೆಪಿ ಕಚೇರಿ: ಬಿಜೆಪಿಯ ಹಾವೇರಿ ಜಿಲ್ಲಾ ಘಟಕದ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿಯವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿರೂಪಾಕ್ಷಪ್ಪ ಬಳ್ಳಾರಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಮುರಿಗೇಪ್ಪ ಶೆಟ್ಟರ, ಮಂಜುನಾಥ ಮಡಿವಾಳರ, ಸಿದ್ದು ಚಿಕ್ಕಬಿದರಿ, ಸುರೇಶ ಹೊಸಮನಿ, ಎನ್.ಪಿ. ಚಾವಡಿ, ಚನ್ನಮ್ಮಾ ಪಾಟೀಲ ಇದ್ದರು.

ಬಿ.ಎಂ. ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್: ಹಾವೇರಿ ಹೊರವಲಯದಲ್ಲಿರುವ ಬಿ.ಎಂ. ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಗಾಂಧೀಜಿ ಹಾಗೂ ಲಾಲ್‌ ಬಹದ್ಧೂರ ಶಾಸ್ತ್ರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜನ್ಮದಿನ ಆಚರಿಸಲಾಯಿತು. ಸಿದ್ದರಾಜ ಕಲಕೋಟಿ, ಸಿದ್ದಲಿಂಗಸ್ವಾಮಿ ನೀರಲಗಿ ಇದ್ದರು.

ಎಸ್ಎಫ್ಐ ಡಿವೈಎಫ್ಐ ಬಾಲ ಸಂಘಂ ಸಾಹಿತ್ಯ ಕಲಾವಿದರ ಬಳಗ ಪ್ರಗತಿಪರ ಸಂಘಟನೆ ಪದಾಧಿಕಾರಿಗಳು ಹಾವೇರಿಯ ಗಾಂಧಿ ವೃತ್ತದಲ್ಲಿ ಮಹಾತ್ಮಾ ಗಾಂಧೀಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು 

‘ಸ್ವದೇಶಿ ವಸ್ತುಗಳ ಬಳಕೆಗೆ ಆದ್ಯತೆ ನೀಡಿದ್ದ ಗಾಂಧೀಜಿ’

ಬ್ಯಾಡಗಿ: ‘ಮಹಾತ್ಮ ಗಾಂಧೀಜಿಯವರು ಸ್ವದೇಶಿ ವಸ್ತುಗಳನ್ನು ಬಳಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಖಾದಿ ಉತ್ಪಾದಿಸಿ ಅದನ್ನು ತೊಡುವ ಸಂಪ್ರದಾಯವನ್ನು ಜನಪ್ರಿಯಗೊಳಿಸಿದರು’ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತ ಗುರುವಾರ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲಬಹಾದ್ದೂರ ಶಾಸ್ತ್ರೀಜಿಯವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸತ್ಯ, ಶಾಂತಿ ಹಾಗೂ ಅಹಿಂಸೆಯನ್ನು ಮುಂದಿಟ್ಟುಕೊಂಡು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಗಾಂಧೀಜಿ ಉಪವಾಸ ಸತ್ಯಾಗ್ರಹ, ಅಸಹಕಾರ ಚಳವಳಿಯ ಮೂಲಕ ದೇಶದ ಗಮನ ಸೆಳೆದಿದ್ದರು.

ತಹಶೀಲ್ದಾರ್ ಚಂದ್ರಶೇಖರ ನಾಯಕ್‌ ಮಾತನಾಡಿ, ‘ದೇಶ ಕಂಡ ಅತ್ಯಂತ ಪ್ರಾಮಾಣಿಕ ರಾಜಕಾರಣಿಯಾದ ಲಾಲ್‌ ಬಹಾದ್ದೂರ ಶಾಸ್ತ್ರೀಜಿಯವರು ಒಬ್ಬ ಅಪ್ರತಿಮ ನಾಯಕ, ಶ್ರೇಷ್ಠ ಮುತ್ಸದ್ದಿ, ‌ಸಜ್ಜನ ನೇತಾರರಾಗಿ ದೇಶದ ಪ್ರಗತಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದರು.

ಪ್ರಕಾಶ ಕೊರಮರ, ಶಿಕ್ಷಕರಾದ ಎಂ.ಎಫ್‌.ಕರೆಣ್ಣನವರ ಮತ್ತು ವೈ.ಟಿ.ಹೆಬ್ಬಳ್ಳಿ ಅವರ ತಂಡದಿಂದ ರಾಮ ಭಜನೆಯನ್ನು ಪ್ರಸ್ತುತಪಡಿಸಲಾಯಿತು. ಪೌರ ಕಾರ್ಮಿಕ ಸುರಕ್ಷತಾ ಕಿಟ್ ವಿತರಿಸಲಾಯಿತು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದಾನಪ್ಪ ಚೂರಿ, ಬೀರಪ್ಪ ಬಣಕಾರ, ಗಿರೀಶ ಇಂಡಿಮಠ, ನಗರ ಆಶ್ರಯ ಸಮಿತಿ ಸದಸ್ಯ ಅಬ್ದುಲ್‌ಮುನಾಫ್‌ ಎರೇಶೀಮಿ, ದುರ್ಗೇಶ ಗೋಣೆಮ್ಮನವರ, ತಾಲ್ಲೂಕು ಪಂಚಾಯಿತಿ ಇಒ ಕೆ.ಎಂ.ಮಲ್ಲಿಕಾರ್ಜುನ, ಬಿಇಒ ಎಸ್‌.ಜಿ.ಕೋಟಿ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.