ಹಾವೇರಿ: ವಿದ್ಯಾರ್ಥಿಗಳ ತಲೆಗೆ ರಟ್ಟಿನ ಡಬ್ಬಿ ಹಾಕಿ, ಪರೀಕ್ಷೆ ಬರೆಸಿದ್ದ ಭಗತ್ ಪಿಯು ಕಾಲೇಜಿನ ಮಾನ್ಯತೆ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣಾ ಬಾಜಪೇಯಿ ತಿಳಿಸಿದ್ದಾರೆ.
‘ನೋಟಿಸ್ಗೆ ಆಡಳಿತ ಮಂಡಳಿ ಸರಿ ಯಾಗಿ ವಿವರಣೆ ಕೊಟ್ಟಿಲ್ಲ. ಕಾಟಾಚಾರಕ್ಕೆ ಎರಡು ಸಾಲಿನ ತಪ್ಪೊಪ್ಪಿಗೆ ಪತ್ರ ಕೊಟ್ಟಿದೆ’ ಎಂದೂ ಅವರು ತಿಳಿಸಿದ್ದಾರೆ.
ಪರೀಕ್ಷಾ ನಕಲು ತಡೆಯುವ ವಿಧಾನಗಳ ಕುರಿತು 15 ದಿನ ಗಳಿಂದಲೂ ಅಂತರ್ಜಾಲದಲ್ಲಿ ಶೋಧಿಸಿದ್ದ ಕಾಲೇಜಿನ ಆಡಳಿತ ಮಂಡಳಿ, ಮೊದಲು ಚೀನಾ ಹಾಗೂ ಜಪಾನ್ ದೇಶಗಳಲ್ಲಿರುವ ಕೆಲವು ವಿಚಿತ್ರ ವ್ಯವಸ್ಥೆಗಳನ್ನು ವಿದ್ಯಾರ್ಥಿಗಳ ಮೇಲೆ ಪ್ರಯೋಗಿಸಲು ನಿರ್ಧರಿಸಿತ್ತು ಎನ್ನಲಾಗಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಸಿ. ಪೀರಜಾದೆ ಅವರು ಆಡಳಿತ ಮಂಡಳಿ ಸದಸ್ಯರನ್ನು ವಿಚಾರಣೆ ನಡೆಸಿದಾಗ ಈ ವಿಷಯವನ್ನು ಅವರೇ ಬಹಿರಂಗಪಡಿಸಿದ್ದಾರೆ.
‘ಪರೀಕ್ಷಾ ಪ್ರಕ್ರಿಯೆ ಭಿನ್ನವಾಗಿರಬೇಕು ಹಾಗೂ ಯಾವುದೇ ಕಾರಣಕ್ಕೂ ನಕಲಿಗೆ ಅವಕಾಶ ನೀಡಬಾರದು ಎನ್ನುವುದು ನಮ್ಮ ಉದ್ದೇಶವಾಗಿತ್ತು. ಚೀನಾ ಹಾಗೂ ಜಪಾನ್ ರಾಷ್ಟ್ರಗಳಲ್ಲಿ ತುಂಬ ಕಠಿಣ ವಿಧಾನಗಳಿ
ದ್ದವು. ಅವುಗಳ ಬಳಕೆಗೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ, ತಲೆಗೆ ರಟ್ಟಿನ ಡಬ್ಬ ಹಾಕಿಸಿ ಪರೀಕ್ಷೆ ಬರೆಸಲು ಮುಂದಾದೆವು’ ಎಂದು ಆಡಳಿತ ಮಂಡಳಿ ಸದಸ್ಯ ಎಂ.ಬಿ.ಸತೀಶ್ ಹೇಳಿದ್ದಾರೆ.
‘ಪರೀಕ್ಷೆಗೆ ರಟ್ಟಿನ ಡಬ್ಬದ ಸಮೇತ ಹಾಜರಾಗುವಂತೆ ಮೊದಲೇ ಸೂಚಿಸಿದ್ದೆವು. 56 ವಿದ್ಯಾರ್ಥಿಗಳು ತಾವೇ ಡಬ್ಬ ತಂದಿದ್ದರು. ಇನ್ನುಳಿದ 16 ವಿದ್ಯಾರ್ಥಿಗಳು ಅದನ್ನು ಧರಿಸಲು ನಿರಾಕರಿಸಿದ್ದರು. ಉಪ ನಿರ್ದೇಶಕರು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡುತಿದ್ದಂತೆಯೇ ಅವುಗಳನ್ನು ತೆಗೆಸಿದೆವು’ ಎಂದೂ
ಒಪ್ಪಿಕೊಂಡಿದ್ದಾರೆ.
ಮೆಚ್ಚುಗೆಯ ನಿರೀಕ್ಷೆಯೇ ಮುಳುವಾಯಿತು!
‘ನಮ್ಮ ಈ ಪ್ರಯೋಗವನ್ನು ಜಿಲ್ಲಾಡಳಿತ ಪ್ರಶಂಸಿಸುತ್ತದೆ ಎಂದು ಭಾವಿಸಿದ್ದೆವು. ಅದೇ ವಿಶ್ವಾಸದಲ್ಲಿ ನಾವೇ ಡಬ್ಬ ಧರಿಸಿರುವ ವಿದ್ಯಾರ್ಥಿಗಳ ಫೋಟೊವನ್ನು ಫೇಸ್ಬುಕ್ಗೆ ಹಾಕಿದ್ದೆವು. ಆದರೆ, ಅದೇ ನಮಗೆ ಮುಳುವಾಯಿತು’ ಎಂದು ಆಡಳಿತ ಮಂಡಳಿ ಸದಸ್ಯ ಸತೀಶ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.