
ಹಾವೇರಿ: ಪಿಎಂ-ಕಿಸಾನ್ ಪ್ರೋತ್ಸಾಹಧನ ಪಡೆಯಲು ಇ–ಕೆವೈಸಿ ಕಡ್ಡಾಯ ಮಾಡಲಾಗಿದ್ದು, ಜಿಲ್ಲೆಯ ಹೆಚ್ಚಿನ ಸಂಖ್ಯೆಯ ರೈತರು ಇ–ಕೆವೈಸಿ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ, ಸರ್ವರ್ ಕೈಕೊಡುತ್ತಿದೆ. ರೈತರು ಸರದಿಯಲ್ಲಿ ನಿಂತು ಸುಸ್ತಾಗುತ್ತಿದ್ದಾರೆ.
ರೈತ ಸಂಪರ್ಕ ಕೇಂದ್ರ, ಗ್ರಾಮ್ ಒನ್, ಪಶು ಇಲಾಖೆ, ತೋಟಗಾರಿಕೆ ಇಲಾಖೆ ಕಚೇರಿ ಸೇರಿ ಹಲವು ಕಡೆಗಳಲ್ಲಿ ಇ–ಕೆವೈಸಿ ಮಾಡಲು ಅವಕಾಶ ನೀಡಲಾಗಿದೆ. ಲಾಗಿನ್ ಮಾಡಲು ಸಹ ಸರ್ವರ್ ಸಿಗುತ್ತಿಲ್ಲ. ಡಾಟಾ ಎಂಟ್ರಿ ಆಪರೇಟರ್ಗಳು ಕಂಪ್ಯೂಟರ್ ಮುಂದೆ ಸುಮ್ಮನೇ ಕುಳಿತುಕೊಳ್ಳುವ ಹಾಗೂ ರೈತರು ಅವರನ್ನೇ ನೋಡುತ್ತ ಸರದಿಯಲ್ಲಿ ನಿಲ್ಲುವ ದೃಶ್ಯಗಳು ಕಂಡುಬರುತ್ತಿವೆ.
‘ಸರ್ವರ್ ಸಿಗದಿದ್ದರಿಂದ ಇ–ಕೆವೈಸಿ ಮಾಡಲು ಆಗುತ್ತಿಲ್ಲ. ಎರಡು ದಿನದಿಂದ ಹಾವೇರಿ ರೈತ ಸಂಪರ್ಕ ಕೇಂದ್ರಕ್ಕೆ ಬಂದು ವಾಪಸ್ ಹೋಗುತ್ತಿದ್ದೇನೆ’ ಎಂದು ರೈತ ಚನ್ನವೀರಪ್ಪ ಹೇಳಿದರು.
ಇ–ಕೆವೈಸಿ ಮಾಡಲು ಸರ್ವರ್ ಸಮಸ್ಯೆ ಇರುವುದನ್ನೇ ಲಾಭ ಮಾಡಿಕೊಂಡಿರುವ ಕೆಲ ಗ್ರಾಮ ಒನ್ ಕೇಂದ್ರದವವರು, ಕೆಲ ರೈತರಿಂದ ಹಣ ಪಡೆದು ಇ–ಕೆವೈಸಿ ಮಾಡುತ್ತಿರುವ ಆರೋಪವಿದೆ. ಒಂದು ಕೆವೈಸಿಗೆ ₹ 100ರಿಂದ ₹200 ಪಡೆಯುತ್ತಿರುವುದಾಗಿ ರೈತರು ದೂರುತ್ತಿದ್ದಾರೆ. ಪಿಎಂ-ಕಿಸಾನ್ ಯೋಜನೆಯಡಿ ವಾರ್ಷಿಕ ₹ 6 ಸಾವಿರ ಪ್ರೋತ್ಸಾಹ ಧನ ಬರುವ ಆಸೆಯಿಂದ ಕೆಲ ರೈತರು ಹಣ ಕೊಟ್ಟು ಇ–ಕೆವೈಸಿ ಮಾಡಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.