ADVERTISEMENT

ಅಚ್ಚರಿಯ ಪರಂಪರೆ ಜಾನಪದ: ಶ್ರೀಪಾದ‌ ಶೆಟ್ಟಿ

’ಜಾನಪದ‌ ಜಗತ್ತು’ ಗೋಷ್ಠಿಯಲ್ಲಿ ವಿಷಯ ಮಂಡನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 21:12 IST
Last Updated 8 ಜನವರಿ 2023, 21:12 IST
ಸಾಹಿತ್ಯ ಸಮ್ಮೇಳನದ ಮೂರನೇ ದಿನ ನಡೆದ ‘ಜಾನಪದ ಜಗತ್ತು’ ಗೋಷ್ಠಿಯಲ್ಲಿ ಜಾನಪದ ತಜ್ಞ ಶ್ರೀಪಾದ‌ ಶೆಟ್ಟಿ ಮಾತನಾಡಿದರು /ಪ್ರಜಾವಾಣಿ ಚಿತ್ರ
ಸಾಹಿತ್ಯ ಸಮ್ಮೇಳನದ ಮೂರನೇ ದಿನ ನಡೆದ ‘ಜಾನಪದ ಜಗತ್ತು’ ಗೋಷ್ಠಿಯಲ್ಲಿ ಜಾನಪದ ತಜ್ಞ ಶ್ರೀಪಾದ‌ ಶೆಟ್ಟಿ ಮಾತನಾಡಿದರು /ಪ್ರಜಾವಾಣಿ ಚಿತ್ರ   

ಪಾಪು-ಚಂಪಾ ವೇದಿಕೆ(ಹಾವೇರಿ): ‘ಜಾನಪದ ಜಗತ್ತು ವಿಸ್ಮಯಗಳ ಆಗರ. ಪ್ರವಾಹ ರೂಪದ ಚೇತನ. ಶಾಸ್ತ್ರಕಾವ್ಯಗಳ ಪರಿಚಯವಿಲ್ಲದ ಪೂರ್ವಜರು ಬಿಟ್ಟುಹೋದ ಅಚ್ಚರಿಯ ಪರಂಪರೆ ಅದಾಗಿದೆ’ ಎಂದು ಜಾನಪದ ತಜ್ಞ ಶ್ರೀಪಾದ‌ ಶೆಟ್ಟಿ ಹೇಳಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೇ ದಿನ ನಡೆದ ‘ಜಾನಪದ‌ ಜಗತ್ತು’ ಗೋಷ್ಠಿಯಲ್ಲಿ ಆಶಯ ನುಡಿಯಾಡಿದ ಅವರು, ‘ಭಾರತದ ಜಾನಪದ ಕಲೆಯನ್ನು ಮೊದಲು ಅಧ್ಯಯನ ಮಾಡಿದ್ದು ವಿದೇಶಿಗರು. ನಂತರ ಅದರಲ್ಲಿ ಅಡಗಿರುವ ಅಮೂಲ್ಯ ರತ್ನ ನಮಗೆ ಗೋಚರಿಸಿತು’ ಎಂದರು.

‘ಉತ್ತರಕನ್ನಡ ಜಿಲ್ಲೆಯ ಹಾಲಕ್ಕಿ ಸಮುದಾಯದವರ ಸುಗ್ಗಿ ಕುಣಿತ, ಕಿರೀಟದ ತುರಾಯಿ ಅಲ್ಲಿಯ ಜನಪದ ಸಂಸ್ಕೃತಿಯ ಪ್ರತೀಕ.‌ ಗುಡ್ಡಗಾಡು ಜನರ ಬದುಕಲ್ಲಿಯೂ ಜನಪದ ಸಂಸ್ಕೃತಿ ಕಾಣಬಹುದು. ಬಹುಮುಖಿ ಸಂಸ್ಕೃತಿ ಪ್ರತಿನಿಧಿಸುವ ದೇಶ ನಮ್ಮದಾಗಿದ್ದು, ಅದರ ಒಡಲಲ್ಲಿ ಹಾಡು, ಕಥೆ, ಗಾದೆ, ಮಹಾಕಾವ್ಯ, ಖಂಡಕಾವ್ಯ, ತಾಯಿ, ತವರು, ನಾಟಿಪದ, ಸುಗ್ಗಿಪದ, ಬುಡಕಟ್ಟು, ಆಚರಣೆ, ಲಾವಣಿ, ಮಂತ್ರ, ಮಾಟ ಎಲ್ಲವೂ ಅಡಗಿದೆ’ ಎಂದು ಹೇಳಿದರು.

ADVERTISEMENT

‘ಜನಪದ ಕಲೆಗಳ ಪ್ರಕಾರಗಳು ಹಾಗೂ ಆರಾಧನೆಗಳು’ ಕುರಿತು ವಿಷಯ ಮಂಡಿಸಿದ ಜನಪದ ಕಲಾವಿದ ವೇಮಗಲ್ ನಾರಾಯಣಸ್ವಾಮಿ, ‘ಆಂಧ್ರಪ್ರದೇಶ, ಕೇರಳದಲ್ಲಿ ಜನಪದ ಕಲೆಗಳು, ಆರಾಧನೆಗಳು ಅಲ್ಲಿಯ ಜನರ ಬದುಕಲ್ಲಿ ಬೇರೂರಿವೆ. ಸಾವಿರಾರು ಜನಪದ ಹಾಡುಗಳಲ್ಲಿ ಜೀವನ ಸತ್ಯ ಅಡುಗಿರುವುದನ್ನು ಗಮನಿಸಬಹುದು. ರಾಜ್ಯದ ಅನೇಕ ವಿದ್ವಾಂಸರು, ಆಸಕ್ತರು, ಪತ್ರಿಕೆಗಳು ಜನಪದ ಕಲೆಗಳ ಬಗ್ಗೆ ಬೆಳಕು‌ ಚೆಲ್ಲುತ್ತಿವೆ’ ಎಂದರು.

ಜಾನಪದದ ಪ್ರಸ್ತುತತೆ ಪ್ರಾಧ್ಯಾಪಕಿ ಕೆ.‌ ಸೌಭಾಗ್ಯವತಿ ವಿಷಯ ಮಂಡಿಸಿ, ‘ಜಾನಪದದಲ್ಲಿ ನಾಗರಿಕತೆಗೆ ಬರವಿಲ್ಲ. ಈಗಿನದು ಮಾಹಿತಿಯುಗವಾಗಿದ್ದ, ಸಮೂಹ ಮಾಧ್ಯಮ‌ ಕೇಂದ್ರೀಕೃತವಾಗಿದೆ. ಗ್ರಾಮೀಣ ಜನರ ಧ್ವನಿ, ದೇಶದ ಮೂಲ ಸಂಸ್ಕೃತಿಯ ಬೇರು ಜಾನಪದ. ಜನಪದ ಹಾಡುಗಳು ಜನಪದದ ಭಂಡಾರ. ಪ್ರಸ್ತುತ ಜಾನಪದ ಹಾಡುಗಳನ್ನು ಜಾಗೃತಿಗಾಗಿ ಬಳಸಿಕೊಳ್ಳಲಾಗುತ್ತಿದೆ’ ಎಂದರು.

ನಿವೃತ್ತ ಪೊಲೀಸ್ ಅಧಿಕಾರಿ ಡಾ. ಕೆ.‌ ಅಭಯಕುಮಾರ, ‘ಜನಪದ ಸಾಹಿತ್ಯ ಪ್ರಭೇದಗಳು’ ವಿಷಯ ಮಂಡಿಸಿದರು. ನಾಡಿನ ಸಂಸ್ಕೃತಿ ಬಿಂಬಿಸುವ ನಿಟ್ಟಿನಲ್ಲಿ‌ ಜನಪದ ಮಹಾಕಾವ್ಯಗಳ ಅಧ್ಯಯನ ನಡೆದಿದೆ’ ಎಂದರು.

ಜಾನಪದ ವಿಶ್ವವಿದ್ಯಾಲಯದ ಕುಲಪತಿ ಟಿ.ಎಂ. ಭಾಸ್ಕರ್ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.