ADVERTISEMENT

ಬೆಳೆಗಾರರಿಗೆ ದಕ್ಕದ ‘ಹೈಟೆಕ್ ಮಾರುಕಟ್ಟೆ’

ಜಿಲ್ಲೆಯಲ್ಲಿ ಹೆಚ್ಚಾದ ರೇಷ್ಮೆ ಕೃಷಿ | ಇನ್ನೂ ಮುಗಿಯದ ಕಾಮಗಾರಿ | ಕೆಎಚ್‌ಬಿಯಿಂದ ಮತ್ತಷ್ಟು ವಿಳಂಬ

ಸಂತೋಷ ಜಿಗಳಿಕೊಪ್ಪ
Published 18 ಜನವರಿ 2026, 3:26 IST
Last Updated 18 ಜನವರಿ 2026, 3:26 IST
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕೂನಬೇವು- ಹೂಲಿಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ‘ಹೈಟೆಕ್‌ ರೇಷ್ಮೆ ಮಾರುಕಟ್ಟೆ’ 
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕೂನಬೇವು- ಹೂಲಿಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ‘ಹೈಟೆಕ್‌ ರೇಷ್ಮೆ ಮಾರುಕಟ್ಟೆ’    

ಹಾವೇರಿ: ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ರೇಷ್ಮೆ ಉತ್ಪಾದಿಸುತ್ತಿರುವ ಹಾವೇರಿ ಜಿಲ್ಲೆಯಲ್ಲಿ ‘ಹೈಟೆಕ್ ಮಾರುಕಟ್ಟೆ’ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಈ ವರ್ಷವೂ ರೇಷ್ಮೆ ಬೆಳಗಾರರಿಗೆ ಪೂರ್ಣ ಪ್ರಮಾಣದಲ್ಲಿ ಹೈಟೆಕ್ ಮಾರುಕಟ್ಟೆ ದಕ್ಕುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಜಿಲ್ಲೆಯ ಬ್ಯಾಡಗಿ, ಹಾನಗಲ್‌, ಹಾವೇರಿ, ಹಿರೇಕೆರೂರು, ರಟ್ಟೀಹಳ್ಳಿ, ರಾಣೆಬೆನ್ನೂರು, ಸವಣೂರು ಹಾಗೂ ಶಿಗ್ಗಾವಿ ತಾಲ್ಲೂಕಿನಲ್ಲಿ ಹಲವು ರೈತರು ರೇಷ್ಮೆ ಬೆಳೆಯುತ್ತಿದ್ದಾರೆ. ಹಾವೇರಿಯ ಆರ್‌ಟಿಒ ಕಚೇರಿ ಬಳಿ ಇರುವ ರೇಷ್ಮೆ ಮಾರುಕಟ್ಟೆ, ವ್ಯಾಪಾರಿಗಳಿಲ್ಲದೇ ಈಗಾಗಲೇ ಬಂದ್ ಆಗಿದೆ.

ರೇಷ್ಮೆ ಬೆಳೆಯುತ್ತಿರುವ ಜಿಲ್ಲೆಯ ರೈತರು, ದೂರದ ರಾಮನಗರ ಹಾಗೂ ಶಿಡ್ಲಘಟ್ಟ ಮಾರುಕಟ್ಟೆಗೆ ನಿತ್ಯವೂ ಹೋಗಿ ಬರುತ್ತಿದ್ದಾರೆ. ಬೆಳೆ ಕಟಾವು ವೆಚ್ಚದ ಜೊತೆಯಲ್ಲಿ ಸಾರಿಗೆ ವೆಚ್ಚವೂ ಹೆಚ್ಚಾಗಿದೆ. ಇದೇ ಕಾರಣಕ್ಕೆ ಸ್ಥಳೀಯವಾಗಿ ಹೈಟೆಕ್ ಮಾರುಕಟ್ಟೆ ನಿರ್ಮಿಸಲು ರೈತರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ.

ADVERTISEMENT

ರೈತರ ಒತ್ತಾಯಕ್ಕೆ ಮಣಿದ ಸರ್ಕಾರ, ರಾಣೆಬೆನ್ನೂರು ತಾಲ್ಲೂಕಿನ ಕೂನಬೇವು- ಹೂಲಿಹಳ್ಳಿ ಬಳಿ ‘ಹೈಟೆಕ್‌ ರೇಷ್ಮೆ ಮಾರುಕಟ್ಟೆ’ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಿದೆ. ನಿರ್ಮಾಣ ಕಾಮಗಾರಿ ಜವಾಬ್ದಾರಿಯನ್ನು ಕರ್ನಾಟಕ ಗೃಹ ಮಂಡಳಿಗೆ (ಕೆಎಚ್‌ಬಿ) ವಹಿಸಲಾಗಿದೆ. ಆದರೆ, ಕೆಎಚ್‌ಬಿ ಕಡೆಯಿಂದಲೇ ಕಾಮಗಾರಿ ವಿಳಂಬವಾಗುತ್ತಿರುವ ಆರೋಪ ರೈತರದ್ದಾಗಿದೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೂನಬೇವು- ಹೂಲಿಹಳ್ಳಿ ಗ್ರಾಮದ ಸರ್ವೇ ನಂ. 123ರಲ್ಲಿ 5 ಎಕರೆ 1 ಗುಂಟೆ 8 ಆಣೆ ಜಾಗದಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ. ₹ 11.99 ಕೋಟಿ ಮೊತ್ತಕ್ಕೆ ಕೆಎಚ್‌ಬಿ ಕೆಲಸದ ಗುತ್ತಿಗೆ ಪಡೆದುಕೊಂಡಿದೆ.

2024ರ ನವೆಂಬರ್ 1ರಂದು ಕಾಮಗಾರಿ ಶುರು ಮಾಡಲಾಗಿತ್ತು. ಅಂದಿನಿಂದ 11 ತಿಂಗಳ ಒಳಗಾಗಿ ಕೆಲಸ ಮುಗಿಸುವುದಾಗಿ ಕೆಎಚ್‌ಬಿ ಭರವಸೆ ನೀಡಿತ್ತು. ಆದರೆ, 2025 ಮುಗಿದು ಈಗ 2026ನೇ ವರ್ಷ ಶುರುವಾಗಿದೆ. ಸದ್ಯ ಶೇ 60ರಷ್ಟು ಭೌತಿಕ ಕಾಮಗಾರಿ ಮಾತ್ರ ಮುಗಿದಿದೆ.

ಕಾಮಗಾರಿ ಮುಗಿಸಲು ಗೃಹ ಮಂಡಳಿಯವರು ಪದೇ ಪದೇ ಹೆಚ್ಚುವರಿ ಕಾಲಾವಕಾಶ ಪಡೆಯುತ್ತಿದ್ದಾರೆ. 2025ರ ಡಿಸೆಂಬರ್‌ನಲ್ಲಿ ಕಾಮಗಾರಿ ಮುಗಿಸುವುದಾಗಿ ಹೇಳಿದ್ದ ಕೆಎಚ್‌ಬಿ, 2026ರ ಜನವರಿಗೂ ಕಾಮಗಾರಿ ಮುಗಿಸಿಲ್ಲ. ಜೊತೆಗೆ, ಇನ್ನೂ ಮೂರ್ನಾಲ್ಕು ತಿಂಗಳ ಕಾಲಾವಕಾಶ ಕೋರುತ್ತಿದೆ.

‘ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ಹೈಟೆಕ್‌ ಮಾರುಕಟ್ಟೆ ಅತ್ಯಗತ್ಯವಾಗಿದೆ. ಇದೇ ಕಾರಣಕ್ಕೆ ಮಾರುಕಟ್ಟೆ ನಿರ್ಮಿಸಲಾಗುತ್ತಿದ್ದು, ಕೆಎಚ್‌ಬಿ ಅವರಿಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಆದರೆ, ಅವರು ಇದುವರೆಗೂ ಕಾಮಗಾರಿ ಮುಗಿಸಿಲ್ಲ. ಮುಂದಿನ ನಾಲ್ಕು ತಿಂಗಳ ಒಳಗಾಗಿ ಕಾಮಗಾರಿ ಮುಗಿಸುವುದಾಗಿ ಪುನಃ ಹೇಳುತ್ತಿದ್ದಾರೆ’ ಎಂದು ರೇಷ್ಮೆ ಇಲಾಖೆಯ ಉಪನಿರ್ದೇಶಕ ಮಾಲತೇಶ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇ–ಹರಾಜು, ಇ–ಪಾವತಿ ಸೇರಿ ಸಕಲ ಸೌಲಭ್ಯ ಇರುವ ರಾಮನಗರದ ಹೈಟೆಕ್‌ ಮಾರುಕಟ್ಟೆ ರೀತಿಯಲ್ಲಿಯೇ, ಹಾವೇರಿ ಜಿಲ್ಲೆಯಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಿಸುವ ಯೋಜನೆ ಇದಾಗಿದೆ. ಆದಷ್ಟು ಬೇಗ ಮಾರುಕಟ್ಟೆ ಕಾಮಗಾರಿ ಮುಗಿಸಿ, ಬಳಕೆಗಾಗಿ ನಮ್ಮ ಇಲಾಖೆಗೆ ವರ್ಗಾಯಿಸುವಂತೆ ಕೆಎಚ್‌ಬಿ ಅಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದು ಹೇಳಿದರು.

ಹೈಟೆಕ್ ಮಾರುಕಟ್ಟೆ ಒಳಭಾಗದಲ್ಲಿ ಟೈಲ್ಸ್‌ ಅಳವಡಿಕೆ ಕೆಲಸ ನಡೆಯುತ್ತಿದ್ದು ಬೇಗನೇ ಕಾಮಗಾರಿ ಮುಗಿಸುವಂತೆ ಒತ್ತಡ ಹಾಕಲಾಗುತ್ತಿದೆ. ಆದರೆ ಮೂರ್ನಾಲ್ಕು ತಿಂಗಳಿನಲ್ಲಿ ಕಾಮಗಾರಿ ಮುಗಿಸುವುದಾಗಿ ಕೆಎಚ್‌ಬಿ ಅಧಿಕಾರಿಗಳು ಹೇಳುತ್ತಿದ್ದಾರೆ
ಮಾಲತೇಶ ಪಾಟೀಲ ರೇಷ್ಮೆ ಇಲಾಖೆ ಉಪನಿರ್ದೇಶಕ

ಉತ್ತರ ಕರ್ನಾಟಕಕ್ಕೆ ಅನುಕೂಲ

ಇಡೀ ಕರ್ನಾಟಕದಲ್ಲಿ ರಾಮನಗರದಲ್ಲಿ ಮಾತ್ರ ರೇಷ್ಮೆ ಮಾರಾಟ ಹೆಚ್ಚಿದೆ. ಹೀಗಾಗಿ ಎಲ್ಲ ಜಿಲ್ಲೆಯ ರೈತರು ರಾಮನಗರಕ್ಕೆ ಹೋಗುವುದು ಅನಿವಾರ್ಯವಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳ ರೈತರು ಸಹ ದುಬಾರಿ ವೆಚ್ಚ ಮಾಡಿಕೊಂಡು ರಾಮನಗರಕ್ಕೆ ಹೋಗಿ ಬರುತ್ತಿದ್ದಾರೆ. ರಾಣೆಬೆನ್ನೂರಿನಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣವಾದರೆ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಗೂ ಅನುಕೂಲವಾಗಲಿದೆ. ಬೆಳಗಾವಿ ಗದಗ ಕೊಪ್ಪಳ ವಿಜಯಪುರ ಬಾಗಲಕೋಟೆ ವಿಜಯನಗರ ಉತ್ತರ ಕನ್ನಡ ಧಾರವಾಡ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ರೈತರಿಗೂ ಹಾವೇರಿ ಹೈಟೆಕ್ ಮಾರುಕಟ್ಟೆ ಹತ್ತಿರವಾಗಲಿದೆ.

- ಹೈಟೆಕ್‌ ಮಾರುಕಟ್ಟೆ ಸ್ವರೂಪ

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಹೈಟೆಕ್ ಮಾರುಕಟ್ಟೆ ನಿರ್ಮಾಣ ಆಗುವುದರಿಂದ ಹಾವೇರಿ ಜಿಲ್ಲೆ ಮಾತ್ರವಲ್ಲದೇ ಸುತ್ತಮುತ್ತಲಿನ ಜಿಲ್ಲೆಗಳ ರೈತರು ಸಹ ವಾಹನಗಳಲ್ಲಿ ಬೇಗನೇ ಮಾರುಕಟ್ಟೆಗೆ ಬರಬಹುದು. ಬೆಳೆಗಾರರಿಗೆ ಹೊಸ ತಂತ್ರಜ್ಞಾನದ ಮೂಲಕ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಆರಂಭದಲ್ಲಿ ಭದ್ರತಾ ಕೊಠಡಿ ರೈತ ಮಿತ್ರ ಕೊಠಡಿ ಸಹಾಯವಾಣಿ ಅಗ್ನಿಶಾಮಕ ತಾಂತ್ರಿಕ ಬೆಂಬಲ ಕೊಠಡಿ ಪೊಲೀಸ್‌ ಹೊರ ಠಾಣೆ ವಿದ್ಯುತ್‌ ನಿರ್ವಹಣೆ ಕೊಠಡಿ ಇರಲಿದೆ. ನೆಲದಡಿಯ ಟ್ಯಾಂಕ್‌ ಕಾಂಕ್ರೀಟ್‌ ರಸ್ತೆ ಕಾಂಪೌಂಡ್ ಸಹ ನಿರ್ಮಾಣವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.