ADVERTISEMENT

ಹಿರೇಕೆರೂರ | ಸೇವಾಲಾಲ್ ಜಯಂತಿ: ತಹಶೀಲ್ದಾರ್, ಅಧಿಕಾರಿಗಳು ಗೈರು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 6:46 IST
Last Updated 17 ಫೆಬ್ರುವರಿ 2026, 6:46 IST
ಹಿರೇಕೆರೂರು ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಸೋಮುವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿಯಲ್ಲಿ ಶಾಸಕ ಯು.ಬಿ. ಬಣಕಾರ ಮಾತನಾಡಿದರು
ಹಿರೇಕೆರೂರು ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಸೋಮುವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿಯಲ್ಲಿ ಶಾಸಕ ಯು.ಬಿ. ಬಣಕಾರ ಮಾತನಾಡಿದರು   

ಹಿರೇಕೆರೂರ: ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ, ಖುದ್ದು ತಹಶೀಲ್ದಾರ್ ಸೇರಿ ಹಲವು ಇಲಾಖೆಯ ಅಧಿಕಾರಿಗಳು ಗೈರಾಗಿದ್ದಕ್ಕೆ ಶಾಸಕ ಯು.ಬಿ. ಬಣಕಾರ ಬೇಸರ ವ್ಯಕ್ತಪಡಿಸಿದರು.

ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮವ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಯು.ಬಿ. ಬಣಕಾರ, ಗೈರಾದ ಎಲ್ಲ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಸಂತ ಸೇವಾಲಾಲರು ಸಮಾಜದಲ್ಲಿದ್ದ ಅಸಮಾನತೆ, ಮೂಢನಂಬಿಕೆಯನ್ನು ತೊಲಗಿಸಿ ಬಂಜಾರ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದರು. ಶಿಕ್ಷಣ ಮತ್ತು ವೈಜ್ಞಾನಿಕ ಮನೋಭಾವದಿಂದ ಸಮಾಜ ಕಟ್ಟಿದರು’ ಎಂದು ಬಣಕಾರ ಹೇಳಿದರು.

ADVERTISEMENT

ಗೈರಾದ ಅಧಿಕಾರಿಗಳ ವರ್ತನೆಯನ್ನು ಖಂಡಿಸಿದ ಸಮಾಜದ ಮುಖಂಡರು, ‘ಸಂತ ಸೇವಾಲಾಲರ ಜಯಂತಿಯನ್ನು ತಾಲ್ಲೂಕು ಆಡಳಿತ ಕಾಟಾಚಾರಕ್ಕಾಗಿ ಆಚರಣೆ ಮಾಡುತ್ತಿದೆ. ತಹಶೀಲ್ದಾರ ಎಂ. ರೇಣುಕಾ ಹಾಗೂ ಇತರೆ ಅಧಿಕಾರಿಗಳು ಗೈರು ಹಾಜರಾಗಿದ್ದಾರೆ.  ಇವರೆಲ್ಲರೂ ಬಂಜಾರ ಸಮುದಾಯವನ್ನು ಕಡೆಗಣಿಸುತ್ತಿರುವುದು ಖಂಡನಿಯ. ಎಲ್ಲರ ಮೇಲೆ ಶಿಸ್ತುಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಶಿಕ್ಷಕ ನಂದೀಶ ಲಮಾಣಿ ಉಪನ್ಯಾಸ ನೀಡಿದರು. ತಾಲ್ಲೂಕು ಬಂಜಾರ ಸಂಘದ ಅಧ್ಯಕ್ಷ ಆರ್‌.ಕೆ. ಲಮಾಣಿ, ಪೀರಪ್ಪ ಪೂಜಾರ, ಗೌರಿಬಾಯಿ ಲಮಾಣಿ, ಶ್ವೇತಾ ಲಮಾಣಿ, ಷಣ್ಮುಖಪ್ಪ ಚಿಕ್ಕಮಾಗಡಿ, ಲಕ್ಷ್ಮಣ ಪೂಜಾರ, ಈರಪ್ಪ ಲಮಾಣಿ, ಸಚಿನ್ ಲಮಾಣಿ, ರವಿ ಬಿ.ಎಲ್., ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗಿರೀಶ ಮುಡಿಯಮ್ಮನವರ, ತಾಲ್ಲೂಕು ಆರೋಗ್ಯಾಧಿಕಾರಿ ಜೆಡ್.ಆರ್. ಮಕಾನದಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಗೀತಾ ಬಾಳೆಕಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.