ಹಾವೇರಿ: ‘ನಾನು ಗೃಹ ಖಾತೆ ಕೇಳಿರಲಿಲ್ಲ. ಕೃಷಿ ಖಾತೆಯನ್ನು ಖುಷಿಯಿಂದ ನಿರ್ವಹಿಸುತ್ತೇನೆ ಎಂದು ಹೇಳಿದ್ದೆ. ಈಗ ಕೃಷಿ ಖಾತೆಯನ್ನೇ ಕೊಟ್ಟಿದ್ದಾರೆ. ಒಂದು ವರ್ಷ ನಾಲ್ಕು ತಿಂಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ’ ಎಂದು ಸಚಿವ ಬಿ.ಸಿ.ಪಾಟೀಲ ಹೇಳಿದರು.
ಶನಿವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಕೃಷಿ ಇಲಾಖೆ ಯಾವಾಗಲೂ ಮುಳ್ಳಿನ ಹಾಸಿಗೆ ಎಂದು ನನಗೆ ಗೊತ್ತಿದೆ. ನಾನು ರೈತನ ಮಗನಾಗಿ ರೈತನ ಕಣ್ಣೀರು ಒರೆಸುವ ಕೆಲಸ ಮಾಡದೆ ಓಡಿ ಹೋದರೆ ರೈತರನ್ನು ನೋಡಿಕೊಳ್ಳುವವರು ಯಾರು. ಏನೇ ಸಮಸ್ಯೆಗಳು ಬಂದರೂ ಪರಿಹರಿಸುವ ಕಾರ್ಯ ಮಾಡುತ್ತೇನೆ ಎಂದರು.
ಮೂರು ವರ್ಷಗಳಿಂದ ಅತಿವೃಷ್ಟಿ ಮತ್ತು ನೆರೆ ಹಾವಳಿ ಉಂಟಾಗುತ್ತಿದೆ. ಈ ಬಾರಿ ಹಾನಿಯಾಗಿರುವ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಸಮೀಕ್ಷೆ ನಡೆಸಿ, ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಕೃಷಿ ಅವಲಂಬಿಸಿದ ಯುವಕರಿಗೆ ಹೆಣ್ಣು ಕೊಡುತ್ತಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಯುವಕರು ಪ್ರಗತಿಪರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಮಣ್ಣಿನಲ್ಲಿ ಬಂಗಾರ ಬೆಳೆಯಬಹುದು. ನಾನು ಇದನ್ನು ನಾಡಿನಾದ್ಯಂತ ಸಂಚರಿಸಿ ಅರ್ಥ ಮಾಡಿಕೊಂಡಿದ್ದೇನೆ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಪ್ರಗತಿ ಸಾಧಿಸಿದರೆ, ಹುಡುಕಿಕೊಂಡು ಬಂದು ಹೆಣ್ಣನ್ನು ಕೊಡುತ್ತಾರೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.