ADVERTISEMENT

ಹಾವೇರಿ: ‘ಒತ್ತಡ ಮುಕ್ತರಾಗಿ; ದೈಹಿಕ ಶಕ್ತಿವಂತರಾಗಿ’

ಅರಣ್ಯ ಇಲಾಖೆ ಸಿಬ್ಬಂದಿಗೆ ಆರೋಗ್ಯ ತಪಾಸಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 24 ಮೇ 2023, 13:23 IST
Last Updated 24 ಮೇ 2023, 13:23 IST
ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಅರಣ್ಯ ವಿಭಾಗದ ಮುಂಚೂಣಿ ಸಿಬ್ಬಂದಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು  /ಪ್ರಜಾವಾಣಿ ಚಿತ್ರ
ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಅರಣ್ಯ ವಿಭಾಗದ ಮುಂಚೂಣಿ ಸಿಬ್ಬಂದಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು  /ಪ್ರಜಾವಾಣಿ ಚಿತ್ರ   

ಹಾವೇರಿ: ಕೆಲಸದಲ್ಲಿನ ಮಾನಸಿಕ ಒತ್ತಡ ದೈಹಿಕ ಶಕ್ತಿ ಕುಂದಿಸುತ್ತದೆ. ಒತ್ತಡ ಮುಕ್ತರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುವ ಜಾಣ್ಮೆ ಕಲಿಯಬೇಕು. ಕನಿಷ್ಠ ಆರು ತಿಂಗಳಿಗೆ ಒಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಕೃಷ್ಣ ಹೇಳಿದರು.

ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ಹಾವೇರಿ ಪ್ರಾದೇಶಿಕ ಮತ್ತು ಸಾಮಾಜಿಕ ವಿಭಾಗ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಅರಣ್ಯ ವಿಭಾಗದ ಮುಂಚೂಣಿ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. ಪ್ರಸ್ತುತ ಜೀವನ ಶೈಲಿ ಹಾಗೂ ಪೌಷ್ಠಿಕ ಆಹಾರ ಪದಾರ್ಥ ಸೇವನೆ ಕೊರತೆಯಿಂದ ಆರೋಗ್ಯ ಹದಗೆಡು ತ್ತಿದೆ. ಇಲಾಖೆ ನೌಕರರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಉಚಿತ ಆರೋಗ್ಯ ತಪಾಸಣೆ ಆಯೋಜಿಸಲಾಗಿದೆ. ತಪಾಸಣೆ ಮಾಡಿಕೊಂಡ ನೌಕರರು ವೈದ್ಯರ ಸಲಹೆ ತಪ್ಪದೇ ಪಾಲಿಸಬೇಕು ಎಂದರು.

ಶಿಬಿರದಲ್ಲಿ ಅಧಿಕಾರಿಗಳು ಹಾಗೂ ನೌಕರರು ಸೇರಿದಂತೆ ಜಿಲ್ಲೆಯ ಅರಣ್ಯ ಇಲಾಖೆಯ 100ಕ್ಕೂ ಸಿಬ್ಬಂದಿ ತಪಾಸಣೆ ಮಾಡಿಕೊಂಡರು. ಹೃದ್ರೋಗ, ಚರ್ಮರೋಗ, ಕೀಲು ರೋಗ, ಕಿವಿ ಮೂಗು ಹಾಗೂ ಗಂಟಲು ತಜ್ಞರು ಸೇರಿದಂತೆ ವಿವಿಧ ತಜ್ಞ ವೈದ್ಯರು ಆರೋಗ್ಯ ತಪಾಸಣೆ ಸೇರಿದಂತೆ ಇಸಿಜಿ, ರಕ್ತ ಪರೀಕ್ಷೆ ನಡೆಸಿ, ಉಚಿತವಾಗಿ ಔಷಧಿ ವಿತರಿಸಿದರು.

ADVERTISEMENT

ಹಾವೇರಿ ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ. ಹಾವನೂರು, ಡಾ. ವಿಶ್ವನಾಥ ಸಾಲಿಮಠ, ಹಾನಗಲ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ್ ತೋಡ್ಕರ್, ಹಾವೇರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಮ್ಮದ್ ಅಲಿ ಸಿದ್ದಿಕ್ಕಿ, ಹಾವೇರಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಹಾಂತೇಶ್ ನ್ಯಾಮತಿ, ಹಾನಗಲ್ ವಲಯ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ್ ಮಠದ, ಶುಶ್ರೂಷಕಿಯರಾದ ಸುಜಾತ ಮತ್ತು ವೀಣಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.