ADVERTISEMENT

ಮಾಕನೂರು ಗ್ರಾಮ: ಪ್ರವಾಹ ಪೀಡಿತ ಸ್ಥಳಗಳಿಗೆ ಬಿ.ಸಿ.ಪಾಟೀಲ ಭೇಟಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 2:52 IST
Last Updated 7 ಆಗಸ್ಟ್ 2021, 2:52 IST
ಕುಮಾರಪಟ್ಟಣ ಸಮೀಪದ ಮಾಕನೂರು ಗ್ರಾಮದ ನೆರೆ ಪೀಡಿತ ರೈತರ ಜಮೀನಿಗೆ ಶುಕ್ರವಾರ ಸಚಿವ ಬಿ.ಸಿ.ಪಾಟೀಲ ಭೇಟಿ ನೀಡಿ ಮಾಹಿತಿ ಪಡೆದರು. ಶಾಸಕ ಅರುಣಕುಮಾರ, ಪೂಜಾರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ರೈತ ಮುಖಂಡ ಈರಣ್ಣ ಹಲಗೇರಿ ಇದ್ದಾರೆ.
ಕುಮಾರಪಟ್ಟಣ ಸಮೀಪದ ಮಾಕನೂರು ಗ್ರಾಮದ ನೆರೆ ಪೀಡಿತ ರೈತರ ಜಮೀನಿಗೆ ಶುಕ್ರವಾರ ಸಚಿವ ಬಿ.ಸಿ.ಪಾಟೀಲ ಭೇಟಿ ನೀಡಿ ಮಾಹಿತಿ ಪಡೆದರು. ಶಾಸಕ ಅರುಣಕುಮಾರ, ಪೂಜಾರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ರೈತ ಮುಖಂಡ ಈರಣ್ಣ ಹಲಗೇರಿ ಇದ್ದಾರೆ.   

ಕುಮಾರಪಟ್ಟಣ: ರಾಜ್ಯದಲ್ಲಿ ಜನಪ್ರತಿನಿಧಿಗಳ ಸರ್ಕಾರವಲ್ಲ, ರೈತರು, ಬಡವರು, ಹಿಂದುಳಿದ ವರ್ಗ, ಸಾಮಾನ್ಯ ಜನರ ಬಗ್ಗೆ ಕಾಳಜಿ ಇರುವ ಸರ್ಕಾರವಿದೆ. ಕೇಂದ್ರ ಮತ್ತು ರಾಜ್ಯದ ಸಮರ್ಥ ನಾಯಕತ್ವದಲ್ಲಿ ರಾಜ್ಯ ಅಭಿವೃದ್ಧಿ ಹೊಂದಲಿದೆ ಎಂದು ನೂತನ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಸಮೀಪದ ಮಾಕನೂರು ಗ್ರಾಮದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಹೊಲಗಳಿಗೆ ಶುಕ್ರವಾರ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಮಾಹಿತಿ ಪಡೆದು ಬಳಿಕ ಅವರು ಮಾತನಾಡಿ, ಯೋಗ, ಯೋಗ್ಯತೆ ಮತ್ತು ತ್ಯಾಗದಿಂದ ಮತ್ತೊಮ್ಮೆ ಸಚಿವನಾಗುವ ಅವಕಾಶ ಸಿಕ್ಕಿದೆ ಎಂದರು.

ಇತ್ತೀಚೆಗೆ ಉಂಟಾದ ತುಂಗಭದ್ರಾ ನದಿ ಪ್ರವಾಹದಿಂದ 2 ಎಕರೆ ಟೊಮೆಟೊ ಹಾಗೂ ಚೆಂಡು ಹೂವಿನ ಬೆಳೆ ಕಳೆದುಕೊಂಡಿರುವ ತಿಪ್ಪೇಶಪ್ಪ ಬಾರ್ಕಿ ಅವರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದ ಸಚಿವರು ಪರಿಹಾರ ಒದಗಿಸುವ ಭರವಸೆ ನೀಡಿದರು.

ADVERTISEMENT

ಹಾನಿಗೊಳಗಾದ ಭತ್ತ, ಮೆಕ್ಕೆಜೋಳ, ತೋಟಗಾರಿಕೆ ಬೆಳೆ ಬೆಳೆದು ಹಾನಿಗೊಳಗಾದ ರೈತರ ಮಾಹಿತಿಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ನೆರವು ದೊರೆಯಲಿದೆ ಎಂದರು.

ಕಳೆದ ಬಾರಿಯ ಬೆಳೆ ನಷ್ಟ ಪರಿಹಾರ ನಮಗೆ ಇನ್ನೂ ಸಿಕ್ಕಿಲ್ಲ ಎಂಬ ರೈತರ ದೂರಿನ ಬಳಿಕ ಸ್ಥಳದಲ್ಲೆ ಇದ್ದ ಜಿಲ್ಲಾಧಿಕಾರಿಗಳಿಂದ ಸ್ಪಷ್ಟನೆ ಪಡೆದರು. ಎನ್‌ಡಿಆರ್‌ಎಫ್‌ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುವ ಅಭಯ ನೀಡಿದರು.

ಬಳಿಕ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾತನಾಡಿ, ಸರ್ಕಾರ ಮತ್ತು ಇಲಾಖೆ ಮಾಹಿತಿ ಲಭ್ಯವಾಗದ ಕಾರಣ ಕೆಲವೇ ರೈತರಿಗೆ ಪರಿಹಾರ ಪಡೆಯುವಲ್ಲಿ ಅಡಚಣೆಯಾಗಿದೆ ಎಂದು ಮಾಹಿತಿ ನೀಡಿದರು.

ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಗ್ರಾಮದಲ್ಲಿ 5 ಮಂದಿ ರೈತರ ತೋಟಗಾರಿಕೆ ಬೆಳೆ, ಒಬ್ಬರ ಮಕ್ಕೆಜೋಳ ನಷ್ಟವಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಮೊಹಮ್ಮದ್‌ ರೋಷನ್‌, ತಹಶೀಲ್ದಾರ್‌ ಶಂಕರ್‌.ಜಿ.ಎಸ್‌., ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್‌.ಮಲ್ಲಾಡದ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಹಿತೇಂದ್ರ ಗೌಡಪ್ಪಳವರ, ಡಿವೈಎಸ್‌ಪಿ ಎಸ್‌.ಟಿ.ಸುರೇಶ್‌, ಕೆಂಚರೆಡ್ಡಿ, ಪಿಡಿಒ ನಾಗರಾಜ.ಕೆ.ಬಿ., ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಗುಳೇದ ಸಾಥ್‌ ನೀಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸೋಮವ್ವ ಹಲಗೇರಿ, ಉಪಾಧ್ಯಕ್ಷ ದೇವೇಂದ್ರಪ್ಪ ಯಲಜಿ, ರೈತ ಮುಖಂಡರಾದ ಹನುಮಂತಪ್ಪ ಕುಂಬಳೂರು, ಸುರೇಶ ಮಲ್ಲಾಪುರ, ಸತೀಶ್‌ ಮಲ್ಲನಗೌಡ್ರ, ಮಂಜುನಾಥ ನರಸಗೊಂಡರ, ವೀರೇಶ್‌ ಪೂಜಾರ, ಪವನಕುಮಾರ್‌ ಮಲ್ಲಾಡದ, ಕೆಂಚನಗೌಡ ಮುದಿಗೌಡ್ರ, ಭೀಮೇಶ್‌ ಚಿನ್ನಣ್ಣನವರ, ಪ್ರಕಾಶ ಹೊರಕೇರಿ, ಮಂಜುನಾಥ ಅಡ್ಡಪ್ಪನವರ, ಸೋಮಣ್ಣ, ಶಿವನಗೌಡ ಉಳುವಿ, ಹನುಮಂತ ರಾಜು, ಮೇಘರಾಜ್‌, ರಾಜು ಬಾತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.