
ಶಿಗ್ಗಾವಿ: ‘ಸುಮಾರು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಆಸ್ತಿ ಪಟ್ಟಾ ಕಂದಾಯ ಗ್ರಾಮಗಳ ಘೋಷಣೆ ಬಗ್ಗೆ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಆಸ್ತಿ ಪಟ್ಠಾ, ಕಂದಾಯ ಗ್ರಾಮಗಳ ಘೋಷಣೆಗೆ ಕಂಕಣ ಬದ್ದವಾಗಿ ನಿಂತು ಕೆಲಸ ಮಾಡುತ್ತಿದ್ದೇವೆ. ಅಧಿಕಾರಿಗಳು ಸ್ಪಂದಿಸಿ ಬಡಕೂಲಿಕಾರರಿಗೆ ನೆರವಾಗಬೇಕು. ಹೀಗಾಗಿ ಮಾಹಿತಿ ಇಲ್ಲದೆ ಸಭೆಗೆ ಹಾಜರಾಗಬೇಡಿ’ ಎಂದು ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಪಿಡಿಒಗಳಿಗೆ ಕಡಕಾಗಿ ಎಚ್ಚರಿಕೆ ನೀಡಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಕಚೇರಿಗಳ ಸಂಕೀರ್ಣದ ಸಭಾ ಭವನದಲ್ಲಿ ಸೋಮವಾರ ನಡೆದ ಶಿಗ್ಗಾವಿ-ಸವಣೂರ ತಾಲ್ಲೂಕಿನ ತಹಶೀಲ್ದಾರರು, ಗ್ರಾಮ ಅಭಿವೃದ್ಧಿ ಅಧಿಕಾರಿಗಳ (ಪಿಡಿಒಗಳ) ಮತ್ತು ಗ್ರಾಮ ಲೆಕ್ಕಾಧಿಕಾರಿಗಳ (ವಿ.ಎಗಳ) ಸಭೆಯಲ್ಲಿ ಅವರು ಮಾತನಾಡಿ, ಸಭೆ ನಡೆಸುವುದು ಕಾಟಾಚಾರಕ್ಕಲ್ಲ. ಸಭೆಗೆ ಗೌರವ ನೀಡುವ ಮೂಲಕ ಸರಿಯಾದ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ತಹಶೀಲ್ದಾರ್ ಮೂಲಕ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದು ಪಿಡಿಒ, ವಿ.ಎಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು.
ಕ್ಷೇತ್ರದಲ್ಲಿ ಪ್ರತಿ ಗ್ರಾಮಗಳಲ್ಲಿ 30ರಿಂದ 40 ಮನೆಗಳು ರದ್ದಾಗಿವೆ. ಅದಕ್ಕೆ ಕಾರಣಗಳೇನು ಎಂಬ ಮಾಹಿತಿ ಪಡೆದು ಅವುಗಳಿಗೆ ಸರಿಯಾಗಿ ಉತ್ತರ ನೀಡುತ್ತಿಲ್ಲ. ರದ್ದು ಪಡಿಸಲಿಕ್ಕೆ ಹಲವು ದಾರಿಗಳನ್ನು ತೋರುತ್ತಿದ್ದೀರಿ. ಆದರೆ ಅದೇ ಅರ್ಹರಾದ ಬಡಕೂಲಿ ಕಾರ್ಮಿಕರಿಗೆ ನ್ಯಾಯ ನೀಡುವ ಕೆಲಸ ಮಾಡಬೇಕು. ಅರ್ಹ ಜನರಿಗೆ ಮಾನವೀಯತೆ ತೋರಬೇಕು ಎಂದರು.
ಮೊಟಹಳ್ಳಿ, ಚಿಕ್ಕನೆಲ್ಲೂರ, ಮಾಕಪುರ, ಶಿಶುವಿನಹಾಳ, ಹಿರೇಮಲ್ಲೂರ, ಬಾಡ. ಮಲ್ಲನಾಯಕನಕೊಪ್ಪ ಸೇರಿದಂತೆ ಹಲವು ಗ್ರಾಮಗಳಲ್ಲಿ ಸರಿಯಾದ ಮಾಹಿತಿ ಪಡೆದಿಲ್ಲ. ಹಿಂದಿನ ಸಭೆಯಲ್ಲಿ ಸರಿಯಾಗಿ ಹೇಳಿದರು ಸಹ ಈವರೆಗೆ ಮಾಹಿತಿ ನೀಡುತ್ತಿಲ್ಲ. ಬರುವ ಶುಕ್ರವಾರದೊಳಗೆ ಮಾಹಿತಿ ನೀಡಬೇಕು ಎಂದು ಎಚ್ಚರಿಕೆ ನೀಡಿದರು.
ಹಿಂದೆ ಮನೆ ಬಿದ್ದಿರುವ ಕುರಿತು ಎಂಜಿನಿಯರ್, ಪಿಡಿಒ, ವಿ.ಎಗಳ ಸೇರಿ ಹೊಟೇಲ್, ಚಹಾದ ಅಂಗಡಿಗಳಲ್ಲಿ ಪಟ್ಟಿ ತಯಾರಿ ಮಾಡುತ್ತಿದ್ದೀರಿ. ಅದೇ ರೀತಿ ಈಗ 3 ಜನ ಕುಳಿತು ಮನೆಗಳ ಪಟ್ಟಾಗಳ ಕುರಿತು ಮಾಹಿತಿ ಸಿದ್ದಪಡಿಸಿಕೊಂಡು ಬನ್ನಿರಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರ್ ಯಲ್ಲಪ್ಪ ಗೊಣೆಣ್ಣವರ, ಸವಣೂರ ತಹಶೀಲ್ದಾರ್ ರವಿ ಕೊರವರ, ತಾಪಂ ಇಒ ಮಂಜುನಾಥ ಸಾಳೊಂಕೆ, ಗ್ಯಾರಂಟಿ ಯೋಜನೆ ಅಧ್ಯಕ್ಷ ಎಸ್.ಎಫ್.ಮಣಕಟ್ಟಿ, ಸವಣೂರ ತಾಲ್ಲೂಕು ಗ್ಯಾರಂಟಿ ಅಧ್ಯಕ್ಷ ಸುಭಾಸ ಮಜ್ಜಗಿ , ಗುಡ್ಡಪ್ಪ ಜಲದಿ ಸೇರಿದಂತೆ ಶಿಗ್ಗಾವಿ-ಸವಣೂರ ತಾಲ್ಲೂಕಿನ ಪಿಡಿಒ ವಿ.ಎ , ಅಧಿಕಾರಿಗಳು ಇದ್ದರು.
‘ಇದು ಮದುವೆ ಕಾರ್ಯಕ್ರಮವಲ್ಲ’
ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಗಳಲ್ಲಿ ಮನೆಗಳ ಮತ್ತು ಕಂದಾಯ ಗ್ರಾಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಬರಬೇಕು. ಸುಳ್ಳು ನೆಪ ಹೇಳಿ ಜಾರಿಕೊಳ್ಳುವ ಕೆಲಸ ಬೇಡ. ಬಡಕೂಲಿಕಾರರ ಕಾರ್ಮಿಕರ ಮತ್ತು ಹಿಂದುಳಿದ ಅರ್ಹ ಫಲಾನುಭವಿಗಳಿಗೆ ನ್ಯಾಯ ನೀಡುವ ಕೆಲಸ ಮಾಡಿ. ಇಲ್ಲವೇ ನಮ್ಮ ವಾಹನ (ಕಾರು) ತೆಗೆದುಕೊಂಡು ಹೋಗಿ ಪಂಚಾಯ್ತಿಯಲ್ಲಿನ ಸರಿಯಾದ ಮಾಹಿತಿ ತೆಗೆದುಕೊಂಡು ಬನ್ನಿರಿ ಎಂದು ಶಿಶುವಿನಹಾಳ ಗ್ರಾಮ ಪಂಚಾಯತಿ ಪಿಡಿಒ ವಿ.ಎಗಳನ್ನು ಕಳುಹಿಸಿದರು. ಕೆಲವು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ 40 ವರ್ಷಗಳಿಂದ ಕೆಜಿಪಿ ಆಗಲಿಲ್ಲ. ಕಾಮನಹಳ್ಳಿ ಗ್ರಾಪಂ. ವ್ಯಾಪ್ತಿಯಲ್ಲಿ ಸುಮಾರು 280 ಆಸ್ತಿ ಮಾಲೀಕರಿಗೆ ಇ-ಸ್ವತ್ತು ಉತಾರ ನೀಡಬೇಕು. ಅಲ್ಲಿನ ಅಧಿಕಾರಿಗಳು ಗ್ರಾಮ ಲೆಕ್ಕಧಿಕಾರಿಗಳು ಏನು ಮಾಡುತ್ತಿದ್ದಾರೆ? ನಮಗೆ ಸಮಯವಿಲ್ಲ. ತಕ್ಷಣ ಹಿಡಿದ ಕೆಲಸವನ್ನು ಕೈಗೊಂಡು ಕೆಲಸ ನಿರ್ವಹಿಸಬೆಕು. ನಿಮ್ಮ ಹಾರಿಕೆ ಉತ್ತರ ಕೇಳುವುದಿಲ್ಲಿ. ಅರ್ಹ ಬಡಜನರ ಕಾರ್ಮಿಕರ ಕೆಲಸ ಮಾಡಬೇಕು ಎಂದು ಕಾಮನಹಳ್ಳಿ ಪಿಡಿಒ ವಿ.ಎಗಳನ್ನು ತರಾಠೆಗೆ ತೆಗೆದುಕೊಂಡರು. ಸಭೆಗೆ ಮದುವೆಗೆ ಬಂದು ಉಂಡು ಹೋಗುವುದಲ್ಲ. ಮಾಹಿತಿಯೊಂದಿಗೆ ಬನ್ನಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.