ಹಾನಗಲ್: ‘ಅಪಪ್ರಚಾರಗಳಿಗೆ ಕಿವಿಗೊಡುವ ಕಾಲ ಇದಲ್ಲ. ಜನರು ಅಭಿವೃದ್ಧಿ ಪರವಾದ ಚಿಂತನೆಗಳಿಗೆ ಬೆಲೆ ನೀಡುತ್ತಾರೆ’ ಎಂದು ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನವರ ಹೇಳಿದರು.
ತಾಲ್ಲೂಕಿನ ಗೊಟಗೋಡಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಅಭಿವೃದ್ಧಿಯ ಸಂಕೇತವಾಗಿ ಮತದಾರರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ದೇಶದ ಭದ್ರತೆ, ಸರ್ವತೋಮುಖ ಅಭಿವೃದ್ಧಿಗಾಗಿ ಬಿಜೆಪಿ ಬೆಳೆದು ಬಂದ ಪಕ್ಷ. ಹಾನಗಲ್ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ನಿಲ್ಲಿಸಿದ ಸಿ.ಎಂ.ಉದಾಸಿ ಅವರ ಸ್ಥಾನಕ್ಕೆ ಶಿವರಾಜ ಸಜ್ಜನರ ಸಮರ್ಥರಾಗಿದ್ದಾರೆ ಎಂದು ಹೇಳಿದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಜನಪರ ಹೋರಾಟ ಮತ್ತು ಅನ್ಯಾಯದ ವಿರುದ್ಧ ಸಿಡಿದೇಳುವ ಮೂಲಕ ಸಿ.ಎಂ.ಉದಾಸಿ ಜನಮಾನಸದಲ್ಲಿ ಸ್ಥಾನ ಪಡೆದವರು ಎಂದರು.
ಹಿರೇಕಣಗಿ, ಗೊಟಗೋಡಿಕೊಪ್ಪ, ಹಂದಿಹಾಳ, ಶಿವಪೂರ, ಕಾಮನಹಳ್ಳಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಸಭೆಗಳು ನಡೆದವು. ಬಳಿಕ ಕೊಪ್ಪರಸಿಕೊಪ್ಪ ಗ್ರಾಮದ ತೋಟದ ಮನೆಯಲ್ಲಿ ಭೋವಿ ವಡ್ಡರ ಸಮಾಜದ ಮುಖಂಡರ ಸಭೆ ನಡೆಯಿತು.
ಭೋವಿ ವಡ್ಡರ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಹೊಸೂರ, ಉಪಾಧ್ಯಕ್ಷ ರಾಮಣ್ಣ ಕೆರೆಕ್ಯಾತನಹಳ್ಳಿ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಕಸ್ತೂರವ್ವ ವಡ್ಡರ, ಸಚಿವ ಶಿವರಾಮ ಹೆಬ್ಬಾರ, ಚನ್ನಗಿರಿ ಶಾಸಕ ಮಾಡಾಳ ವಿರುಪಾಕ್ಷಪ್ಪ, ಹೊಳಲ್ಕೇರೆ ಶಾಸಕ ಎಂ.ಚಂದ್ರಪ್ಪ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ
ತಿಂಗಳೆ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.