ADVERTISEMENT

ಮಕ್ಕಳಿಂದ ‘ಆನ್‌ಲೈನ್‌ ಕಥಾ ನಮನ’

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 11:13 IST
Last Updated 28 ಜೂನ್ 2021, 11:13 IST
ಹಜರೇಸಾಬ್ ನದಾಫ
ಹಜರೇಸಾಬ್ ನದಾಫ   

ಹಾವೇರಿ:ಕೆಲ ದಿನಗಳ ಹಿಂದೆ ಕೋವಿಡ್‍ನಿಂದ ನಿಧನರಾದ ಕತೆಗಾರ, ಕ್ಷೇತ್ರ ಶಿಕ್ಷಣಾಧಿಕಾರಿ ಸವಣೂರಿನ ಹಜರೇಸಾಬ್ ನದಾಫ ಅವರ ಸ್ಮರಣೆಯಲ್ಲಿ ಮಕ್ಕಳಿಂದ ‘ಆನ್‍ಲೈನ್ ಕಥಾ ನಮನ’ ನಡೆಯಿತು.

ಭಾರತ ಜ್ಞಾನ ವಿಜ್ಞಾನ ಸಮಿತಿ ಏರ್ಪಡಿಸಿದ್ದ ಮಕ್ಕಳ ಕಥಾ ವಾಚನದಲ್ಲಿ ಮೊದಲಿಗೆ ಕವಿ ಶಿಕ್ಷಕ ಚಂದ್ರಶೇಖರ ಕುಳೇನೂರ ನುಡಿ ನಮನ ಸಲ್ಲಿಸಿ ‘ಸಹೃದಯ ಅಧಿಕಾರಿ ಬಡತನದಿಂದೆದ್ದು ಶಿಕ್ಷಣವೇ ಶಕ್ತಿ ಎಂಬುದಕ್ಕೆ ಮಾದರಿಯಾಗಿದ್ದ ಹಜರೇಸಾಬ್ ನದಾಫ ಅವರು ‘ಕಿಡಿ’ ಕಥಾ ಸಂಕಲನದ ಮೂಲಕ ಹೆಸರುವಾಸಿಯಾಗಿದ್ದರು. ಅಂಥದ್ದೊಂದು ಅರಳುವ ಪ್ರತಿಭೆ ಕಮರಿ ಹೋಗಿದೆ’ ಎಂದರು.

ನಂತರ ರಾಜ್ಯದ ಬೇರೆ ಬೇರೆ ಭಾಗದ ಬಾಲ ಕಥೆಗಾರರು ಐದೈದು ನಿಮಿಷಗಳ ಕಥೆಗಳನ್ನು ಹೇಳಿದರು. ಶಿಗ್ಗಾವಿಯ ಐದು ವರ್ಷದ ಪೋರಿ ಸಾನಿಧ್ಯಾ ಶಶಿಕಾಂತ ರಾಠೋಡ ‘ಡುಮ್ಮಾ ಡುಮ್ಮಿ’ ಹಾಸ್ಯ ಕಥೆ ಹೇಳಿದರೆ, ಈಶ್ವರ್‍ಚಂದ್ರ ವಿದ್ಯಾಸಾಗರರ ಮನೋಜ್ಞ ಕಥೆಯನ್ನು ಶಿವಮೊಗ್ಗದ ಸ್ಫೂರ್ತಿ ಸಿ.ಎಂ. ಹೇಳಿದಳು.

ADVERTISEMENT

ಕರೆಕಲ್ಲ ಡುಮ್ಮವ್ವ, ಜಂಬಗಾರ್ತಿ ಅಂಬಕ್ಕಾ, ಮಾತೇ ಮುತ್ತು ಮಾತೇ ಮೃತ್ಯು, ಸುಂಬಳಬುರ್ಕ ಸೀನಣ್ಣ, ನಂಬಿಗಸ್ಥ ನಾಯಿ ಮುಂತಾದ ಹೆಸರಿನ ಕುತೂಹಲ ಕೆರಳಿಸುವ ಕಥೆಗಳನ್ನು ಹಾಸ್ಯ ಶೈಲಿಯಲ್ಲಿ ಮುಗ್ಧತೆಯಿಂದ ಓದಿದರು.

ಸ್ಪೂರ್ತಿ ಸಿ.ಎಂ. ಶಿವಮೊಗ್ಗ, ಸಾನಿಧ್ಯಾ ರಾಠೋಡ, ಶಿಗ್ಗಾವಿ (ಪ್ರಥಮ) ಮಧುರಾ ಎಂ ಬಜ್ಜಿ ಕಾತೂರ, ಕವಿತಾ ಎಂ ಅಂಗಡಿ ಕೊಳೂರ (ದ್ವಿತೀಯ) ಮಧು ಬಾರ್ಕಿ ಕಂಚಿ ನೆಗಳೂರ, ಲಲಿತಾ ಎಸ್. ಹಾಳಮನೆ ಸವದತ್ತಿ, ಸಮೃದ್ಧ ಮತ್ತೂರ ಹಾವೇರಿ (ತೃತೀಯ) ಹಾಗೂ ಶ್ರೀಗೌರಿ ಜಿ.ಕೆ., ಕಾವ್ಯಾ ಬಾರ್ಕಿ, ನೇಹಾ ಓಂಕಾರಣ್ಣನವರ (ಸಮಾಧಾನಕರ) ಬಹುಮಾನಗಳನ್ನು ಪಡೆದರು.

ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿ ಸದಸ್ಯೆ ರೇಣುಕಾ ಗುಡಿಮನಿ ಚಾಲನೆ ನೀಡಿದರು. ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ. ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಸಹನಾ ಅ. ಧನ್ಯಣ್ಣನವರ ಮತ್ತು ರೇಣುಕಾ ಎಂ. ಓಲೇಕಾರ ಕಥಾಗೋಷ್ಠಿ ನಡೆಸಿದರು. ಸಾವಿತ್ರಮ್ಮ ಬಾರ್ಕಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.