ADVERTISEMENT

ಹಾವೇರಿ: ಕಾರಿನ ದುರಸ್ತಿ ವೆಚ್ಚ ನೀಡಲು ಆದೇಶ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 16:38 IST
Last Updated 6 ಜುಲೈ 2021, 16:38 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಹಾವೇರಿ: ಅಪಘಾತಕ್ಕೀಡಾದ ಕಾರಿನ ರಿಪೇರಿ ವೆಚ್ಚದ ಹಣ ನೀಡುವಂತೆ ನ್ಯಾಷನಲ್ ಇನ್ಸೂರೆನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ಹೊರಡಿಸಿದೆ.

ನಗರದ ಜಗದೀಶ ಮತ್ತೂರ ಅವರು ತಮ್ಮ ಕಾರಿಗೆ ನ್ಯಾಷನಲ್ ಇನ್ಸೂರೆನ್ಸ್‌ ಕಂಪನಿಯ ಪಾಲಿಸಿ ಮಾಡಿಸಿದ್ದರು. ಮಾರ್ಚ್-2020ರಲ್ಲಿ ಮಣಿಪಾಲಕ್ಕೆ ಹೋಗುವ ಸಂದರ್ಭದಲ್ಲಿ ಕಾರು ರಸ್ತೆ ಅಪಘಾತಕ್ಕೀಡಾಗಿ ಸಂಪೂರ್ಣ ಹಾಳಾಗಿತ್ತು.

ದಾವಣಗೆರೆ ಹಾಗೂ ಹುಬ್ಬಳ್ಳಿ ಶೋಂನಲ್ಲಿ ಕಾರು ರಿಪೇರಿ ಮಾಡಿಸಿದ ಬಿಲ್ ಮೊತ್ತ ₹ 1.67 ಲಕ್ಷ ಹಾಗೂ ಅಪಘಾತ ಸ್ಥಳದಿಂದ ಶೋ ರೂಂಗೆ ತೆಗೆದುಕೊಂಡ ಹೋದ ಮೊತ್ತ ₹ 10 ಸಾವಿರ ಪಾವತಿಸುವಂತೆ ಇನ್ಸೂರೆನ್ಸ್ ಕಂಪನಿಗೆ ದಾಖಲೆಗಳನ್ನು ಸಲ್ಲಿಸಿದಾಗ ಇನ್ಸೂರೆನ್ಸ್ ಕಂಪನಿ ಕೇವಲ ₹ 1,500 ನೀಡಲು ಬಂದಾಗ ವಕೀಲರ ಮೂಲಕ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ನೀಡಿದ್ದರು.

ADVERTISEMENT

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷೆ ಸುನಂದಾ ಹಾಗೂ ಮಹಿಳಾ ಸದಸ್ಯರಾದ ಮಹೇಶ್ವರಿ ಬಿ.ಎಸ್. ಅವರು ಪ್ರಕರಣ ಕೂಲಂಕಶವಾಗಿ ಪರಿಶೀಲನೆ ನಡೆಸಿ, ಒಟ್ಟು ವೆಚ್ಚ ₹ 1.77 ಲಕ್ಷವನ್ನು ಶೇ 6ರಂತೆ ಬಡ್ಡಿ ಸಹಿತ ದೂರು ದಾಖಲಾದ ದಿನದಿಂದ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. ಅವರ ಮಾನಸಿಕ ವ್ಯಥೆ ಮತ್ತು ಪ್ರಕರಣದ ಖರ್ಚಿನ ಪರಿಹಾರವಾಗಿ ₹ 5 ಸಾವಿರವನ್ನು ಕಾರಿನ ಮಾಲೀಕನಿಗೆ 30 ದಿನದೊಳಗಾಗಿ ಪಾವತಿಸಲು ಇನ್ಸೂರೆನ್ಸ್ ಕಂಪನಿಗೆ ಆದೇಶ ನೀಡಿದ್ದಾರೆ.

ಇದಕ್ಕೆ ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ. 12ರ ಬಡ್ಡಿ ಸಮೇತ ಕೊಡಬೇಕೆಂದು ಆದೇಶಿಸಲಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ಆಡಳಿತಾಧಿಕಾರಿ ಕರಿಯಪ್ಪ ಬಡಪ್ಪಳವರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.