ADVERTISEMENT

ಅನ್ನ ಕೊಡುವವರು ಅದಾನಿ, ಅಂಬಾನಿ ಅಲ್ಲ: ಕೃಷಿ ಸಚಿವ ಬಿ.ಸಿ.ಪಾಟೀಲ

ಜಿಲ್ಲಾ ಬಿಜೆಪಿ ರೈತ ಮೋರ್ಚಾ ರೈತ ಸಮಾವೇಶ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 15:35 IST
Last Updated 14 ಮಾರ್ಚ್ 2023, 15:35 IST
ಹಿರೇಕೆರೂರು ಪಟ್ಟಣದ ಪೊಲೀಸ್ ಮೈದಾನದಲ್ಲಿ ಮಂಗಳವಾರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ರೈತ ಸಮಾವೇಶವನ್ನು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಉದ್ಘಾಟಿಸಿದರು. ಕೃಷಿ ಸಚಿವ ಬಿ.ಸಿ.ಪಾಟೀಲ ಇದ್ದಾರೆ   –ಪ್ರಜಾವಾಣಿ ಚಿತ್ರ 
ಹಿರೇಕೆರೂರು ಪಟ್ಟಣದ ಪೊಲೀಸ್ ಮೈದಾನದಲ್ಲಿ ಮಂಗಳವಾರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ರೈತ ಸಮಾವೇಶವನ್ನು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಉದ್ಘಾಟಿಸಿದರು. ಕೃಷಿ ಸಚಿವ ಬಿ.ಸಿ.ಪಾಟೀಲ ಇದ್ದಾರೆ   –ಪ್ರಜಾವಾಣಿ ಚಿತ್ರ    

ಹಿರೇಕೆರೂರು: ‘ದೇಶಕ್ಕೆ ಅನ್ನ ಕೊಡುವವರು ಅದಾನಿ– ಅಂಬಾನಿ ಅಲ್ಲ, ಟಾಟಾ ಬಿರ್ಲಾರೂ ಅಲ್ಲ, ಅನ್ನ ಕೊಡುವವರು ರೈತರು, ಕೃಷಿಕರೇನಾದರೂ ಮುಷ್ಕರ ಹೂಡಿ ಬೆಳೆ ಬೆಳೆಯುವುದಿಲ್ಲ ಎಂದು ಹೇಳಿದರೆ ಎಲ್ಲರೂ ಹಸಿವೆಯಿಂದ ನರಳಬೇಕಾಗುತ್ತದೆ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಪಟ್ಟಣದ ಪೊಲೀಸ್ ಮೈದಾನದಲ್ಲಿ ಮಂಗಳವಾರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ರೈತ ಸಮಾವೇಶದಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯ ಬಂದಾಗ ದೇಶದಲ್ಲಿ 38 ಕೋಟಿ ಜನ ಇದ್ದರು. ಆದರೆ, ಎಲ್ಲರ ಹಸಿವು ನೀಗಿಸುವಷ್ಟು ಆಹಾರ ನಮ್ಮಲ್ಲಿರಲಿಲ್ಲ. ಈಗ ಜನಸಂಖ್ಯೆ 138 ಕೋಟಿಗೆ ತಲುಪಿದೆ. ಭೂಮಿ ಅಷ್ಟೇ ಇದೆ. ಈಗ ನಮಗೆ ಬೇಕಾದಷ್ಟು ಬೆಳೆದು ರಫ್ತು ಕೂಡ ಮಾಡುತ್ತಿದ್ದೇವೆ. ಇದಕ್ಕೆ ಕೃಷಿಕರು ಕಾರಣ ಎಂದರು.

ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಾತನಾಡಿ, ‘ಸ್ವಚ್ಛ ಭಾರತ್ ಮಿಷನ್ ಅನ್ನು ಮಹಾತ್ಮ ಗಾಂಧಿ ಜನ್ಮದಿನದಂದು 2014ರ ಅಕ್ಟೋಬರ್‌ 2ರಂದು ಆರಂಭಿಸಲಾಯಿತು. ಏಕೆಂದರೆ, ಗಾಂಧೀಜಿ ಅವರು ಸದಾ ಸ್ವಚ್ಛತೆಗೆ ಒತ್ತು ನೀಡುತ್ತಿದ್ದರು. 2014ರ ಬಳಿಕ ಸ್ವಚ್ಛ ಭಾರತ ಕಾರ್ಯಕ್ರಮದ ಪರಿಣಾಮ ಇಂದು ಬಹುತೇಕ ಮನೆಗಳು ಶೌಚಾಲಯ ಹೊಂದಿವೆ ಎಂದರು.

ADVERTISEMENT

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿ ಪ್ರಧಾನಿ ನರೇಂದ್ರ ಮೋದಿ ಗ್ರಾಮೀಣ ಮಹಿಳೆಯರಿಗೆ ‘ಉಜ್ವಲ’ ಯೋಜನೆಯನ್ನು ಕೊಡಮಾಡಿದ್ದಾರೆ. ಬಡತನ ರೇಖೆಗಿಂತ ಕೆಳಗೆ ಇರುವವರನ್ನು ಗಮನದಲ್ಲಿ ಇರಿಸಿಕೊಂಡು ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ ಎಂದರು.

ರಾಜ್ಯ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಈರಣ್ಣ ಕಡಾಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದರಾಜ ಕಲಕೋಟಿ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಪಾಲಾಕ್ಷಗೌಡ ಪಾಟೀಲ, ಎನ್.ಎಂ. ಇಟೇರ, ಹಿರೇಕೆರೂರು ಮಂಡಲ ಬಿಜೆಪಿ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೊಡ್ಡಗೌಡ ಪಾಟೀಲ, ಎಸ್.ಎಸ್. ಪಾಟೀಲ, ಲಿಂಗರಾಜ ಚಪ್ಪರದಹಳ್ಳಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಂಠಾಧರ ಅಂಗಡಿ, ಎಲ್.ಎನ್. ಕಲ್ಮೇಶ್, ಕಲ್ಯಾಣ ಕುಮಾರ ಇದ್ದರು.

**

ನಾನು ಕೃಷಿ ಸಚಿವನಾದ ಮೇಲೆ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಒಂದು ಸೂಚನೆ ಕೊಟ್ಟಿದ್ದೇನೆ. ಹಾಯ್, ಹಲೋ ಅನ್ನುವ ಬದಲು ಜೈ ಕಿಸಾನ್ ಅನ್ನಿ ಅಂತ.
– ಬಿ.ಸಿ. ಪಾಟೀಲ, ಕೃಷಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.