ADVERTISEMENT

ನಿಸ್ವಾರ್ಥ ದಾನ, ಪವಿತ್ರ ಧ್ಯಾನ...

​ಪ್ರಜಾವಾಣಿ ವಾರ್ತೆ
Published 23 ಮೇ 2020, 12:19 IST
Last Updated 23 ಮೇ 2020, 12:19 IST
ನಾಗನೂರು ಗ್ರಾಮದಲ್ಲಿ ರಂಜಾನ್‌ ಮಾಸದಲ್ಲಿ ಪ್ರಾರ್ಥನೆಯಲ್ಲಿ ತೊಡಗಿರುವ ಮಕ್ಕಳು ಮತ್ತು ಹಿರಿಯರು  –ಪ್ರಜಾವಾಣಿ ಚಿತ್ರ/ ನಾಗೇಶ ಬಾರ್ಕಿ 
ನಾಗನೂರು ಗ್ರಾಮದಲ್ಲಿ ರಂಜಾನ್‌ ಮಾಸದಲ್ಲಿ ಪ್ರಾರ್ಥನೆಯಲ್ಲಿ ತೊಡಗಿರುವ ಮಕ್ಕಳು ಮತ್ತು ಹಿರಿಯರು  –ಪ್ರಜಾವಾಣಿ ಚಿತ್ರ/ ನಾಗೇಶ ಬಾರ್ಕಿ    

ಅಲ್ಲಾಹನ ಅನುಯಾಯಿಗಳು ರಂಜಾನ್‌ ಏನೆಂದು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರೆ ವರ್ಷವಿಡೀ ರಂಜಾನ್‌ ಆಗಬೇಕೆಂದು ಆಶಿಸುತ್ತಿದ್ದರು ಎಂಬುದಾಗಿ ಪ್ರವಾದಿ ಮಹಮ್ಮದ್ ಸ್ವಲ್ಲಲ್ಲಾಹು-ಅಲೈಹಿ ವಸಲ್ಲಮರು ವಚನಗಳಲ್ಲಿ ಉಲ್ಲೇಖವಿದೆ. ‘ರಂಜಾನ್‌ ಎಂಬ ಪದವೇ ಪಾಪಗಳನ್ನು ಸುಟ್ಟು ಹಾಕುವುದೆಂಬ ಅರ್ಥವನ್ನು ನೀಡುತ್ತದೆ. ಎಂತಹ ಪಾಪಿಯಾದರೂ ನಿಷ್ಕಳಂಕ ಹೃದಯದಿಂದ ಪಶ್ಚಾತ್ತಾಪ ಪಟ್ಟಾಗ ಸರ್ವಾಧಿಪತಿಯಾದ ಅಲ್ಲಾಹು ಕ್ಷಮಿಸುವವನು. ಈ ತಿಂಗಳಲ್ಲಂತೂ ಅವನ ಕ್ಷಮೆ ಎಂದಿಗಿಂತಲೂ ಉದಾರವಾಗಿರುವುದು.

ಉಪವಾಸ ಆಚರಣೆ ಕಡ್ಡಾಯವಾಗಿರುವ ಈ ಮಾಸದಲ್ಲಿ ಆ ಪುಣ್ಯಕರ್ಮಗಳ ಲಾಭವನ್ನು ಗರಿಷ್ಠ ಪ್ರಮಾಣದಲ್ಲಿ ಸಂಪಾದಿಸುವುದು, ಪರಲೋಕ ಯಶಸ್ಸು ಬಯಸುವವರಿಗೆ ಅನಿವಾರ್ಯ. ಲೈಲತಲ್ ಖದ್ರ್‍ನ ನಿರೀಕ್ಷೆಯೊಂದಿಗೆ ರಾತ್ರಿ ವೇಳೆ ಜಾಗರಣೆ ಕೂರುವುದು, ರಾತ್ರಿ–ಹಗಲುಗಳಲ್ಲಿ ಸಾಧ್ಯವಾದಷ್ಟು ಖುರಾನ್ ಪಠಿಸುವುದು ಮತ್ತು ಶುದ್ಧ ರೀತಿಯಲ್ಲಿ ವ್ರತ ಆಚರಿಸುವುದು ಬಹಳ ಮುಖ್ಯ.

ಉಪವಾಸ ಉದ್ಧೇಶಿತ ಫಲ ದೊರಕಬೇಕೆಂದರೆ ಉಪವಾಸ ಕಳಂಕ ರಹಿತವಾಗಿರಬೇಕು. ಅನ್ನ, ಆಹಾರಗಳಿಂದ ಉಪವಾಸ ಕೆಡುವುದು ಬಾಹ್ಯ ರೂಪದಲ್ಲಿ ಮಾತ್ರ. ಆದರೆ, ಆತ್ಮೀಯ ದೃಷ್ಟಿಯಲ್ಲಿ ಉಪವಾಸ ನಿಷ್ಫಲವಾಗುವ ದಾರಿಗಳು ಬೇರೆಯೇ ಇವೆ. ಪ್ರವಾದಿಯವರ ಆತ್ಮೀಯರಾದ ಹಜರತ್ ಅನಸ್‌ರಿಂದ ವರದಿಯಾದ ಹದೀಸ್ ಪ್ರಕಾರ ಐದು ಸಂಗತಿಗಳು ಉಪವಾಸವನ್ನು ನಿಷ್ಫಲಗೊಳಿಸುವುದು, ಸುಳ್ಳು, ಪರನಿಂದನೆ, ಚಾಡಿ, ಕಳವು, ಕಾಮದೃಷ್ಟಿಯ ನೋಟ!

ADVERTISEMENT

ಕೊನೆಯ ಹತ್ತು ದಿನಗಳಲ್ಲಿ ದಾನ ಧರ್ಮ ಮಹತ್ವದ ಪುಣ್ಯ ಕಾರ್ಯವಾಗಿದೆ. ಯಾವ ದಾನ ಶ್ರೇಷ್ಠ ಎಂಬ ಪ್ರಶ್ನೆಗೆ ವಿಶ್ವ ಪ್ರವಾದಿ ಹಜರತ್‌ ಮಹಮ್ಮದ್‌ ಸಲ್ಲಲ್ಲಾಹು ಅಲೈಹಿವಸಲ್ಲಮರು ‘ರಂಜಾನಿನಲ್ಲಿ ಕೊಡುವ ದಾನ’ ಎಂದು ಉತ್ತರಿಸಿದರು.

ಕೊರೊನಾ ಸೋಂಕಿನಿಂದ ಜಗತ್ತಿನ ಸರ್ವ ಜನರು ತಲ್ಲಣಿಸುತ್ತಿದ್ದಾರೆ. ಹೀಗಾಗಿಈದ್‌ ಉಲ್‌ ಫಿತ್ರ್‌ ದಿನದಂದು,ಸಮಸ್ತ ಮುಸಲ್ಮಾನ ಬಾಂಧವರು ಹಬ್ಬವನ್ನು ಆಚರಣೆ ಮಾಡುವಾಗ ಅತ್ಯಂತ ಸರಳವಾಗಿ ಮನೆಯಲ್ಲೇ ಆಚರಣೆ ಮಾಡಬೇಕು ಎಂಬುದು ಮುಸ್ಲಿಂ ಧರ್ಮಗುರುಗಳ ಆದೇಶ.

– ಎ.ಪಿ ಮುಹ್ಸಿನ್,ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ,ಸ.ಹಿ.ಉ.ಪ್ರಾ.ಶಾಲೆ, ಆಲದಕಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.