ADVERTISEMENT

ಸಫಾಯಿ ಕರ್ಮಚಾರಿಗಳ ಪುನರ್‌ ಸಮೀಕ್ಷೆ ಶೀಘ್ರ

ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್. ಹನುಮಂತಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 1:48 IST
Last Updated 22 ಜನವರಿ 2021, 1:48 IST
ಹಾವೇರಿ ನಗರದಲ್ಲಿ ಗುರುವಾರ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್. ಹನುಮಂತಪ್ಪ ಅವರನ್ನು ವಿವಿಧ ಸಂಘಟನೆಗಳ ಮುಖಂಡರು ಸನ್ಮಾನಿಸಿದರು 
ಹಾವೇರಿ ನಗರದಲ್ಲಿ ಗುರುವಾರ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್. ಹನುಮಂತಪ್ಪ ಅವರನ್ನು ವಿವಿಧ ಸಂಘಟನೆಗಳ ಮುಖಂಡರು ಸನ್ಮಾನಿಸಿದರು    

ಹಾವೇರಿ: ‘ಸಫಾಯಿ ಕರ್ಮಚಾರಿಗಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ನಿಖರ ಅಂಕಿ-ಸoಖ್ಯೆ ಗುರುತಿಸಬೇಕಿದೆ. ಹೀಗಾಗಿ ಸಫಾಯಿ ಕರ್ಮಚಾರಿಗಳ ಪುನರ್‌ ಸಮೀಕ್ಷೆಯನ್ನು ಶೀಘ್ರದಲ್ಲೇ ನಡೆಸಲು ನಿರ್ಧರಿಸಲಾಗಿದೆ’ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್. ಹನುಮಂತಪ್ಪ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,‘ಈ ಹಿಂದೆ ನಡೆಸಿದ ಸಮೀಕ್ಷೆ ಅನುಸಾರ ರಾಜ್ಯದಲ್ಲಿ ಸಫಾಯಿ ಕರ್ಮಚಾರಿಗಳ ಸಂಖ್ಯೆಯು 1,42,291 ಹಾಗೂ ಅವಲಂಬಿತರು ಸೇರಿ 18 ಲಕ್ಷ. ಆದರೆ ಈ ಸಂಖ್ಯೆಯು ತುಂಬಾ ಹಳೆಯದಾಗಿದೆ. ಈ ಸಮೀಕ್ಷೆಯಲ್ಲಿ ಕೇವಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರನ್ನು ಮಾತ್ರ ಪರಿಗಣಿಸಲಾಗಿದೆ. ಆದರೆ ಖಾಸಗಿ/ ಸರ್ಕಾರಿ, ಅರೆ ಸರ್ಕಾರಿ, ಆಸ್ಪತ್ರೆ ಮುಂತಾದ ಕಚೇರಿಗಳಲ್ಲಿ ಕೆಲಸ ಮಾಡುವವರನ್ನು ಪರಿಗಣಿಸಿಲ್ಲ ಎಂದು ಹೇಳಿದರು.

ಪುನರ್‌ ಸಮೀಕ್ಷಾ ಕಾರ್ಯವನ್ನು ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ನಡೆಸಲಿದ್ದು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರು ಸೇರಿದಂತೆ ಅವರ ಕುಟುಂಬ ವರ್ಗದವರನ್ನು ಪರಿಗಣಿಸಲು ಉದ್ದೇಶಿಸಲಾಗಿದ್ದು, ಸಫಾಯಿ ಕರ್ಮಚಾರಿಗಳ ನಿಖರ ಅಂಕಿ-ಸಂಖ್ಯೆಯ ಮಾಹಿತಿ ಸಿಗುವ ನಿರೀಕ್ಷೆ ಇದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ, ನೇರಸಾಲ, ಸ್ವಯಂ ಉದ್ಯೋಗ, ಐರಾವತ, ಭೂ ಒಡೆತನದಂತ ಯೋಜನೆಗಳಿವೆ. ಈ ಯೋಜನೆಗಳ ಜೊತೆಗೆ ಸಫಾಯಿ ಕರ್ಮಚಾರಿಗಳ ಸಮಗ್ರ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಘೋಷಿಸಲು ಹಾಗೂ ನಿವೇಶನ ಮತ್ತು ವಸತಿ ಇರದ ಸಫಾಯಿ ಕರ್ಮಚಾರಿಗಳಿಗೆ ಸಕಲ ಸೌಕರ್ಯ ಒಳಗೊಂಡ ಸೂರು ಒದಗಿಸಲು ನಿಗಮ ಚಿಂತನೆ ನಡೆಸಿದೆ ಎಂದು ಹೇಳಿದರು.

ಸಫಾಯಿ ಕರ್ಮಚಾರಿಗಳು ಹಾಗೂ ಅವರ ಅವಲಂಬಿತರ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 1 ಸಾವಿರ ಕೋಟಿಯನ್ನು ನಿಗಮಕ್ಕೆ ನೀಡಬೇಕು. ಇದರ ಜತೆಗೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಮಗದಿಂದ ₹500 ಕೋಟಿ ನೀಡುವಂತೆ ಕೋರಲಾಗಿದೆ. ₹1500 ಕೋಟಿ ಅನುದಾನ ನೀಡಿದರೆ ಇನ್ನು 2 ವರ್ಷಗಳಲ್ಲಿ ಈ ಸಮುದಾಯದ ಸರ್ವತೋಮುಖ ಬೆಳವಣಿಗೆಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ಮಾಳಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜಯಗಾಂಧಿ ಸಂಜೀವಣ್ಣನವರ, ಗೌರವ ಅಧ್ಯಕ್ಷ ಬಸವರಾಜ ಹೆಡಿಗೊಂಡ, ಕಾನೂನು ಸಲಹೆಗಾರರಾದ ಎಸ್. ಜಿ. ಹೊನಪ್ಪನವರ ಹಾಗೂ ಉಡಚಪ್ಪ ಮಾಳಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.