ADVERTISEMENT

ಸಂಸ್ಕೃತಕ್ಕೆ ಭೈರಪ್ಪ ಜೈ

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 19:56 IST
Last Updated 7 ಜನವರಿ 2023, 19:56 IST
   

ಹಾವೇರಿ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷ ಉಪನ್ಯಾಸ ನೀಡಬೇಕಾಗಿದ್ದ ಸಾಹಿತಿ ಎಸ್‌.ಎಲ್. ಭೈರಪ್ಪ ಅವರು ಅನಾರೋಗ್ಯದ ಕಾರಣ ಗೈರಾಗಿದ್ದರು. ಪ್ರಧಾನ ಗುರುದತ್ತ ಅವರೇ ಭೈರಪ್ಪ ಅವರು ಕಳಿಸಿದ ಸಂದೇಶವನ್ನು ಓದಿದರು.

‘ಭಾರತದ ಬಹುತೇಕ ಎಲ್ಲ ಭಾಷೆಗಳೂ ಭಾರತ ಮಾತೆಯ ತನುಜಾತೆಯರೇ ಆಗಿದ್ದಾರೆ. ಇಲ್ಲಿನ ಎಲ್ಲ ಭಾಷೆಗಳಿಗೂ ಸಂಸ್ಕೃತ ಮಾತೃಸ್ಥಾನದಲ್ಲಿದೆ. ಸಾಹಿತ್ಯದ ಸಂವರ್ಧನೆ, ಸಮೃದ್ಧಿಗೆ ಸಂಸ್ಕೃತ ಕಾರಣವಾಗಿದೆ. ರಾಮಾಯಣ, ಮಹಾಭಾರತ ಸೇರಿ ವಿವಿಧ ಸಾಹಿತ್ಯ ಕೃತಿಗಳು ಸಂಸ್ಕೃತದಿಂದ ಭಾರತೀಯ ಭಾಷೆಗೆ ಅನುವಾದವಾದವು’ ಎಂದು ಭೈರಪ್ಪ ಅವರು ಸಂದೇಶದಲ್ಲಿ ತಿಳಿಸಿದ್ದಾರೆ.

‘ಭಾರತದ ಭಾಷೆಗಳ ಶಬ್ದ ಸಂಪತ್ತು ಸಂಸ್ಕೃತದಿಂದಲೇ ಬಂದಿದೆ. ಕನ್ನಡ ಶಬ್ದ ಕೋಶದ ಶೇ 60 ರಷ್ಟು ಶಬ್ದ ಸಂಪತ್ತು ಸಂಸ್ಕೃತದ್ದಾಗಿದೆ. ಈಗ ಎರಡನೇ ಹಂತದಲ್ಲಿ ಸಂಸ್ಕೃತದ ಸಂವರ್ಧನೆಗೆ ಭಾರತೀಯ ಭಾಷೆಗಳು ಕಾರಣವಾಗಿರುವುದು ವಿಶೇಷ ವಿದ್ಯಮಾನ. ನನ್ನ ಏಳು ಕಾದಂಬರಿಗಳು ಸಂಸ್ಕೃತಕ್ಕೆ ಅನುವಾದಗೊಂಡಿವೆ’ ಎಂದು ಹೇಳಿದ್ದಾರೆ.

ADVERTISEMENT

ಸಮ್ಮೇಳನಕ್ಕೆ ಗಣ್ಯರ ಗೈರು

ನಗರದಲ್ಲಿ ಶನಿವಾರ ನಡೆದ 86ನೇ ನುಡಿಜಾತ್ರೆಗೆ ಹಿರಿಯ ಕ್ರಿಕೆಟ್‌ ಆಟಗಾರ ವೆಂಕಟೇಶ ಪ್ರಸಾದ್‌, ಸಾಹಿತಿ ಚಂದ್ರಶೇಖರ ವಸ್ತ್ರದ, ಹಿರಿಯ ವಿದ್ವಾಂಸ ವೀರಣ್ಣ ರಾಜು, ಪ್ರಾಧ್ಯಾಪಕ ಓಂಕಾರ ಕಾಕಡೆ, ಐಎಎಸ್‌ ಅಧಿಕಾರಿ ನಂದಿನಿ ಗೈರು ಹಾಜರಾಗಿದ್ದರು.

ಇಂಗ್ಲಿಷ್ ಬಳಸದ ನಟ ಸುಚೇಂದ್ರ ಪ್ರಸಾದ್

ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆಯಲ್ಲಿ ನಡೆದ ‘ಕಲಾ ಸಂಗಮ’ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಚಲನಚಿತ್ರ ನಟ ಸುಚೇಂದ್ರ ಪ್ರಸಾದ್ ಅವರು, ತಮ್ಮ 25 ನಿಮಿಷದ ಅಧ್ಯಕ್ಷೀಯ ನುಡಿಯಲ್ಲಿ ಒಂದೇ ಒಂದು ಇಂಗ್ಲಿಷ್ ಪದ ಬಳಸದೆ ಗಮನ ಸೆಳೆದರು. ಗೋಷ್ಠಿಯ ಸಂಪನ್ಮೂಲ ವ್ಯಕ್ತಿಯಾಗಿದ್ದ ಗ್ಯಾರಂಟಿ ರಾಮಣ್ಣ ಅವರ ಹೆಸರನ್ನು ‘ಖಾತ್ರಿ ರಾಮಣ್ಣ’ ಎಂದು ಉಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.