ADVERTISEMENT

ಹಾವೇರಿ: 139 ಸರ್ಕಾರಿ ಶಾಲೆಗಳ 231 ಕೊಠಡಿ ಶಿಥಿಲ

* ಮೇ 29ರಿಂದ ಪ್ರಾಥಮಿಕ– ಪ್ರೌಢ ಶಾಲೆಗಳು ಆರಂಭ * ಹಲವು ಕಡೆ ಸೋರುವ ಕೊಠಡಿಗಳು * ದುರಸ್ತಿಗೆ ಲಭ್ಯವಾಗದ ಅನುದಾನ

ಸಂತೋಷ ಜಿಗಳಿಕೊಪ್ಪ
Published 26 ಮೇ 2025, 4:26 IST
Last Updated 26 ಮೇ 2025, 4:26 IST
ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಕೋಡ ಗ್ರಾಮ ಬಳಿಯ ಊಜನಿಪೂರದ ಎಲ್‌ಪಿಎಸ್ ಶಾಲೆ ದುಸ್ಥಿತಿ
ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಕೋಡ ಗ್ರಾಮ ಬಳಿಯ ಊಜನಿಪೂರದ ಎಲ್‌ಪಿಎಸ್ ಶಾಲೆ ದುಸ್ಥಿತಿ   

ಹಾವೇರಿ: ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬೇಸಿಗೆ ರಜೆ ಮುಕ್ತಾಯದ ಹಂತದಲ್ಲಿದ್ದು, ಮೇ 29ರಿಂದ ತರಗತಿಗಳು ಪುನರಾರಂಭ ಆಗಲಿವೆ. ಆದರೆ, ಮಳೆ ಹಾಗೂ ಇತರೆ ಕಾರಣಗಳಿಂದ ಜಿಲ್ಲೆಯ 139 ಶಾಲೆಗಳ 231 ಕೊಠಡಿಗಳು ಶಿಥಿಲಗೊಂಡಿದ್ದು, ಶಾಲಾ ಅವಧಿಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಲ್ಲಿ ಆತಂಕ ಶುರುವಾಗಿದೆ.

ಜಿಲ್ಲೆಯ 137 ಪ್ರಾಥಮಿಕ ಶಾಲೆಗಳ 229 ಕೊಠಡಿಗಳು ಶಿಥಿಲಗೊಂಡಿವೆ. 2 ಪ್ರೌಢಶಾಲೆಗಳ 2 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಜಿಲ್ಲೆಯ ಪೈಕಿ ಹಾನಗಲ್ ತಾಲ್ಲೂಕಿನಲ್ಲಿ ಹೆಚ್ಚು ಕೊಠಡಿಗಳು ಶಿಥಿಲಗೊಂಡಿವೆ.

ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳ ದುರಸ್ತಿಗೆ ಹಾಗೂ ಅವುಗಳನ್ನು ತೆರವು ಮಾಡಲು ಪ್ರತಿ ವರ್ಷವೂ ಅಲ್ಪಪ್ರಮಾಣದಲ್ಲಿ ಅನುದಾನ ಲಭ್ಯವಾಗುತ್ತಿದೆ. ಆದರೆ, ವರ್ಷದಿಂದ ವರ್ಷಕ್ಕೆ ಅನುದಾನ ಪ್ರಮಾಣ ಕಡಿಮೆ ಸಹ ಆಗುತ್ತಿದೆ. ಇದರಿಂದಾಗಿ ಕೊಠಡಿ ದುರಸ್ತಿ ಹಾಗೂ ಹೊಸ ಕೊಠಡಿ ನಿರ್ಮಾಣಕ್ಕೆ ಅಡ್ಡಿಯಾಗುತ್ತಿರುವುದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

ADVERTISEMENT

ಬೇಸಿಗೆ ರಜೆ ಮುಗಿಸಿ, ಸರ್ಕಾರಿ ಶಾಲೆಗೆ ಬರುವ ಮಕ್ಕಳನ್ನು ಅದ್ದೂರಿಯಾಗಿ ಸ್ವಾಗತಿಸುವಂತೆ ರಾಜ್ಯ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಆದರೆ, 139 ಸರ್ಕಾರಿ ಶಾಲೆಗಳ 231 ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಇಂಥ ಶಾಲೆಗಳಲ್ಲಿ ಮಕ್ಕಳಿಗೆ ಅಪಾಯ ಹೆಚ್ಚಿರುವುದಾಗಿ ಪೋಷಕರು ಆತಂಕಗೊಂಡಿದ್ದಾರೆ. ಕೊಠಡಿಗಳ ದುರಸ್ತಿ ಹಾಗೂ ಮರು ನಿರ್ಮಾಣಕ್ಕೂ ಪೋಷಕರು ಆಗ್ರಹಿಸುತ್ತಿದ್ದಾರೆ.

ಶಿಥಿಲಗೊಂಡಿರುವ ಕೊಠಡಿಗಳ ಹಂಚುಗಳು ಹಾರಿಹೋಗಿವೆ. ಇಟ್ಟಿಗೆಗಳು ಹೊರಗೆ ಬಿದ್ದಿವೆ. ಗೋಡೆಗಳು ಭಾಗಶಃ ಕುಸಿದಿದ್ದು, ಹಂತ ಹಂತವಾಗಿ ಬೀಳುವ ಮುನ್ಸೂಚನೆ ನೀಡುತ್ತಿವೆ.

ಮಳೆಗಾಲ ಆರಂಭವಾಗಿರುವುದರಿಂದ ಹಲವು ಕೊಠಡಿಗಳಲ್ಲಿ ನೀರು ಸೋರುತ್ತಿದೆ. ಕೆಲ ಕೊಠಡಿಗಳಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದ್ದು, ಇಂಥ ಕೊಠಡಿಗಳ ದುರಸ್ತಿಗೂ ಅನುದಾನ ಕೊರತೆ ಎದುರಾಗಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ.

ಹೆಚ್ಚಿನ ಹಳ್ಳಿಗಳನ್ನು ಒಳಗೊಂಡಿರುವ ಹಾವೇರಿ ಜಿಲ್ಲೆಯಲ್ಲಿ ಬಹುತೇಕರು ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗಳನ್ನು ಅವಲಂಬಿಸಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮರೀಚಿಕೆಯಾಗಿದೆ. ಶಿಥಿಲ ಕೊಠಡಿಗಳ ದುರಸ್ತಿಗೆ ಹಣವಿಲ್ಲವೆಂದು ಹೇಳುತ್ತಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಾಲೆಯ ಇತರೆ ಅಭಿವೃದ್ಧಿ ಕೆಲಸಗಳಿಗೆ ‘ಹಳೇ ವಿದ್ಯಾರ್ಥಿಗಳ ಸಂಘ’ಗಳನ್ನು ಅವಲಂಬಿಸಿದ್ದಾರೆ.

ಕೆಲ ಹಳೇ ವಿದ್ಯಾರ್ಥಿಗಳು, ಶಾಲೆಗಳಿಗೆ ಕೊಠಡಿ ಕಟ್ಟಿಸಿಕೊಡುತ್ತಿದ್ದಾರೆ. ಆದರೆ, ಬಹತೇಕ ಶಾಲೆಗಳ ಕೊಠಡಿಗಳು ಇಂದಿಗೂ ಶಿಥಿಲಾವಸ್ಥೆಯಲ್ಲಿದ್ದು, ಅವುಗಳ ದುರಸ್ತಿ ಮಾತ್ರ ಆಗುತ್ತಿಲ್ಲ.

209 ಕೊಠಡಿಗಳ ನಿರ್ಮಾಣ: ‘ಶಾಲೆಗಳ ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವುದು ಗಮನದಲ್ಲಿದೆ. ಕೊಠಡಿ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ವಿವೇಕ ಯೋಜನೆಯಡಿ ಇದುವರೆಗೂ 209 ಹೊಸ ಕೊಠಡಿಗಳನ್ನು ನಿರ್ಮಿಸಲಾಗಿದೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುರೇಶ ಹುಗ್ಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘2024–25ನೇ ಸಾಲಿನಲ್ಲಿ ಹೊಸದಾಗಿ 13 ಕೊಠಡಿಗಳ ನಿರ್ಮಾಣ ಮಾಡುವ ಗುರಿಯಿದೆ. ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳ ಬಳಿ ವಿದ್ಯಾರ್ಥಿಗಳು ಹೋಗದಂತೆ ತಡೆಯಲು ಶಿಕ್ಷಕರಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

ಹಾನಗಲ್ ವರದಿ: ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. 150 ಶಾಲಾ ಕೊಠಡಿಗಳು ದುರಸ್ತಿಗಾಗಿ ಕಾಯುತ್ತಿವೆ. 85 ಕೊಠಡಿಗಳು ಸಂಪೂರ್ಣವಾಗಿ ಶಿಥಿಲಗೊಂಡು ನೆಲಸಮಕ್ಕೆ ಕಾದಿವೆ.

‘ತಾಲೂಕಿನಲ್ಲಿ 222 ಪ್ರಾಥಮಿಕ ಮತ್ತು 29 ಪ್ರೌಢಶಾಲೆಗಳಲ್ಲಿ 1,269 ಶಾಲಾ ಕೊಠಡಿಗಳಿವೆ. ಈ ಪೈಕಿ 1,032 ಕೊಠಡಿಗಳು ಉತ್ತಮ ಸ್ಥಿತಿಯಲ್ಲಿವೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ತಿಳಿಸಿದರು.

‘ರಾಜ್ಯ ವಲಯ ಯೋಜನೆಯಡಿ ₹44 ಲಕ್ಷದಲ್ಲಿ ದುರಸ್ತಿ ಕೆಲಸಗಳು ನಡೆಯಲಿವೆ. ನಾಲ್ಕು ಶಾಲೆಗಳಿಗೆ ಒಂದೊಂದು ಹೊಸ ಕೊಠಡಿ ನಿರ್ಮಾಣ ಮಾಡಲಾಗುತ್ತದೆ. ಸಮಗ್ರ ಶಿಕ್ಷಣ ಯೋಜನೆಯಲ್ಲಿ ಮೂರು ಶಾಲೆಗಳಿಗೆ ತಲಾ ₹10 ಲಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಎಂಟು ಶಾಲೆಗಳ ದುರಸ್ತಿಗೆ ₹ 16 ಲಕ್ಷ ಅನುದಾನ ಸಿಕ್ಕಿದೆ’ ಎಂದು ಅವರು ಹೇಳಿದರು.

ಹಿರೇಕೆರೂರು: ಪಟ್ಟಣ ಹಾಗೂ ತಾಲ್ಲೂಕಿನಲ್ಲಿ 204 ಪ್ರಾಥಮಿಕ ಶಾಲೆಗಳು, 19 ಪ್ರೌಢಶಾಲೆಗಳಿವೆ. ಈ ಪೈಕಿ 28 ಶಾಲೆಗಳ 37 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ.

ತಾಲ್ಲೂಕಿನ ಕೋಡ ಬಳಿಯ ಉಜನಿಪೂರ ಎಲ್‌ಪಿಎಸ್ ಶಾಲೆಯ ಕೊಠಡಿ ಶಿಥಿಲಗೊಂಡಿದ್ದು, ಗೋಡೆಯೂ ಕುಸಿದು ಬಿದ್ದಿದೆ. ನೀಡನೇಗಿಲು ಗ್ರಾಮದ ಎಚ್‌.ಪಿ.ಎಸ್ ಕೊಠಡಿ ಸಹ ಶಿಥಿಲಗೊಂಡಿದೆ. 

ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಕಡೂರ ಬಳಿಯ ಬುಳ್ಳಾಪುರ ಎಚ್‌.ಪಿ.ಎಸ್ ಶಾಲೆ ದುಸ್ಥಿತಿ
ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಮಕರಿ ಬಳಿಯ ಯಡಗೋಡ ಗ್ರಾಮದ ಎಚ್‌ಪಿಎಸ್ ಸ್ಥಿತಿ 
ಜಿಲ್ಲೆಯ 139 ಶಾಲೆಗಳ 231 ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು ದುರಸ್ತಿ ಹಾಗೂ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರತಿ ವರ್ಷ ಪ್ರಸ್ತಾವ ಸಲ್ಲಿಸಲಾಗುತ್ತಿದೆ
ಸುರೇಶ ಹುಗ್ಗಿ ಉಪ ನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ

59 ಕೊಠಡಿ ನೆಲಸಮ ಅವಶ್ಯ

ಬ್ಯಾಡಗಿ: ಪಟ್ಟಣ ಹಾಗೂ ತಾಲ್ಲೂಕಿನಲ್ಲಿ 159 ಕೊಠಡಿಗಳ ದುರಸ್ತಿಗೆ ಅಧಿಕಾರಿಗಳು ಪ್ರಸ್ತಾವ ಸಲ್ಲಿಸಿದ್ದಾರೆ. ಈ ಪೈಕಿ ಬಳಸಲು ಯೋಗ್ಯವಿಲ್ಲದ 59 ಕೊಠಡಿಗಳನ್ನು ನೆಲಸಮಗೊಳಿಸಬೇಕಾದ ಅಗತ್ಯವಿದೆ. ‘2024–-25ನೇ ಸಾಲಿನಲ್ಲಿ ನೆರೆಹಾವಳಿಯಿಂದ 104 ಪ್ರಾಥಮಿಕ ಶಾಲೆಗಳ ಕೊಠಡಿಗಳು ಶಿಥಿಲಗೊಂಡಿದ್ದವು. ಅವುಗಳ ದುರಸ್ತಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಮಂಜೂರಾತಿ ದೊರೆತಿದ್ದು ಹಣ ಮಾತ್ರ ಬಿಡುಗಡೆಯಾಗಿಲ್ಲ. ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ತಿಳಿಸಿದರು. ‘2024–25ನೇ ಸಾಲಿನಲ್ಲಿ ತಲಾ ₹ 13.9 ಲಕ್ಷ ಮೊತ್ತದಲ್ಲಿ 22 ಪ್ರೌಢಶಾಲೆಗಳಿಗೆ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ತಲಾ ₹2 ಲಕ್ಷ ಮೊತ್ತದಲ್ಲಿ 22 ಶಾಲಾ ಕೊಠಡಿಗಳು ಸೋರದಂತೆ ತಗಡುಗಳನ್ನು ಹಾಕಿ ದುರಸ್ತಿ ಮಾಡಿಸಲಾಗಿದೆ’ ಎಂದರು.

ಮೂಲಸೌಕರ್ಯ ಕೊರತೆ

ರಾಣೆಬೆನ್ನೂರು: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳು ಮೂಲಸೌಕರ್ಯ ಕೊರತೆ ಎದುರಿಸುತ್ತಿವೆ. ಶೌಚಾಲಯ ಶುದ್ಧ ಕುಡಿಯುವ ನೀರು ಆಸನ ವ್ಯವಸ್ಥೆ ಶೈಕ್ಷಣಿಕ ಉಪಕರಣಗಳ ಕೊರತೆಯಿಂದ ಶಿಕ್ಷಣದ ಮಟ್ಟ ಕುಗ್ಗುತ್ತಿದೆ. ಶಾಲಾ ಕೊಠಡಿಗಳು ಶಿಥಿಲಗೊಂಡಿದ್ದು ಮಕ್ಕಳ ಜೀವಕ್ಕೆ ಸುರಕ್ಷತೆ ಎಲ್ಲಿದೆ ಎಂಬ ಪ್ರಶ್ನೆ ಮೂಡುತ್ತಿದೆ. ಶಾಲಾ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ. ಮಂಗಗಳ ಕಾಟಕ್ಕೆ ಹಂಚುಗಳು ಒಡೆದು ಮಳೆ ಬಂದಾಗ ನೀರು ಸೋರುತ್ತಿದೆ. ವೈಟಿ ಹೊನ್ನತ್ತಿ (ಯಲ್ಲಾಪುರ) ಸರ್ಕಾರಿ ಶಾಲೆಯ ಚಾವಣಿಯ ಸಿಮೆಂಟ್‌ ಕಾಂಕ್ರೀಟ್‌ ಉದುರುತ್ತಿದೆ. ‘ತಾಲ್ಲೂಕಿನಲ್ಲಿ 210 ಸರ್ಕಾರಿ ಶಾಲೆಗಳಿವೆ. 12 ಸರ್ಕಾರಿ ಶಾಲೆಗಳಲ್ಲಿ 31 ಕೊಠಡಿಗಳು ದುರಸ್ತಿಯಲ್ಲಿವೆ. 45 ಹೊಸ ಕಟ್ಟಡಗಳ ಅವಶ್ಯಕತೆ ಇದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ ತಿಳಿಸಿದರು. ‘ಖಾಸಗಿ ಶಾಲೆಗಳ ವ್ಯಾಮೋಹ ಹೆಚ್ಚಾಗುತ್ತಿದೆ. ಇಂಥ ಸಂದರ್ಭದಲ್ಲೇ ಸರ್ಕಾರಿ ಶಾಲೆಗಳಲ್ಲಿ ಸೌಕರ್ಯಗಳ ಕೊರತೆ ಕಾಡುತ್ತಿದೆ. ಕೊರತೆ ನೀಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಶಾಲೆಗಳ ಅಭಿವೃದ್ಧಿಗೆ ಸೂಕ್ತ ಅನುದಾನ ಮಂಜೂರು ಮಾಡಬೇಕು’ ಎಂದು ಪೋಷಕರು ಆಗ್ರಹಿಸಿದ್ದಾರೆ.

(ಪೂರಕ ಮಾಹಿತಿ: ಮುಕ್ತೇಶ್ವರ ಕೂರಗುಂದಮಠ, ಪ್ರಮೀಳಾ ಹುನಗುಂದ, ಮಾರುತಿ ಪೇಟಕರ, ಹುತ್ತೇಶ ಲಮಾಣಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.