ADVERTISEMENT

ಪರಿಹಾರ ನೀಡದ ಸಾರಿಗೆ ಸಂಸ್ಥೆಯ ಬಸ್‌ ಜಪ್ತಿ

ಅಪಘಾತ ಪ್ರಕರಣ: ಹಣ ನೀಡಿ ಬಸ್‌ ಒಯ್ಯದ ಸಾರಿಗೆ ಇಲಾಖೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 5:50 IST
Last Updated 7 ಡಿಸೆಂಬರ್ 2022, 5:50 IST
ಅಪಘಾತ ಪ್ರಕರಣದಲ್ಲಿ ಮೃತರ ವಾರಸುದಾರರಿಗೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವ ಹುಬ್ಬಳ್ಳಿ ಸಾರಿಗೆ ಘಟಕದ ಬಸ್‌ ಜಪ್ತಿಯಾಗಿ ಹಾನಗಲ್ ನ್ಯಾಯಾಲಯ ಆವರಣದಲ್ಲಿ ನಿಂತಿದೆ.
ಅಪಘಾತ ಪ್ರಕರಣದಲ್ಲಿ ಮೃತರ ವಾರಸುದಾರರಿಗೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವ ಹುಬ್ಬಳ್ಳಿ ಸಾರಿಗೆ ಘಟಕದ ಬಸ್‌ ಜಪ್ತಿಯಾಗಿ ಹಾನಗಲ್ ನ್ಯಾಯಾಲಯ ಆವರಣದಲ್ಲಿ ನಿಂತಿದೆ.   

ಹಾನಗಲ್: ರಸ್ತೆ ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರನ ವಾರಸುದಾರರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿರುವ ಸಾರಿಗೆ ಘಟಕದ ಬಸ್ ಜಪ್ತಿಯಾಗಿ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಕಳೆದ 12 ದಿನಗಳಿಂದ ನಿಂತಿದೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಿ. 15, 2020 ರಂದು ಬಸ್ ಮತ್ತು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿತ್ತು. ಬೈಕ್ ಸವಾರ ಸೋಮರಾಯ ಮಹಿಪತಿ ಎಂಬುವರು ಮೃತಪಟ್ಟಿದ್ದರು. ಮೃತನ ವಾರಸುದಾರ ಸತ್ಯವ್ವ ಮಹಿಪತಿ ಎಂಬುವವರು ಪರಿಹಾರ ಕೋರಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಘಟಕದ ವಿರುದ್ಧ ಹಾನಗಲ್ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆದು ಮೃತರ ವಾರಸುದಾರರಿಗೆ ₹ 33 ಲಕ್ಷ ಪರಿಹಾರ ನೀಡಲು ಹಾನಗಲ್‌ನ ಹೆಚ್ಚುವರಿ ಸಿವಿಲ್ ನ್ಯಾಯಾಲಯವು 20 ಜ.20, 2022 ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಾರಿಗೆ ಸಂಸ್ಥೆ ಧಾರವಾಡ ಹೈಕೋರ್ಟ್‌ ಮೆಟ್ಟಿಲೇರಿತ್ತು. ಹಾನಗಲ್ ನ್ಯಾಯಾಲಯದ ಆದೇಶದಂತೆ ಸದ್ಯ ಪರಿಹಾರದ ಅರ್ಧ ಮೊತ್ತವನ್ನು ವಾರಸುದಾರರಿಗೆ ಭರಿಸುವಂತೆ ಮೇ 3 ರಂದು ಹೈಕೋರ್ಟ್‌ನಿಂದ ಆದೇಶವಾಗಿದೆ ಎಂದು ಪರಿಹಾರ ಕೋರಿರುವ ಅರ್ಜಿದಾರರ ಪರ ವಕೀಲರಾದ ಟಿ.ಬಿ.ಸವಣೂರ, ರಂಗನಾಥ ಲಂಟಗಿ ತಿಳಿಸಿದ್ದಾರೆ.

ADVERTISEMENT

ಆದರೆ ಈ ತನಕ ಸಾರಿಗೆ ಸಂಸ್ಥೆಯಿಂದ ಪರಿಹಾರದ ಮೊತ್ತ ಜಮೆಗೊಂಡಿಲ್ಲದ ಕಾರಣಕ್ಕಾಗಿ ಹಾನಗಲ್ ಹಿರಿಯ ವಿಭಾಗದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಬಿ.ವೆಂಕಟಪ್ಪ ಅವರ ಆದೇಶದ ಮೇರೆಗೆ ಬಸ್ ಜಪ್ತಿ ಮಾಡಲಾಗಿದೆ. ಹಣ ತುಂಬಿ ಬಸ್ ಬಿಡಿಸಿಕೊಂಡು ಹೋಗುವ ಕಳಕಳಿಯನ್ನು ಸಾರಿಗೆ ಸಂಸ್ಥೆ ತೋರುತ್ತಿಲ್ಲ ಎಂದು ಅರ್ಜಿದಾರ ಪರ ವಕೀಲರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.