ಹಾವೇರಿ: ‘ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನ ಸೆಪ್ಟೆಂಬರ್ 17ರಿಂದ ಮಹಾತ್ಮ ಗಾಂಧಿ ಜನ್ಮ ದಿನ ಅಕ್ಟೋಬರ್ 2ರವರೆಗೆ ದೇಶದಾದ್ಯಂತ ‘ಸೇವಾ ಪಾಕ್ಷಿಕ ಅಭಿಯಾನ’ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಬಿಜೆಪಿ ಮುಖಂಡ ಎನ್.ರವಿಕುಮಾರ್ ಹೇಳಿದರು.
ಇಲ್ಲಿಯ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಸೇವಾ ಪಾಕ್ಷಿಕ ಅಭಿಯಾನ’ ಕುರಿತ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಸೇವಾ ಪಾಕ್ಷಿಕ ಅಭಿಯಾನದ ಅವಧಿಯಲ್ಲಿ ವಿವಿಧ ಸೇವಾ ಚಟುವಟಿಗಳ ಮೂಲಕ ದೇಶದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವುದು ನಮ್ಮ ಉದ್ದೇಶವಾಗಿದೆ. ಕಳೆದ ವರ್ಷದ ರೀತಿಯಲ್ಲಿಯೇ ಈ ವರ್ಷವೂ ಅಭಿಯಾನವನ್ನು ಅರ್ಥಪೂರ್ಣವಾಗಿ ನಡೆಸಬೇಕು’ ಎಂದು ಕಾರ್ಯಕರ್ತರಿಗೆ ತಿಳಿಸಿದರು.
‘ಜಿಲ್ಲೆಯ ಎಲ್ಲ ಮಂಡಲಗಳಲ್ಲಿ ರಕ್ತದಾನ ಶಿಬಿರ, ಸ್ವಚ್ಛತಾ ಅಭಿಯಾನ, ವಿಕಸಿತ ಭಾರತ ಚಿತ್ರಕಲಾ ಸ್ಪರ್ಧೆ, ಆರೋಗ್ಯ ಶಿಬಿರ, ಪ್ರದರ್ಶಿನಿ ಹಾಗೂ ಬೌದ್ಧಿಕ ಸಮ್ಮೇಳನ, ಮೋದಿ ವಿಕಾಸ ಮ್ಯಾರಥಾನ್, ಪಂ. ದಿನದಯಾಳ ಉಪಾಧ್ಯಾಯರ ಜನ್ಮದಿನ, ಮಹಾತ್ಮ ಗಾಂಧಿ, ಲಾಲ್ ಬಹದ್ದೂರ ಶಾಸ್ತ್ರಿ ಜನ್ಮದಿನ ಆಚರಿಸಬೇಕು. ನಮ್ಮ ಪಕ್ಷ ಕೇವಲ ರಾಜಕೀಯ ಅಧಿಕಾರಕ್ಕಾಗಿ ಕೆಲಸ ಮಾಡುವುದಿಲ್ಲ. ಬದಲಾಗಿ ಸಮಾಜದ ಸರ್ವರ ಏಳಿಗೆಗಾಗಿ ಸದಾಕಾಲ ಸೇವೆ ಮಾಡುತ್ತದೆ’ ಎಂದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ‘ಜಿಲ್ಲೆಯಲ್ಲಿ ಬಿಜೆಪಿಯು ದಿನದಿಂದ ದಿನಕ್ಕೆ ಸದೃಢವಾಗುತ್ತಿದೆ. ನಮ್ಮ ಪಕ್ಷ ಕೇವಲ ಚುನಾವಣೆಗಾಗಿ ಕಾರ್ಯ ಮಾಡುವುದಿಲ್ಲ. ಬದಲಾಗಿ ಸಮಾಜದ ಅಭಿವೃದ್ಧಿಗಾಗಿ ಕಾರ್ಯ ಮಾಡುತ್ತಿದೆ. ಸೇವಾ ಪಾಕ್ಷಿಕ ಅಭಿಯಾನದ ಮೂಲಕ ಸಮಾಜದ ಪರಿವರ್ತನೆಗಾಗಿ ನಾವೆಲ್ಲರೂ ಶ್ರಮಿಸಬೇಕು’ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಆಲದಕಟ್ಟಿ, ರಾಜ್ಯ ಉಪಾಧ್ಯಕ್ಷ ಬಸವರಾಜ ಕೇಲಗಾರ, ಚಂದ್ರಣ್ಣ ಹರಿಜನ, ಸಿದ್ದು ಚಿಕ್ಕಬಿದರಿ, ನರಹರಿ ಕಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.