ಮೃತ ವ್ಯಕ್ತಿ ಶಿವು ಕುನ್ನೂರು
ಹಾವೇರಿ: ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಗುತ್ತಿಗೆದಾರ ಶಿವಾನಂದ ಚನ್ನಬಸಪ್ಪ ಕುನ್ನೂರ (42) ಎಂಬುವವರನ್ನು ಮಂಗಳವಾರ ಮಧ್ಯಾಹ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ಆಸ್ತಿ ವೈಷಮ್ಯವೇ ಹತ್ಯೆಗೆ ಕಾರಣವೆಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ಕಚೇರಿ ಓಣಿಯ ನಿವಾಸಿ ಶಿವಾನಂದ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. ಪಂಚಮಸಾಲಿ ಪಂಚಸೇನಾ ತಾಲ್ಲೂಕು ಘಟಕದ ಅಧ್ಯಕ್ಷರೂ ಆಗಿದ್ದರು. ಅವರ ಹತ್ಯೆಯ ಬಗ್ಗೆ ಪತ್ನಿ ನೀಡಿರುವ ದೂರು ಆಧರಿಸಿ, ಶಿಗ್ಗಾವಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಶಿವಾನಂದ ಕೊಲೆ ಬಗ್ಗೆ ಪತ್ನಿ ದೂರು ನೀಡಿದ್ದಾರೆ. ಆರೋಪಿಗಳು ಎನ್ನಲಾದ ನಾಗರಾಜ ಪ್ರಕಾಶ ಸವದತ್ತಿ, ಈತನ ಸಹಚರರಾದ ಹನುಮಂತ, ಅಶ್ರಫ್, ಸುದೀಪ್, ಸುರೇಶ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಮುಂದುವರಿಸಲಾಗಿದೆ’ ಎಂದು ಜಿಲ್ಲಾ ಎಸ್ಪಿ ಅಂಶುಕುಮಾರ ತಿಳಿಸಿದ್ದಾರೆ.
ದಾಬಾ ಎದುರು ದಾಳಿ: ‘ಶಿವಾನಂದ ಅವರು ಮಂಗಳವಾರ ಮಧ್ಯಾಹ್ನ ಊಟಕ್ಕೆಂದು ಮಹೇಶ ಢಾಬಾಕ್ಕೆ ಹೋಗಿದ್ದರು. ಮಧ್ಯಾಹ್ನ 2.30 ಗಂಟೆ ಅವಧಿಯಲ್ಲಿ ಊಟ ಮುಗಿಸಿ ಢಾಬಾದಿಂದ ಹೊರಗೆ ಬಂದು ಕಾರಿನತ್ತ ಹೊರಟಿದ್ದರು. ಅದೇ ಸಂದರ್ಭದಲ್ಲಿಯೇ ಐವರು ಆರೋಪಿಗಳು ದಾಳಿ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.
‘ಶಿವಾನಂದ ಮೇಲೆ ಮಾರಕಾಸ್ತ್ರ ಬೀಸಿದ್ದ ಆರೋಪಿಗಳು, ದೇಹದ ಹಲವೆಡೆ ಹೊಡೆದಿದ್ದರು. ಮುಖ, ತಲೆ, ಕುತ್ತಿಗೆಗೂ ಹೊಡೆದಿದ್ದರು. ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದ ಶಿವಾನಂದ, ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದರು.
‘ರಾಷ್ಟ್ರೀಯ ಹೆದ್ದಾರಿಯಿಂದ ಶಿಗ್ಗಾವಿ ಪಟ್ಟಣ ಪ್ರವೇಶಿಸುವ ಜಾಗದಲ್ಲಿಯೇ ಈ ಕೊಲೆ ನಡೆದಿದೆ. ಶಿವಾನಂದ ಅವರ ಮೇಲೆ ಆರೋಪಿಗಳು ದಾಳಿ ಮಾಡಿದ್ದ ದೃಶ್ಯವನ್ನು ಕೆಲ ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಅದೇ ವಿಡಿಯೊ ಆಧರಿಸಿ ಆರೋಪಿಗಳ ಸುಳಿವು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.
ಆಸ್ತಿ ವಿಚಾರಕ್ಕೆ ವೈಷಮ್ಯ: ‘ಶಿಗ್ಗಾವಿ ಪುರಸಭೆ ವ್ಯಾಪ್ತಿಯಲ್ಲಿರುವ ಆಸ್ತಿ ವಿಚಾರವಾಗಿ ಶಿವಾನಂದ ಹಾಗೂ ಆರೋಪಿ ನಾಗರಾಜ ನಡುವೆ ವೈಷಮ್ಯವಿತ್ತು. ಇದೇ ವಿಚಾರಕ್ಕೆ ಹಲವು ಬಾರಿ ಗಲಾಟೆಗಳೂ ನಡೆದಿದ್ದವು. ಈ ಬಗ್ಗೆ ಶಿವಾನಂದ ಪತ್ನಿ ಸಹ ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಆಸ್ತಿ ವೈಷಮ್ಯದಿಂದಲೇ ನಾಗರಾಜ, ಸಹಚರರ ಮೂಲಕ ಶಿವಾನಂದ ಕೊಲೆ ಮಾಡಿರುವುದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ. ಆರೋಪಿಗಳು ಸದ್ಯ ಶಿಗ್ಗಾವಿಯಿಂದ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಬೆದರಿಕೆ ದೂರು ನೀಡಿದ್ದ ಶಿವಾನಂದ’
‘ನನ್ನ ಜೀವಕ್ಕೆ ಬೆದರಿಕೆ ಇದೆ’ ಎಂದು ಆರೋಪಿಸಿ ಶಿವಾನಂದ ಅವರು ಶಿಗ್ಗಾವಿ ಠಾಣೆಗೆ ಇತ್ತೀಚೆಗೆ ದೂರು ನೀಡಿದ್ದರು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಪೊಲೀಸರ ನಿರ್ಲಕ್ಷ್ಯವೂ ಶಿವಾನಂದ ಕೊಲೆಗೆ ಕಾರಣವೆಂದು ಸಂಬಂಧಿಕರು ದೂರುತ್ತಿದ್ದಾರೆ.
‘ಶಿವಾನಂದ ನೀಡಿದ್ದ ದೂರನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆರೋಪಿಗಳನ್ನು ಠಾಣೆಗೆ ಕರೆಸಿ ಎಚ್ಚರಿಕೆಯನ್ನೂ ನೀಡಿರಲಿಲ್ಲ. ಅವರ ವಿರುದ್ಧ ಕಾನೂನು ಕ್ರಮವನ್ನೂ ಜರುಗಿಸಿರಲಿಲ್ಲ. ದೂರಿಗೆ ಸ್ಪಂದಿಸದ ತಪ್ಪಿತಸ್ಥರ ಪೊಲೀಸರನ್ನು ಅಮಾನತು ಮಾಡಬೇಕು’ ಎಂದು ಸಂಬಂಧಿಕರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.