ADVERTISEMENT

ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಭೂಕಬಳಿಕೆ ಆರೋಪ

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಎಸ್‌.ಆರ್‌.ಹಿರೇಮಠ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 14:36 IST
Last Updated 17 ಜನವರಿ 2020, 14:36 IST
ಎಸ್.ಆರ್. ಹಿರೇಮಠ - ಎಚ್. ಡಿ. ಕುಮಾರಸ್ವಾಮಿ
ಎಸ್.ಆರ್. ಹಿರೇಮಠ - ಎಚ್. ಡಿ. ಕುಮಾರಸ್ವಾಮಿ   

ಹಾವೇರಿ: ರಾಮನಗರ ತಾಲ್ಲೂಕು ಬಿಡದಿ ಹೋಬಳಿ ಕೇತಿಗಾನಹಳ್ಳಿ ಗ್ರಾಮದ 110 ಎಕರೆ ಗೋಮಾಳ ಒಳಗೊಂಡಂತೆ ಸುಮಾರು 200 ಎಕರೆ ಸರ್ಕಾರಿ ಭೂಮಿಯನ್ನು ಜೆಡಿಎಸ್‌‌ನಎಚ್‌.ಡಿ.ಕುಮಾರಸ್ವಾಮಿ, ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಹಾಗೂ ಅವರ ಸಂಬಂಧಿಕರು ಅಕ್ರಮವಾಗಿ ಕಬಳಿಸಿದ್ದಾರೆ ಎಂದು ‘ಸಿಟಿಟನ್‌ ಫಾರ್‌ ಡೆಮಾಕ್ರಸಿ’ ಅಧ್ಯಕ್ಷ ಎಸ್‌.ಆರ್‌. ಹಿರೇಮಠ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ₹ 500 ಕೋಟಿಗೂ ಹೆಚ್ಚು ಬೆಲೆಬಾಳುವ ಭೂಮಿ ಕಬಳಿಸಿರುವ ತಪ್ಪಿತಸ್ಥರ ವಿರುದ್ಧಕ್ರಮ ಕೈಗೊಳ್ಳಲು 2014ರ ಆಗಸ್ಟ್‌ 5ರಂದು ಕರ್ನಾಟಕ ಲೋಕಾಯುಕ್ತರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಐದು ವರ್ಷ ಕಳೆದರೂಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಈ ಬಗ್ಗೆ ಸಮಾಜ ಪರಿವರ್ತನಾ ಸಮುದಾಯ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹಾಕಿತ್ತು. ಹೈಕೋರ್ಟ್‌ ಈ ಪ್ರಕರಣವನ್ನು 2020ರ ಜನವರಿ 6ರಂದು ವಿಚಾರಣೆ ಕೈಗೆತ್ತಿಕೊಂಡು, ಲೋಕಾಯುಕ್ತ ಪತ್ರಕ್ಕೆ ಉತ್ತರ ಕೊಡದೆ ಇರುವುದು ಗಂಭೀರ ಕರ್ತವ್ಯ ಲೋಪ. ಈ ಕುರಿತು ವಿವರಣೆ ನೀಡುವಂತೆ ಜನವರಿ 14ರಂದು ಮುಖ್ಯ ಕಾರ್ಯದರ್ಶಿ ಅವರಿಗೆ ನೋಟಿಸ್‌ ಜಾರಿ ಮಾಡಿದೆ ಎಂದು ತಿಳಿಸಿದರು.

ADVERTISEMENT

ಬಳ್ಳಾರಿ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದ ರೀತಿಯಲ್ಲೇ ಈ ಪ್ರಕರಣವನ್ನು ತಾರ್ಕಿಕ ಅಂತ್ಯ ಕಾಣುವವರೆಗೆ ಹೋರಾಟ ಮುಂದುವರೆಸುತ್ತೇವೆ. ಎಚ್‌.ಡಿ.ಕುಮಾರಸ್ವಾಮಿ ಕುಟುಂಬದವರು ಆತ್ಮಾವಲೋಕನ ಮಾಡಿಕೊಂಡು, ಕಬಳಿಸಿರುವ ಎಲ್ಲ ಭೂಮಿಯನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕು. ತಪ್ಪಿತಸ್ಥರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎನ್‌.ಸಿ.ದೊಡ್ಡಮನಿ, ವಕೀಲ ನಾರಾಯಣ ಕಾಳೆ, ವಿನಾಯಕ ಕುರುಬರ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.