
ರಾಣೆಬೆನ್ನೂರು: ‘21ನೇ ಶತಮಾನ ವಿಜ್ಞಾನ, ತಂತ್ರಜ್ಞಾನದ ಯುಗವಾಗಿದೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಯಲು ವೈಜ್ಞಾನಿಕ ಜಾಗೃತಿ ಕಾರ್ಯಕ್ರಮವನ್ನು ಶಿಕ್ಷಕರು ಉತ್ತೇಜಿಸಬೇಕಿದೆ. ಮಕ್ಕಳಲ್ಲಿ ಚಿಂತನಾಶೀಲ ಮನೋಭಾವ ಬೆಳೆಯಬೇಕಿದೆ’ ಎಂದು ಡ್ರೀಮ್ ಸ್ಕೂಲ್ ಫೌಂಡೇಶನ್ ಸಂಸ್ಥಾಪಕ ಮೈತ್ರೇಯಿ ಕುಮಾರ ಹೇಳಿದರು.
ನಗರದ ಆರ್ಟಿಇಎಸ್ ಕಾಲೇಜು ಸಭಾಂಗಣದಲ್ಲಿ ಈಚೆಗೆ ನಡೆದ ಬೆಂಗಳೂರಿನ ಡ್ರೀಮ್ ಸ್ಕೂಲ್ ಫೌಂಡೇಶನ್ ವತಿಯಿಂದ ತಾಲ್ಲೂಕಿನ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಜು ನಾಯಕ್ ಮಾತನಾಡಿ, ‘ಸ್ವಸ್ಥ, ಸುಸ್ಥಿರ ಸಮಾಜ ನಿರ್ಮಾಣಕ್ಕೆ ವಿಜ್ಞಾನ ಪ್ರೇರಣೆಯಾಗಿದೆ. ವಿಜ್ಞಾನದ ಮಾದರಿಗಳ ತಯಾರಿಕೆಯಲ್ಲಿ ಶಿಕ್ಷಕರು ಮಕ್ಕಳಿಗೆ ಸಹಕರಿಸಿ ಕಲಿಕೆಯನ್ನು ಉತ್ತೇಜಿಸಬೇಕು’ ಎಂದರು.
ತಾಲ್ಲೂಕಿನ ಆಯ್ದ 10 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ವಿಜ್ಞಾನ ಮಾದರಿಗಳ ಪ್ರದರ್ಶನ ನೀಡಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸತ್ಯ ನಾರಾಯಣಕುಮಾರ, ಆದಿತ್ಯ ಹೊಸಂಗಡಿ, ಪ್ರೊ.ಲಿಂಗರಾಜ ಹೆಬ್ಬಾಳದ, ಪ್ರೊ.ಪರಶುರಾಮ ಪವಾರ, ಪ್ರಾಚಾರ್ಯ ಸಿ.ಎ ಹರಿಹರ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.