
ಹಾವೇರಿ: ‘ಬೆಳಗಾವಿ ಜಿಲ್ಲೆಯ ಮಾದರಿಯಲ್ಲಿಯೇ ಹಾವೇರಿ ಜಿಲ್ಲೆಯ ರೈತರಿಗೂ ಪ್ರತಿ ಟನ್ ಕಬ್ಬಿಗೆ ₹ 3,300 ನೀಡಬೇಕು’ ಎಂದು ಒತ್ತಾಯಿಸಿ ನಗರದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿರುವ ಕಬ್ಬು ಬೆಳೆಗಾರರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ (ನ. 12) ವಾಹನಗಳನ್ನು ತಡೆದು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ನಗರದ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ಮಂಗಳವಾರವೂ ಧರಣಿ ಮುಂದುವರಿಸಿದ ರೈತರು, ‘ಬೆಲೆ ನಿಗದಿಯಲ್ಲಿ ಹಾವೇರಿ ಜಿಲ್ಲೆಯ ರೈತರಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ’ ಎಂದು ಆರೋಪಿಸಿದರು.
‘ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ರಾಜ್ಯ ಸರ್ಕಾರವೂ ಕಾಂಗ್ರೆಸ್ಸಿನದ್ದಾಗಿದೆ. ಆದರೆ, ಯಾವೊಬ್ಬ ಶಾಸಕರೂ ಕಬ್ಬ ಬೆಳೆಗಾರರ ಪರ ನಿಲ್ಲುತ್ತಿಲ್ಲ. ಹಾವೇರಿ ಜಿಲ್ಲೆಗೆ ಅನ್ಯಾಯವಾದರೂ ಪ್ರಶ್ನಿಸುತ್ತಿಲ್ಲ. ಕಾಂಗ್ರೆಸ್ ಶಾಸಕರು ಇದ್ದರೂ ಇಲ್ಲದಂತಾಗಿದೆ’ ಎಂದು ರೈತರು ಆಕ್ರೋಶ ಹೊರಹಾಕಿದರು.
‘ಕಬ್ಬು ಬೆಲೆ ನಿಗದಿಗಾಗಿ ಹೋರಾಟ ನಡೆಸುತ್ತಿರುವುದು ಇದೇ ಮೊದಲಲ್ಲ. ಜಿಲ್ಲೆಯಲ್ಲಿರುವ ಮೂರು ಕಾರ್ಖಾನೆಯವರು ಬೆಳೆಗಾರರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಸದ್ಯದ ಸಕ್ಕರೆ ಇಳುವರಿ ಪ್ರಮಾಣದ ಮೇಲೆ ನಿಗದಿಯಾಗಿರುವ ಎಫ್ಆರ್ಪಿ ಬೆಲೆ ನೀಡಲು ಸಹ ಹಿಂದೇಟು ಹಾಕುತ್ತಿದ್ದಾರೆ. ಮೂರು ಕಾರ್ಖಾನೆಗಳು ಮಾಡಿದ್ದೇ ಕಾನೂನು ಆಗುತ್ತಿದೆ. ಕಾರ್ಖಾನೆಗಳಿಗೆ ಲಗಾಮು ಹಾಕಲು ಜಿಲ್ಲಾಡಳಿತ ವಿಫಲವಾಗಿದೆ’ ಎಂದು ದೂರಿದರು.
‘ಬೆಳಗಾವಿ ಜಿಲ್ಲೆಯ ಕಬ್ಬಿಗೆ ಟನ್ಗೆ ₹3,300 ಕೊಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಮಾತ್ರ ಈ ದರ ಅನ್ವಯವಾಗುವುದಿಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹಾವೇರಿ ಜಿಲ್ಲೆಗೂ ₹ 3,300 ಬೆಲೆ ನೀಡುವಂತೆ ಈ ಧರಣಿ ಆರಂಭಿಸಲಾಗಿದೆ. ಬೇಡಿಕೆ ಈಡೇರಿಸುವವರೆಗೂ ಧರಣಿ ಮುಂದುವರಿಯಲಿದೆ’ ಎಂದು ಹೇಳಿದರು.
‘ಹಾವೇರಿ ಜಿಲ್ಲೆಯಲ್ಲಿರುವ ಜಿ.ಎಂ. ಶುಗರ್ ಆ್ಯಂಡ್ ಎನರ್ಜಿ ಕಂಪನಿ ಮತ್ತು ವಿ.ಐ.ಎನ್.ಪಿ ಡಿಸ್ಟಿಲರೀಸ್ ಮತ್ತು ಶುಗರ್ಸ್ ಕಂಪನಿಯ ಮೂರು ಕಾರ್ಖಾನೆಗಳಲ್ಲಿ ಸಕ್ಕರೆ ಇಳುವರಿ ಕಡಿಮೆ ತೋರಿಸಲಾಗುತ್ತಿದೆ. ಇಳುವರಿ ಪರೀಕ್ಷೆಯಲ್ಲೂ ರೈತರಿಗೆ ಮೋಸ ಆಗುತ್ತಿದೆ. ಈ ಮೋಸ ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ರೈತರು ಆಗ್ರಹಿಸಿದರು.
ಶಾಸಕ ಶ್ರೀನಿವಾಸ್ ಮಾನೆ, ಕಾಂಗ್ರೆಸ್ ಮುಖಂಡರಾದ ಸಂಜೀವಕುಮಾರ ನೀರಲಗಿ, ಆನಂದಸ್ವಾಮಿ ಗಡ್ಡದೇವರಮಠ ಹಾಗೂ ಇತರರು ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರ ಜೊತೆ ಮಾತುಕತೆ ನಡೆಸಿದರು.
ಹೆದ್ದಾರಿಯಲ್ಲಿ ವಾಹನ ತಡೆಗೆ ತೀರ್ಮಾನ: ಧರಣಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಮಾತುಕತೆ ಮೂಲಕ ಚರ್ಚಿಸಿ ತೀರ್ಮಾನ ಕೈಗೊಳ್ಳೋಣ ಎಂದಿದ್ದರು. ಆದರೆ, ಬೆಲೆ ನಿಗದಿಪಡಿಸುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ರೈತರು ಹೇಳಿದ್ದರು.
ಮಂಗಳವಾರವೂ ರೈತ ಮುಖಂಡರನ್ನು ಜಿಲ್ಲಾ ಎಸ್ಪಿ ಕಚೇರಿಗೆ ಆಹ್ವಾನಿಸಿದ್ದ ಜಿಲ್ಲಾಧಿಕಾರಿ, ಹಲವು ನಿಮಿಷ ಮಾತುಕತೆ ನಡೆಸಿದರು. ‘ಬೆಳಗಾರರಿಗೆ ಅನ್ಯಾಯ ಕೊಡಿಸಲು ಪ್ರಯತ್ನಿಸುತ್ತೇನೆ. ಹೆದ್ದಾರಿ ತಡೆ ತೀರ್ಮಾನವನ್ನು ಕೈಬಿಡಿ’ ಎಂದು ಕೋರಿದರು. ಅದಕ್ಕೆ ಒಪ್ಪದ ರೈತರು, ‘ಕಬ್ಬು ಬೆಲೆ ನಿಗದಿ ಮಾಡುವವರೆಗೂ ಧರಣಿ ಕೈ ಬಿಡುವುದಿಲ್ಲ. ಹೆದ್ದಾರಿಯಲ್ಲಿ ವಾಹನ ತಡೆಯುವುದು ನಿಶ್ಚಿತ’ ಎಂದು ಹೇಳಿ ಎಸ್ಪಿ ಕಚೇರಿಯಿಂದ ಹೊರಟುಹೋದರು.
‘ಹೊಲಕ್ಕೆ ಹೋದವನಲ್ಲ ರೈತರ ಕಷ್ಟ ಗೊತ್ತಿಲ್ಲ’
‘ನಾನು ಎಂದೂ ಹೊಲಕ್ಕೆ ಹೋದವನಲ್ಲ ಬಿತ್ತನೆ ಮಾಡಿದವನಲ್ಲ. ಅನುಭವ ಕೂಡ ಇಲ್ಲ. ನಿಮ್ಮ (ರೈತರ) ಕಷ್ಟ ಅನುಭವಿಸಿದವನೂ ನಾನಲ್ಲ. ಆದರೆ ಅಂತರಾಳದ ಮನದಿಂದ ಮಾತನಾಡುತ್ತೇನೆ. ನಾನು ಎಂದಿಗೂ ನಿಮ್ಮ ಪರ ಇದ್ದೇನೆ’ ಎಂದು ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ತಿಳಿಸಿದರು. ಕಬ್ಬು ಬೆಳೆಗಾರರು ಕೈಗೊಂಡಿರುವ ಧರಣಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಅವರು. ‘ಟನ್ ಕಬ್ಬಿಗೆ 3300 ಬೆಲೆ ನಿಗದಿ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿದೆ. ಅದನ್ನು ಜಿಲ್ಲಾಧಿಕಾರಿಯವರು ಕಟ್ಟುನಿಟ್ಟಾಗಿ ಜಾರಿಗೆ ತರಲಿದ್ದಾರೆ’ ಎಂದು ಭರವಸೆ ನೀಡಿದರು. ‘ಉತ್ತರ ಕರ್ನಾಟಕಕ್ಕೆ ಒಂದು ಬೆಲೆ. ಹಾವೇರಿ ಜಿಲ್ಲೆಗೆ ಒಂದು ಬೆಲೆ ಎಂಬುದು ಇಲ್ಲ. ಹಾವೇರಿ ಇರುವುದು ಸಹ ಉತ್ತರ ಕರ್ನಾಟಕದಲ್ಲಿ. ನಾನು ಎಂದಿಗೂ ರೈತರ ವಿರುದ್ಧವಿಲ್ಲ. ಒಳ್ಳೆಯದು ಮಾಡಲು ಆಗದಿದ್ದರೆ ಸುಮ್ಮನಿರುತ್ತೇನೆ. ಕೆಟ್ಟದಂತೂ ಮಾಡುವುದಿಲ್ಲ. ಕಬ್ಬಿನ ಬೆಲೆ ಬಗ್ಗೆ ರೈತರ ಪರವಾಗಿ ಮುಖ್ಯಮಂತ್ರಿಯವರಿಗೂ ಪತ್ರ ಬರೆದಿದ್ದೇನೆ’ ಎಂದರು. ‘ಬೆಲೆ ನಿಗದಿ ಒಂದೇ ವರ್ಷಕ್ಕೆ ಸೀಮಿತವಾಗಬಾರದು. ಪ್ರತಿ ವರ್ಷವೂ ಧರಣಿ ನಡೆಸುವ ಪ್ರಸಂಗ ಬರಬಾರದು. ಪ್ರತಿ ವರ್ಷವೂ ಬೆಲೆ ಏರಿಕೆಯಾಗಬೇಕು. ಸಹಕಾರ ಸಂಘ ನಡೆಸುವಾಗ ಶೇ 10.30 ಸಕ್ಕರೆ ಇಳುವರಿಯಿತ್ತು. ಈಗ ಶೇ 9.30 ಇಳುವರಿ ಏಕೆ ಎಂಬ ಪ್ರಶ್ನೆ ಮೂಡಿದೆ. ಸರ್ಕಾರವೇ ಲ್ಯಾಬ್ ಹಾಗೂ ತೂಕದ ಯಂತ್ರ ಹಾಕಿದರೆ ರೈತರೇ ನಂಬುವುದಿಲ್ಲ. ರೈತ ಉತ್ಪಾದಕ ಸಂಘಗಳಿದ್ದು ಅವುಗಳ ಮೂಲಕ ರೈತರೇ ಮುಂದೆ ಬಂದು ಲ್ಯಾಬ್ ಹಾಕುವ ಬಗ್ಗೆ ಚಿಂತನೆ ನಡೆಯಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.