
ತಿಳವಳ್ಳಿ: ಗ್ರಾಮದ ಇತಿಹಾಸ ಪ್ರಸಿದ್ಧ ಚೌಡೇಶ್ವರಿ ರಥೋತ್ಸವ ಭಕ್ತರ ಸಮ್ಮುಖದಲ್ಲಿ ಗುರುವಾರ ಅದ್ದೂರಿಯಾಗಿ ನೆರವೇರಿತು.
ದೇವಿಯ ಮಹಾರಥೋತ್ಸವದಲ್ಲಿ ತಿಳವಳ್ಳಿ, ಯತ್ತಿನಹಳ್ಳಿ, ಕೊಪ್ಪಗೊಂಡನಕೊಪ್ಪ, ಇನಾಂಲಕ್ಮಾಪುರ ಸೇರಿದಂತೆ ಸುತ್ತಲಿನ ಗ್ರಾಮದ ಜನರು ಭಾಗವಹಿಸಿದ್ದರು. ರಥೋತ್ಸವಕ್ಕೆ ತಿಳವಳ್ಳಿಯ ಮುರುಘರಾಜೇಂದ್ರ ಕಲ್ಮಠದ ಬಸವನಿರಂಜನ ಸ್ವಾಮೀಜಿ ಚಾಲನೆ ನೀಡಿದರು. ರಥಕ್ಕೆ ಭಕ್ತರು ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ಡೊಳ್ಳು, ಭಜನೆ, ಸಮ್ಮಾಳ, ಚಂಡಿ ಬಳಗ, ಕುದುರೆ ಕುಣಿತ, ನಂದಿಕೋಲು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಚೌಡೇಶ್ವರಿ ದೇವಸ್ಥಾನದಿಂದ ಆರಂಭವಾದ ರಥೋತ್ಸವ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೂಲ ಸ್ಥಳಕ್ಕೆ ಆಗಮಿಸಿತು. ಈ ವೇಳೆ ಯುವಕರು ಭಕ್ತರಿಗೆ ತಂಪು ಪಾನೀಯ ವಿತರಿಸಿದರು. ಮಧ್ಯಾಹ್ನ 2ಕ್ಕೆ ಅನ್ನ ಸಂತರ್ಪಣೆ ಜರುಗಿತು.
ಜಾತ್ರಾ ವಿಶೇಷತೆ: ಸಾಮಾನ್ಯವಾಗಿ ಎಲ್ಲ ಜಾತ್ರೆಗಳಲ್ಲಿ ರಥವನ್ನು ಹಗ್ಗದ ಸಹಾಯದಿಂದ ಎಳೆಯುತ್ತಾರೆ. ಆದರೆ, ಚೌಡೇಶ್ವರಿ ದೇವಿಯ 11 ಅಂಕಣದ ರಥವನ್ನು ಭಕ್ತರು ಗಾಲಿಗಳನ್ನು ಕೈಗಳ ಸಹಾಯದಿಂದ ಉರುಳಿಸುವುದು ಈ ಜಾತ್ರೆಯ ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.