ADVERTISEMENT

ತಿಳವಳ್ಳಿ: ಕೆಲಸ ಹುಡುಕಿಕೊಂಡು ಚಿಕ್ಕಮಗಳೂರಿಗೆ ಹೋಗಿದ್ದವ ಆನೆ ದಾಳಿಗೆ ಬಲಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 6:54 IST
Last Updated 17 ಫೆಬ್ರುವರಿ 2026, 6:54 IST
ತಿಳವಳ್ಳಿಯ ಯಲ್ಲಪ್ಪ ಶೇಖಪ್ಪ ಮಾರೇಕ್ಕನವರ ಮೃತ ವ್ಯಕ್ತಿ.
ತಿಳವಳ್ಳಿಯ ಯಲ್ಲಪ್ಪ ಶೇಖಪ್ಪ ಮಾರೇಕ್ಕನವರ ಮೃತ ವ್ಯಕ್ತಿ.   

ತಿಳವಳ್ಳಿ: ಕೆಲಸ ಅರಸಿಕೊಂಡು ಚಿಕ್ಕಮಗಳೂರು ಜಿಲ್ಲೆಯ ಕಾಫಿತೋಟಕ್ಕೆ ಹೋಗಿದ್ದ ಗ್ರಾಮದ ನಿವಾಸಿ ಯಲ್ಲಪ್ಪ ಶೇಖಪ್ಪ ಮಾರೇಕ್ಕನವರ ಆನೆ ತುಳಿದು ಮೃತಪಟ್ಟಿದ್ದು, ಇವರನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬ ಕಣ್ಣೀರಿಡುತ್ತಿದೆ.

ಬಾಳೆಹೊನ್ನೂರು ಸಮೀಪದ ಹುಣಸಿಹಳ್ಳಿ ಗ್ರಾಮದ ಕಾಪಿ ತೋಟದಲ್ಲಿ ಆನೆ ತುಳಿದು ಯಲ್ಲಪ್ಪ ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆಯನ್ನು ತಿಳವಳ್ಳಿಯಲ್ಲಿ ಸೋಮವಾರ ನಡೆಸಲಾಯಿತು.

ಭಾನುವಾರ ಬೆಳಿಗ್ಗೆಯಷ್ಟೇ ಹುಣಸಿಹಳ್ಳಿಗೆ ಹೋಗಿದ್ದ ಯಲ್ಲಪ್ಪ, ಒಂದೇ ದಿನದಲ್ಲಿ ಶವವಾಗಿ ವಾಪಸು ಬಂದಿದ್ದು ನೋಡಿ ಕುಟುಂಬಸ್ಥರು–ಸ್ನೇಹಿತರು ಕಣ್ಣೀರಿಟ್ಟರು. 

ADVERTISEMENT

‘ಗಾರೆ ಕೆಲಸ ಮಾಡಿಕೊಂಡು ಯಲ್ಲಪ್ಪ ಜೀವನ ನಡೆಸುತ್ತಿದ್ದರು. ಪತ್ನಿ ಹಾಗೂ ಮಕ್ಕಳಿಬ್ಬರ ಜೊತೆ ವಾಸವಿದ್ದರು. ಅವರ ಕೆಲಸವೇ ಕುಟುಂಬಕ್ಕೆ ಆಧಾರವಾಗಿತ್ತು. ಹುಣಸಿಹಳ್ಳಿ ಗ್ರಾಮದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಯಲ್ಲಪ್ಪ, ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ತಂದೆ–ತಾಯಿಯನ್ನು ನೋಡಿಕೊಳ್ಳಲು ಗ್ರಾಮಕ್ಕೆ ಬಂದಿದ್ದರು. ಭಾನುವಾರ ಬೆಳಿಗ್ಗೆ ಮತ್ತೆ ಹುಣಸಿಹಳ್ಳಿಗೆ ತೆರಳಿದ್ದರು’ ಎಂದು ಕುಟುಂಬದವರು ಹೇಳಿದರು.  

ತಿಳವಳ್ಳಿ  ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಲವರು, ಜೀವನೋಪಾಯಕ್ಕಾಗಿ ದುಡಿಯಲು ಕಾಫಿಸೀಮೆ ಚಿಕ್ಕಮಗಳೂರಿಗೆ ಹೋಗಿ ಬರುತ್ತಾರೆ. ಸ್ಥಳೀಯವಾಗಿ ಉದ್ಯೋಗಗಳ ಕೊರತೆ ಇರುವುದೇ ಇದಕ್ಕೆ ಕಾರಣ. ಈಗ ಮೃತಪಟ್ಟಿರುವ ಯಲ್ಲಪ್ಪ  ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.